``ಆ ರಕ್ಷಣಾ ಜಾಕೆಟ್ಟನ್ನು ಧರಿಸಿಕೊಂಡರೆ ಥೇಟು ಗಗನಯಾತ್ರಿಯಂತೆ ನೀನು ಕಾಣುತ್ತೀ'', ಎಂದು ಮುನಿಸಿಪಲ್ ಅಧಿಕಾರಿಯೊಬ್ಬರು ಅರವತ್ತರ ಪ್ರಾಯದ ಮಣಿಗೆ ಹೇಳಿದ್ದರಂತೆ. ಅಂದಹಾಗೆ ಮಣಿ ಕೊಯಮತ್ತೂರು ಪುರಸಭಾ ನಿಗಮದಲ್ಲಿ ದುಡಿಯುತ್ತಿರುವ ಒಬ್ಬ ಕೆಲಸಗಾರ. ಬ್ಲಾಕ್ ಆಗಿರುವ ಒಳಚರಂಡಿಗಳಿಗೆ ಮತ್ತು ಮೋರಿಗಳಿಗೆ ಇಳಿದು ಅವುಗಳನ್ನು ಸ್ವಚ್ಛಗೊಳಿಸುವ ಕೆಲಸ ಆತನದ್ದು. ``ಸರ್, ಮೊದಲು ನೀವೇ ಒಮ್ಮೆ ಧರಿಸಿ ನೋಡಿ. ನಂತರ ನಾನು ಕೂಡ ಅದನ್ನೇ ತೊಟ್ಟುಕೊಳ್ಳುವೆ'', ಎಂದು ಆ ಅಧಿಕಾರಿಯ ವ್ಯಂಗ್ಯದ ಮಾತಿಗೆ ವಿನಯದಿಂದಲೇ ಪ್ರತಿಕ್ರಯಿಸಿದ್ದ ಮಣಿ.
``ಭಾರತದಲ್ಲಿ ಯಾವ ಅಧಿಕಾರಿಯಾದರೂ ರಕ್ಷಣಾ ಜಾಕೆಟ್ಟುಗಳನ್ನು ಮತ್ತು ಆಮ್ಲಜನಕದ ಮಾಸ್ಕ್ ಗಳನ್ನು ಬಳಸಲು ನಮ್ಮಂಥವರಿಗೆ ಹೇಳಿದನೆಂದರೆ ಒಂದೋ ಆತನಿಗೆ ಈ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ಕಿಂಚಿತ್ತು ಜ್ಞಾನವೂ ಇರುವುದಿಲ್ಲ ಅಥವಾ ಸುಮ್ಮನೆ ಬಾಯಿಮಾತಿಗಷ್ಟೇ ಹಾಗೆಂದು ಹೇಳಿಕೊಂಡಿರುತ್ತಾನೆ. ಏಕೆಂದರೆ ಅವುಗಳನ್ನು ಧರಿಸಿ ಇಳಿಯೋಣವೆಂದರೆ ಚರಂಡಿಗಳಲ್ಲಿ ಕೈಕಾಲುಗಳನ್ನಾಡಿಸಲು ಅಷ್ಟು ಸ್ಥಳಾವಕಾಶವೇ ಇರುವುದಿಲ್ಲ. ಅಲ್ಲಿ ಸಿಗುವ ಒಂದಿಷ್ಟು ಜಾಗದಲ್ಲಿ ಒಳಚಡ್ಡಿಯನ್ನುಟ್ಟುಕೊಂಡು ಇಳಿಯಲು ಮತ್ತು ಕೊಂಚ ಕೆಲಸ ಮಾಡಲು ಮಾತ್ರ ಸಾಧ್ಯ. ಅಷ್ಟಕ್ಕೂ ಇವರೆಲ್ಲಾ ನಮಗೆ ಟೋಪಿ ಹಾಕುವವರೇ. ಯಾರಿಗೂ ನಮ್ಮ ಬಗ್ಗೆ ಕಾಳಜಿಯೇ ಇಲ್ಲ. ಯಾಕೆಂದರೆ ಮಲಮೂತ್ರಗಳ ಕೊಳಚೆಗೆ ಬೀಳುವುದು ನಮ್ಮ ದೇಹವಲ್ಲವೇ? ನಾವು ಈ ಜಾತಿಯಲ್ಲಿ ಹುಟ್ಟಿದ ತಪ್ಪಿಗೆ ಇವೆಲ್ಲವನ್ನೂ ಮಾಡಲೇಬೇಕು ಎಂಬ ಪೊಗರು ಅವರದ್ದು'', ತನ್ನನ್ನು ತಾನು ಮಣಿ ಎಂಬ ಪುಟ್ಟ ನಾಮಧೇಯದೊಂದಿಗೆ ಕರೆದುಕೊಳ್ಳುವ ವೃದ್ಧ ಕೆಲಸಗಾರ ಹೇಳುತ್ತಾನೆ.
