"ಗಟಾರವು ಸುಮಾರು 20 ಅಡಿ ಆಳವಿತ್ತು. ಮೊದಲು ಪರೇಶ್ ಒಳಗೆ ಹೋದನು. ಅವನು ಎರಡು ಅಥವಾ ಮೂರು ಬಕೆಟ್ ತ್ಯಾಜ್ಯವನ್ನು ಹೊರತೆಗೆದ; ನಂತರ ಅವನು ಮೇಲೆ ಬಂದು, ಸ್ವಲ್ಪ ಹೊತ್ತು ಕುಳಿತು ಮತ್ತೆ ಒಳಗೆ ಹೋದ. ಅವನು ಒಳಗೆ ಹೋದ ಕೂಡಲೇ ಕಿರುಚಿದ...
"ಏನಾಯಿತೆನನುವುದು ನಮಗೆ ತಿಳಿದಿರಲಿಲ್ಲ, ಕೊನೆಗೆ ಗಲ್ಸಿಂಗ್ ಭಾಯ್ ಒಳಗೆ ಹೋದರು. ಆದರೆ ಅಲ್ಲಿ ಮೌನ ಆವರಿಸಿತು. ನಂತರ, ಅನಿಪ್ ಭಾಯ್ ಮುಂದೆ ಹೋದರು. ಆದರೂ, ಒಳಗಿರುವ ಮೂವರಲ್ಲಿ ಯಾರೂ ಶಬ್ದ ಮಾಡಲಿಲ್ಲ. ಅವರು ಹಗ್ಗ ಕಟ್ಟಿ ನನ್ನನ್ನು ಒಳಗೆ ಕಳುಹಿಸಿದರು. ನನ್ನನ್ನು ಯಾರೋ ಒಬ್ಬರ ಕೈ ಹಿಡಿಯುವಂತೆ ಮಾಡಲಾಯಿತು; ಅದು ಯಾರ ಕೈ ಎನ್ನುವುದು ನನಗೆ ಖಚಿತವಿಲ್ಲ. ಆದರೆ ನಾನು ಅದನ್ನು ಗ್ರಹಿಸಿದ ನಂತರ, ಅವರು ನನ್ನನ್ನು ಮೇಲಕ್ಕೆ ಎಳೆಯಲು ಪ್ರಯತ್ನಿಸಿದರು ಆಗ ನಾನು ಪ್ರಜ್ಞಾಹೀನನಾದೆ" ಎನ್ನುವ ಭಾವೇಶ್ ಉಸಿರಾಡುವುದನ್ನು ಮರೆತು ಮಾತನಾಡುತ್ತಿದ್ದರು.
ನಾವು ಭವೇಶ್ ಅವರನ್ನು ಭೇಟಿಯಾದಾಗ, ಅವರು ತಮ್ಮ ಸಹೋದರ ಪರೇಶ್ ಮತ್ತು ಇತರ ಇಬ್ಬರು ಕಾರ್ಮಿಕರನ್ನು ಕಣ್ಣ ಮುಂದೆಯೇ ಕಳೆದುಕೊಂಡು ಒಂದು ವಾರವಾಗಿತ್ತು. ಆ ದುರಂತದ ವಿವರಗಳನ್ನು ನೆನಪಿಸಿಕೊಳ್ಳುತ್ತಾ ನೋವಿನಿಂದ ಬಳಲುತ್ತಿದ್ದಾರೆ. ಮತ್ತು ಸ್ಪಷ್ಟವಾಗಿ ದುಃಖ ಮತ್ತು ಖಿನ್ನತೆಯ ಧ್ವನಿಯಲ್ಲಿ ಮಾತನಾಡುತ್ತಾರೆ.
ಗುಜರಾತಿನ ದಾಹೋದ್ ಜಿಲ್ಲೆಯ ಖರ್ಸಾನಾ ಗ್ರಾಮದ 20 ವರ್ಷದ ಭವೇಶ್ ಕಟಾರಾ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಭರೂಚ್ ಜಿಲ್ಲೆಯ ದಹೇಜ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿಷಕಾರಿ ಒಳಚರಂಡಿ ಚೇಂಬರ್ ಸ್ವಚ್ಛಗೊಳಿಸುತ್ತಿದ್ದ ಐವರು ಆದಿವಾಸಿಗಳಲ್ಲಿ ವಿಪತ್ತಿನಲ್ಲಿ ಜೀವಂತವಾಗಿ ಹೊರಬಂದ ಇಬ್ಬರಲ್ಲಿ ಅವರು ಒಬ್ಬರಾಗಿದ್ದರು. ಬದುಕುಳಿದ ಇನ್ನೊಬ್ಬ ವ್ಯಕ್ತಿ 18 ವರ್ಷದ ಜಿಗ್ನೇಶ್ ಪರ್ಮಾರ್, ದಾಹೋದ್ನ ಬಾಲೆಂಡಿಯಾ-ಪೇಠಾಪುರದವರು.
ಜಿಗ್ನೇಶ್ ಊರಿನವರಾದ 20 ವರ್ಷದ ಅನಿಪ್ ಪರ್ಮಾರ್ ಅವರೊಂದಿಗೆ ಕೆಲಸ ಮಾಡುತ್ತಿದ್ದರು; ದಾಹೋದ್ ದಾಂಟ್ಗಡ್-ಚಕಾಲಿಯಾ ಮೂಲದ 25 ವರ್ಷದ ಗಲ್ಸಿಂಗ್ ಮುನಿಯಾ; ಮತ್ತು 24 ವರ್ಷದ ಪರೇಶ್ ಕಟಾರಾ ತನ್ನ ಸಹೋದರ ಭಾವೇಶ್ ಅವರಂತೆಯೇ ಅದೇ ಊರಿನವರು. ಈ ಮೂವರು ಒಳಚರಂಡಿಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. [ಇಲ್ಲಿ ಉಲ್ಲೇಖಿಸಲಾದ ವಯಸ್ಸನ್ನು ಅವರ ಆಧಾರ್ ಕಾರ್ಡುಗಳಿಂದ ತೆಗೆದುಕೊಳ್ಳಲಾಗಿದೆ ಮತ್ತು ಅವುಗಳನ್ನು ಅನಿಶ್ಚಿತ ಅಂದಾಜುಗಳೆಂದು ಪರಿಗಣಿಸಬೇಕಾಗುತ್ತದೆ. ಕೆಳಮಟ್ಟದ ಅಧಿಕಾರಿಗಳು ತಮಗೆ ತೋಚಿದಂತೆ ವಯಸ್ಸನ್ನು ದಾಖಲಿಸುತ್ತಾರೆ.]





















