ರಾಮ ಅಡೆಲ್ಲು ಗಂದೇವಾಡರ ಮನಸ್ಸು ಆತಂಕಗೊಂಡಿದೆ, ಕದಡಿ ಹೋಗಿದೆ, ಅದೇಕೆಂದು ಅವರಿಗೆ ಗೊತ್ತು. ಕೋವಿಡ್- 19ರ ಯಮಸ್ವರೂಪಿ ಎರಡನೇ ಅಲೆಯ ತೀವ್ರತೆ ಕಡಿಮೆಯಾದರೂ, ಅದರ ಕರಿನೆನಪುಗಳನ್ನು ಮರೆಯಲಾಗುತ್ತಿಲ್ಲ. “ಈಗ ಸ್ವಲ್ಪ ದಿನಗಳಿಂದ ಸ್ಮಶಾನ ಸ್ವಲ್ಪ ವಿಶ್ರಾಂತವಾಗಿದೆ. ಆದರೆ ಮೂರನೆ ಅಲೆ ಬಂದರೆ ಏನು ಗತಿ? ಮತ್ತೆ ಆ ವಿನಾಶಕಾರಿ ಗಂಡಾಂತರವನ್ನು ಎದುರಿಸಲು ನನ್ನ ಕೈಲಿ ಸಾಧ್ಯವಿಲ್ಲ’ ಎಂದು ಹೇಳಿದರು.
ಮಹಾರಾಷ್ಟ್ರದ ಉಸ್ಮಾನಾಬಾದ್ ನಗರದಲ್ಲಿನ ಕಪಿಲಧರ ಸ್ಮಶಾನ ಭೂಮಿಯಲ್ಲಿ 60ರ ಪ್ರಾಯದ ರಾಮ ಅವರು ಕೆಲಸ ಮಾಡುವರು. ಸ್ಮಶಾನದ ಆವರಣದಲ್ಲಿಯೇ ತನ್ನ ಕುಟುಂಬದೊಂದಿಗೆ: ಅವರ ತಾಯಿ ಆದಿಲಬಾಯಿ (78 ವ); ಹೆಂಡತಿ ಲಕ್ಷ್ಮಿ (40 ವ) ಮತ್ತು ಅವರ ನಾಲ್ಕು ಹೆಣ್ಣು ಮಕ್ಕಳಾದ ರಾಧಿಕಾ, 18, ಮನಿಷಾ, 12 ಮತ್ತು ಸತ್ಯಶೀಲ, 10, ಮತ್ತು ಸಾರಿಕಾ, 3, ವಾಸವಾಗಿದ್ದಾರೆ. ರಾಧಿಕಾರ 22 ರ ಹರೆಯದ ಗಂಡ, ಗಣೇಶ ಕೂಡ ಅವರೊದಿಗಿದ್ದಾರೆ.
ಸ್ಮಶಾನ ನಿರ್ವಹಿಸುವುದೇ ರಾಮಾರವರ ಕೆಲಸ. “ನಾನು ಹೆಣಗಳಿಗೆ ಚಿತೆ ಸಿದ್ದ ಮಾಡುವುದು, ಹೆಣ ಸುಟ್ಟ ಮೇಲೆ ಉಳಿದ ಬೂದಿಯನ್ನು ತೆಗೆದು ಹಾಕುವುದು ಮುಂತಾದ ಕೆಲಸ ಮಾಡುತ್ತೇನೆ. ತಿಂಗಳಿಗೆ ನಗರಸಭೆಯಿಂದ (ಉಸ್ಮಾನಾಬಾದ್) ರೂ. 5000 ಕೊಡುತ್ತಾರೆ.” ಎಂದರು ರಾಮಾರವರು. ಗಣೇಶರಚರು ಸಹ ಈ ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ. ಈ ಈರ್ವರ ದುಡಿಮೆಯ ಹಣವೇ ಕುಟುಂಬದ ವರಮಾನದ ಒಂದೇ ಒಂದು ಮೂಲ”
ರಾಮಾರವರು ಮತ್ತು ಅವರ ಕುಟುಂಬ ಸುಮಾರು 12 ವರ್ಷಗಳ ಕೆಳಗೆ ಉಸ್ಮಾನಾಬಾದ್ ನಗರದಿಂದ 200 ಕಿಮೀ ದೂರದ ನಾಂದೇಡದಿಂದ ಬಂದವರು. ಇವರು ಮಹಾರಾಷ್ಟ್ರದಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯವೆಂದು ಗುರುತಿಸಲ್ಪಟ್ಟ ಮಸಣಜೋಗಿ ಸಮುದಾಯಕ್ಕೆ ಸೇರಿದವರು. ಮಸಣಜೋಗಿಗಳ ಕುಲಕಸುಬು ಸ್ಮಶಾನದಲ್ಲಿ ಕೆಲಸ ಮಾಡುವುದು ಮತ್ತು ಭಿಕ್ಷೆ ಬೇಡುವುದು. ಗಂದೇವಾಡ ಜನರಂತೆ ಕೆಲವು ಕುಟುಂಬಗಳು ಸ್ಮಶಾನಗಳಲ್ಲಿಯೇ ವಾಸಿಸುತ್ತಾರೆ.