ಆದರೂ ಮಣಿಗೆ ತನ್ನ ವೃತ್ತಿಯ ಬಗ್ಗೆ ಒಂದು ಅಭಿಮಾನವಿದೆ. ತನ್ನ ಹಲವಾರು ವರ್ಷಗಳ ಅನುಭವವನ್ನು ಆತ ಇತರ ಕೆಲಸಗಾರರನ್ನು ತರಬೇತುಗೊಳಿಸಲೂ ಬಳಸುತ್ತಾನೆ. ಚರಂಡಿಗಳಲ್ಲಿ ಇಳಿಯುವುದರಿಂದ ಹಿಡಿದು ವಿಷಾನಿಲಗಳನ್ನು ಹೇಗೆ ನಿಭಾಯಿಸಬಹುದು ಎಂಬ ವೃತ್ತಿಯ ಸೂಕ್ಷ್ಮವಿದ್ಯೆಗಳನ್ನು ಆತ ಅವರಿಗೆ ಕಲಿಸುತ್ತಾನೆ. ``ಎಲ್ಲರೂ ನಮಗೆ ಪಾಠ ಹೇಳಲು ಬರುವವರೇ. ಆದರೆ ಅಸಲಿ ಪರಿಸ್ಥಿತಿಯು ಹೇಗಿದೆಯೆಂದು ನಮಗಷ್ಟೇ ಗೊತ್ತು. ನಮ್ಮಂತಹ ಕೆಲಸಗಾರರ ಮೃತ್ಯುಗಳನ್ನು ತಡೆಯಬೇಕಾದರೆ ಒಳಚರಂಡಿ ವ್ಯವಸ್ಥೆಯನ್ನು ಸರಕಾರವು ಆಧುನೀಕರಣಗೊಳಿಸಲೇ ಬೇಕು. ಬೇರೆಲ್ಲಾ ಮಾತುಗಳು ಸುಮ್ಮನೆ ಕಣ್ಣಿಗೆ ಮಣ್ಣೆರಚುವ ತಂತ್ರಗಳಷ್ಟೇ'', ಎನ್ನುತ್ತಾನೆ ಆತ.
ಮಣಿ ಚಿಕ್ಕವನಿದ್ದಾಗ ಆತನ ತಂದೆ ಸುಬ್ಬನ್ ಮತ್ತು ತಾಯಿ ಪೊನ್ನಿ ಕೊಯಮತ್ತೂರಿನ ಆಸ್ಪತ್ರೆಯೊಂದರಲ್ಲಿ ಸ್ವಚ್ಛತಾ ಕೆಲಸಗಾರರಾಗಿ ದುಡಿಯುತ್ತಿದ್ದರಂತೆ. ``ಆ ದಿನಗಳಲ್ಲಿ ಆಸ್ಪತ್ರೆಯ ಆವರಣದಲ್ಲೇ ನಾವು ನೆಲೆಸಿದ್ದೆವು. ಶಾಲೆ ಮುಗಿಸಿದ ನಂತರ ಆಸ್ಪತ್ರೆಗೆ ತೆರಳಿ ಕ್ಷಕಿರಣ, ಇ.ಸಿ.ಜಿ, ಪೋಸ್ಟ್ ಮಾರ್ಟಮ್ ಗಳಂತಹ ಚಟುವಟಿಕೆಯಲ್ಲಿ ನಾನು ಅಲ್ಲಿಯ ಸಿಬ್ಬಂದಿಗಳಿಗೆ ನೆರವಾಗುತ್ತಿದ್ದೆ. ಅದು ಅರವತ್ತರ ದಶಕದ ಮಾತು... ಆಗ ದಿನವೊಂದಕ್ಕೆ ಐದರಿಂದ ಹತ್ತು ಪೈಸೆಯನ್ನು ಈ ಕೆಲಸಕ್ಕಾಗಿ ನನಗೆ ಕೊಡುತ್ತಿದ್ದರು. ಎಂಟನೇ ತರಗತಿಗೆ ನನ್ನ ವಿದ್ಯಾಭ್ಯಾಸವು ನಿಂತುಹೋಯಿತು. ನಂತರ ನಾನು ಹೊಟ್ಟೆಪಾಡಿಗಾಗಿ ಈ ಕೆಲಸವನ್ನು ಮಾಡತೊಡಗಿದೆ'', ಎಂದು ತನ್ನ ನೆನಪಿನ ಬುತ್ತಿಯನ್ನು ಬಿಚ್ಚುತ್ತಾನೆ ಮಣಿ.
