ಜುಲೈ 2021ರಲ್ಲಿ ಪ್ರವಾಹದ ನೀರು ನುಗ್ಗಿದ ಸಂದರ್ಭದಲ್ಲಿ ಶುಭಾಂಗಿ ಕಾಂಬ್ಳೆಯವರು ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಅಲ್ಲೇ ಬಿಟ್ಟು ಹೊರಗೆ ಓಡಿದರು, ಆದರೆ ಹಾಗೆ ಆತುರದಲ್ಲಿ ಜೀವ ಉಳಿಸಿಕೊಳ್ಳಲು ಓಡುವ ಸಂದರ್ಭದಲ್ಲೂ ಅವರು ಆ ಎರಡು ನೋಟ್ ಪುಸ್ತಗಳನ್ನು ಎತ್ತಿಕೊಳ್ಳಲು ಮರೆಯಲಿಲ್ಲ.
ತಲಾ 172 ಪುಟಗಳ ಈ ಎರಡು ಪುಸ್ತಕಗಳು, ಮುಂದಿನ ವಾರಗಳು ಮತ್ತು ತಿಂಗಳುಗಳಲ್ಲಿ ಅವರಿಗೆ ಅನೇಕ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತವೆ.
ಏಕೆಂದರೆ ಅದು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿರುವ ಅವರ ಗ್ರಾಮ ಅರ್ಜುನವಾಡ್ ಈಗಾಗಲೇ ಮತ್ತೊಂದು ವಿಪತ್ತನ್ನು ಎದುರಿಸುತ್ತಿದ್ದ ಸಮಯವಾಗಿತ್ತು - ಕೋವಿಡ್ -19 ಪ್ರಕರಣಗಳಲ್ಲಿ ತ್ವರಿತ ಏರಿಕೆ ಆ ಸಮಯದಲ್ಲಿ ಕಂಡುಬಂದಿತ್ತು. ಶುಭಾಂಗಿಯವರ ಬಳಿಯಿದ್ದ ಪುಸ್ತಕಗಳ ಪುಟಗಳಲ್ಲಿ ಸಂಪರ್ಕ ಸಂಖ್ಯೆಗಳು, ವಿಳಾಸ, ಕುಟುಂಬದ ಇತರ ಸದಸ್ಯರ ವಿವರಗಳು, ಅವರ ವೈದ್ಯಕೀಯ ಇತಿಹಾಸ, ಆರೋಗ್ಯ ದಾಖಲೆಗಳು ಮತ್ತು ಇತ್ಯಾದಿಗಳನ್ನು ಒಳಗೊಂಡಂತೆ ಗ್ರಾಮದಲ್ಲಿನ ಕೊರೋನಾ ವೈರಸ್ ಪ್ರಕರಣಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಅಚ್ಚುಕಟ್ಟಾಗಿ ಬರೆಯಲಾಗಿತ್ತು.
"ಕೋವಿಡ್ ವರದಿಗಳು [ಗ್ರಾಮದಲ್ಲಿ ನಡೆಸಲಾದ ಆರ್ಟಿ-ಪಿಸಿಆರ್ ಪರೀಕ್ಷೆಗಳ] ಮೊದಲು ನನಗೆ ಬರುತ್ತವೆ," ಎಂದು 2005ರ ಭಾರತದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಅಡಿಯಲ್ಲಿ ನೇಮಕಗೊಂಡ ಒಂದು ಮಿಲಿಯನ್ ಮಹಿಳಾ ಸಮುದಾಯ ಆರೋಗ್ಯ ಕಾರ್ಯಕರ್ತರಲ್ಲಿ ಒಬ್ಬರಾದ 33 ವರ್ಷದ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ (ಆಶಾ) ಹೇಳುತ್ತಾರೆ. ಅವರ ನೋಟ್ ಪುಸ್ತಕಗಳು ಶಿರೋಲ್ ತಾಲ್ಲೂಕಿನ ಪ್ರವಾಹ ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಲಾದ ಕೋವಿಡ್-ಪಾಸಿಟಿವ್ ಆಗಿದ್ದ ಗ್ರಾಮಸ್ಥರೋರ್ವರನ್ನು ಪತ್ತೆಹಚ್ಚಲು ಸಹಾಯ ಮಾಡಿದವು. ಆ ವ್ಯಕ್ತಿ ಕನಿಷ್ಠ 5,000 ಇತರ ಜನರನ್ನು ವೈರಸ್ ಸೋಂಕಿಗೆ ಈಡು ಮಾಡುವ ಸಾಧ್ಯತೆಯಿತ್ತು.
“ಪ್ರವಾಹದಿಂದಾಗಿ ಅನೇಕ ಜನರ ಫೋನುಗಳು ಸ್ವಿಚ್ ಆಫ್ ಆಗಿವೆ ಅಥವಾ ನೆಟ್ವರ್ಕ್ ಕ್ಷೇತ್ರದಿಂದ ಹೊರಗಿವೆ,” ಎಂದು ಅವರು ಹೇಳುತ್ತಾರೆ. 15 ಕಿಲೋಮೀಟರ್ ದೂರದ ತೇರ್ವಾಡ್ ಎನ್ನುವಲ್ಲಿರುವ ತನ್ನ ತಾಯಿಯ ಮನೆಗೆ ಸ್ಥಳಾಂತರಗೊಂಡ ಶುಭಾಂಗಿ, ತಕ್ಷಣವೇ ತನ್ನ ಕೈಬರಹದ ದಾಖಲೆಗಳನ್ನು ಹುಡುಕಿ ಶಿಬಿರದಲ್ಲಿದ್ದ ಇತರ ಕೆಲವರ ಫೋನ್ ಸಂಖ್ಯೆಗಳನ್ನು ಕಂಡುಕೊಂಡರು. "ನಾನು ಹೇಗೋ ಆ ರೋಗಿಯನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾದೆ."






