ಅಸಲಿಗೆ ಮಣಿ ಚಕ್ಲಿಯಾರ್ ಜಾತಿಗೆ ಸೇರಿದವನು. ಆತನೊಬ್ಬ ದಲಿತ. ಶಾಲೆಯಲ್ಲಿ ಶಿಕ್ಷಕರು ಮತ್ತು ಸಹಪಾಠಿಗಳು ಸದಾ ಇವನನ್ನು `ತೋಟಿ' ಎಂಬ ಹೆಸರಿನಲ್ಲಿ ತಮಾಷೆ ಮಾಡುತ್ತಿದ್ದ ಕಾರಣದಿಂದ ಬೇಸತ್ತ ಮಣಿ ಶಾಲೆಯನ್ನೇ ಬಿಟ್ಟಿದ್ದ (`ತೋಟಿ' ಎಂಬುದು ಈ ವೃತ್ತಿಯನ್ನು ಅವಲಂಬಿಸಿರುವ ಕೆಳಜಾತಿಯವರನ್ನು ಹಂಗಿಸಲು ಕರೆಯಲಾಗುವ ಒಂದು ಕೀಳುಮಟ್ಟದ ಪದ). ತರಗತಿಯಲ್ಲಿ ಅವನನ್ನು ಪ್ರತ್ಯೇಕವಾಗಿ ಕುಳ್ಳಿರಿಸಲಾಗುತ್ತಿತ್ತಂತೆ. ``ನಾನು ಕೊಳಚೆಗುಂಡಿಗಳನ್ನು ಶುದ್ಧಪಡಿಸುವ ಕೆಲಸದಲ್ಲಿ ತೊಡಗಿದ್ದರಿಂದ ಶಾಲೆಯಲ್ಲಿ ಎಲ್ಲರೂ ನನ್ನನ್ನು ಕೆಟ್ಟದಾಗಿ ಹೀಗಳೆಯುತ್ತಿದ್ದರು. ನನ್ನ ಶಿಕ್ಷಕರಂತೂ ನನ್ನನ್ನು ಇತರರಿಂದ ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ಮಾಡುತ್ತಿದ್ದರು'', ಎನ್ನುತ್ತಾನೆ ಮಣಿ.
ಅಂದಹಾಗೆ ಜಿಲ್ಲಾ ಶಿಕ್ಷಣ ಕಚೇರಿಯಲ್ಲಿ ಕಸ ಗುಡಿಸುವ ಕೆಲಸವನ್ನು ಮಾಡುತ್ತಿರುವ ಮಣಿಯ ಪತ್ನಿ ನಾಗಮ್ಮ ತಿಂಗಳಿಗೆ ಹದಿನೈದು ಸಾವಿರದಷ್ಟು ದುಡಿಯುತ್ತಾಳೆ. ಆಕೆಯ ತಂದೆ ನೆಸಯ್ಯರ್ ಮತ್ತು ತಾಯಿ ಕಿರುಬ ಕೂಡ ಇದೇ ವೃತ್ತಿಯಲ್ಲಿದ್ದರಂತೆ. ``ನಾನು ಆರನೇ ತರಗತಿಯವರೆಗೆ ಸೈಂಟ್ ಮೇರೀಸ್ ನಲ್ಲಿ ಓದಿದೆ. ಅದೊಂದು ಮಿಷನರಿಗಳ ಶಾಲೆಯಾಗಿದ್ದರಿಂದ ಅಲ್ಲೇನೂ ನನಗೆ ಸಮಸ್ಯೆಗಳಿರಲಿಲ್ಲ. ಆದರೆ ಹೊರಜಗತ್ತಿಗೆ ಮಾತ್ರ ನಾನು ಅಸ್ಪøಶ್ಯರಿಗಿಂತ ಕಡೆಯಾಗಿದ್ದೆ. ನಾನು ಕ್ರೈಸ್ತಳಾಗಿದ್ದರಿಂದ ನನಗೆ ಮೀಸಲಾತಿಯು ಸಿಗಲಿಲ್ಲ. ಹೀಗಾಗಿ ಪುರಸಭೆಯಲ್ಲಿ ಸಿಗಬಹುದಾದ ಉದ್ಯೋಗವೂ ಕೈತಪ್ಪಿಹೋಯಿತು. ಆದರೆ ಬಹಳ ಚಿಕ್ಕ ವಯಸ್ಸಿನಲ್ಲೇ ವಿವಾಹವಾದ ನಾನು ಎಮ್. ನಾಗಮ್ಮ ಆಗಿದ್ದೆ. ಹಿಂದೂ ಹೆಸರಿದ್ದ ಒಂದೇ ಒಂದು ಕಾರಣದಿಂದ ಈ (ಕಸಗುಡಿಸುವ) ಸರಕಾರಿ ಉದ್ಯೋಗವು ನನಗೆ ಸಿಕ್ಕಿತು'', ಎನ್ನುತ್ತಾರೆ ನಾಗಮ್ಮ. 2020 ರಲ್ಲಿ ನಿವೃತ್ತಿಯಾಗಲಿರುವ ಆಕೆ ಕಳೆದ ಮೂವತ್ತು ವರ್ಷಗಳಿಂದ ಇದೇ ವೃತ್ತಿಯಲ್ಲಿದ್ದಾರೆ.
ಇತ್ತ ಮಣಿ ಕೂಡ ತನ್ನ ಇಪ್ಪತ್ತೇಳನೇ ವಯಸ್ಸಿನಿಂದ ಇದೇ ವೃತ್ತಿಯಲ್ಲಿದ್ದು ಸದ್ಯ ತಿಂಗಳಿಗೆ 16000 ರೂಪಾಯಿಗಳಷ್ಟು ಸಂಪಾದಿಸುತ್ತಿದ್ದಾನೆ. ಅದಕ್ಕಿಂತಲೂ ಮುನ್ನ ಆತ ಗುತ್ತಿಗೆ ಕಾರ್ಮಿಕನಾಗಿ ದುಡಿಯುತ್ತಿದ್ದನಂತೆ. ``ಕಳೆದ ಹಲವು ವರ್ಷಗಳಿಂದ ನನ್ನೀ ದೇಹವು ಈ ಮಲಮೂತ್ರ, ಕೊಳಚೆಗಳಿಗೆ ಒಗ್ಗಿಕೊಂಡಿದೆ. ಆದರೆ ನನ್ನ ಆರಂಭದ ದಿನಗಳು ನನಗಿನ್ನೂ ನೆನಪಿವೆ. ಆಗ ಧರಿಸಿದ್ದ ಬಟ್ಟೆಗಳನ್ನು ಬಿಚ್ಚಿ ಕೇವಲ ಒಳಚಡ್ಡಿಯಲ್ಲಿ ಚರಂಡಿಗಿಳಿಯಲು ನಾನು ಅದೆಷ್ಟು ಕಷ್ಟಪಡುತ್ತಿದ್ದೆ! ಸುಮಾರು ಒಂದು ವರ್ಷ ನಾಚಿಕೆಯಿಂದಲೇ ನಾನು ಕುಗ್ಗಿಹೋಗಿದ್ದೆ. ತುಂಬಿದ ಬೀದಿಯಲ್ಲಿ ನಗ್ನವಾಗಿ ನಿಂತಿರುವಂತಿನ ಭಾವವು ನನ್ನಲ್ಲಿ ಮೂಡುತ್ತಿತ್ತು. ಆದರೆ ಕಾಲ ಮತ್ತು ಪ್ರತಿಕೂಲ ಪರಿಸ್ಥಿತಿಗಳು ಎಲ್ಲವನ್ನೂ ಕಲಿಸಿಬಿಡುತ್ತವೆ. ನಮ್ಮ ಜಾತಿ ನಮ್ಮ ಭಾಗ್ಯವನ್ನೇ ಹೊತ್ತು ತಂದಿದೆ. ಹಣೆಬರಹವಾಗಿ ಬರೆಸಿದೆ. `ತೋಟಿ'ಯಾಗಿ ಹುಟ್ಟಿರುವ ಪ್ರತಿಯೊಬ್ಬನೂ ಸಾಯುವವರೆಗೂ ಮತ್ತೊಬ್ಬನ ಮಲವನ್ನೇ ಹೊರಬೇಕು. ಸಮಾಜವೂ ನಮ್ಮನ್ನು ಈ ಕೂಪಕ್ಕೇ ದೂಡುತ್ತದೆ. ಈ ನರಕದಿಂದ ಪಾರಾಗಲು ಆತ್ಮವಿಶ್ವಾಸ, ಕುಟುಂಬದ ಸದಸ್ಯರ ಸಹಕಾರ ಹೀಗೆ ಎಲ್ಲವೂ ಬೇಕಾಗುತ್ತದೆ. ನಮಗಂತೂ ಈ ಭಾಗ್ಯವು ದಕ್ಕಲಿಲ್ಲ. ಆದರೆ ಕನಿಷ್ಠಪಕ್ಷ ನಮ್ಮ ಮಕ್ಕಳಿಗಾದರೂ ನಾವು ಹೊಸ ದಾರಿಗಳನ್ನು ನಿರ್ಮಿಸಿಕೊಟ್ಟಿದ್ದೇವೆ'', ಎಂದು ಹೇಳುತ್ತಲೇ ಇದ್ದಾನೆ ಮಣಿ.
ತಮ್ಮ ಪೀಳಿಗೆಯೊಂದಿಗೇ ಈ ಜಾತಿಯಾಧಾರಿತ ವೃತ್ತಿಯು ಕೊನೆಯಾಗಬಹುದು ಎಂಬ ಆಸೆ ಮಣಿ ಮತ್ತು ನಾಗಮ್ಮರದ್ದು. ಈ ಭೇದಭಾವಗಳು ತಮ್ಮ ಮಕ್ಕಳ ಪಾಲಿಗೂ ಬರುವುದು ಅವರಿಗಿಷ್ಟವಿಲ್ಲ. ಅದನ್ನು ನೋಡಲು ಅವರು ಶಕ್ತರೂ ಅಲ್ಲ. ``ನನಗಿರುವುದು ಒಂದೇ ಕನಸು. ಅದೇನೆಂದರೆ ನಮ್ಮ ಮಕ್ಕಳು ಈ ಮಲಮೂತ್ರಗಳಿಂದ, ಅಪಾಯಕಾರಿ ವಿಷಾನಿಲಗಳಿಂದ ದೂರವಿರಬೇಕು. ನನ್ನ ಮತ್ತು ನನ್ನ ಪತ್ನಿಯ ಜೀವನವಿಡೀ ಈ ಕನಸನ್ನು ಸಾಕಾರಗೊಳಿಸುವುದರಲ್ಲೇ ಕಳೆದುಹೋಯಿತು'', ಎನ್ನುತ್ತಾನೆ ಮಣಿ. ಮಣಿ-ನಾಗಮ್ಮ ದಂಪತಿಗಳ ಮಗಳು ತುಳಸಿ ವಿವಾಹಿತೆಯೂ, ಜವಳಿ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕಿಯಾಗಿಯೂ
ಆಗಿದ್ದಾರೆ. ಇನ್ನು ಮಗನಾದ ಮೂರ್ತಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ.

