"ಏಕ್ ಮಿನಿಟ್ ಭೀ ಲೇಟ್ ನಹಿ ಹೋ ಸಕ್ತೆ ವರ್ನಾ ಹುಮರಿ ಕ್ಲಾಸ್ ಲಗ್ ಜಾಯೇಗಿ" ["ಒಂದು ನಿಮಿಷ ಕೂಡಾ ತಡವಾಗುವಂತಿಲ್ಲ, ಕ್ಲಾಸ್ ಶುರು ಮಾಡಿ ಬಿಡ್ತಾರೆ"], ಎನ್ನುತ್ತಾ ರೀಟಾ ಬಾಜಪೇಯಿ ಅವರು ಲಕ್ನೋ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದ ಮಹಾನಗರ ಪಬ್ಲಿಕ್ ಇಂಟರ್ ಕಾಲೇಜಿನತ್ತ ಆತುರದಿಂದ ಹೆಜ್ಜೆ ಹಾಕಿದರು. ಅದು ಅವರನ್ನು ಕರ್ತವ್ಯದ ಮೇಲೆ ನಿಯೋಜಿಸಲಾಗಿದ್ದ ಮತದಾನ ಕೇಂದ್ರವಾಗಿತ್ತು - ಆದರೆ ಅವರು ಸ್ವತಃ ಮತ ಚಲಾಯಿಸುವ ಸ್ಥಳವಲ್ಲ. ಕಾಲೇಜು ಅವರ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದೆ.
ಅವರು ಆ ದೂರವನ್ನು ಬೆಳಗಿನ 5:30ಕ್ಕೆ ನಡೆದು ಹೋಗುತ್ತಿದ್ದರು. ಅವರು ಡಿಜಿಟಲ್ ಥರ್ಮಾಮೀಟರ್, ಸ್ಯಾನಿಟೈಸರ್ ಬಾಟಲಿಗಳು, ಹಲವಾರು ಜೋಡಿ ಬಳಸಿ ಬಿಸಾಡಬಹುದಾದ ಕೈಗವಸುಗಳು ಮತ್ತು ಮುಖಗವಸುಗಳನ್ನು ಹೊಂದಿರುವ ದೊಡ್ಡ ಚೀಲವನ್ನು ಸ್ಥಳದಲ್ಲಿ ವಿತರಿಸಬೇಕಾಗಿತ್ತು. ಫೆಬ್ರವರಿ 23ರಂದು ಒಂಬತ್ತು ಜಿಲ್ಲೆಗಳ 58 ಇತರ ಕ್ಷೇತ್ರಗಳೊಂದಿಗೆ ಉತ್ತರ ಪ್ರದೇಶದ ನಾಲ್ಕನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಲಕ್ನೋ ಮತ ಚಲಾಯಿಸಿರುವುದರಿಂದ, ಅದು ಅವರಿಗೆ ವಿಶೇಷ ಕಾರ್ಯನಿರತ ದಿನವಾಗಿತ್ತು.
ಉತ್ತರ ಪ್ರದೇಶದಲ್ಲಿ ಚುನಾವಣೆಗಳು ಮುಗಿದು ಫಲಿತಾಂಶವೂ ಹೊರಬಿದ್ದಿದೆ. ಆದರೆ ಆ ಚುನಾವಣೆಯಲ್ಲಿ ಕೆಲಸ ಮಾಡಿದ ಒಂದು ದೊಡ್ಡ ಗುಂಪಿನ ಮಹಿಳೆಯರಿಗೆ ಅವರ ಪಾಲಿನ ಫಲಿತಾಂಶ ಇನ್ನಷ್ಟೇ ಬರಬೇಕಾಗಿದೆ. ಆ ಫಲಿತಾಂಶವು ಬಹಳ ಸಂಕಟದಾಯಕ ಹಾಗೂ ಪ್ರಾಣಾಂತಿಕವೂ ಆಗಿರಬಲ್ಲದೆನ್ನುವುದು ಅವರಿಗೂ ತಿಳಿದಿದೆ. ಭಾರತದ ಅತ್ಯಂತ ಜನನಿಬಿಡ ರಾಜ್ಯದ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ್ದಕ್ಕಾಗಿ ಸಿಗಲಿರುವ ಫಲಿತಾಂಶ.
ಅವರೇ 163,407 ಮಂದಿ ಆಶಾ ಕಾರ್ಯಕರ್ತರು (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು). ಅವರನ್ನು ಯಾವುದೇ ಔಪಚಾರಿಕ ಲಿಖಿತ ಆದೇಶಗಳಿಲ್ಲದೆ ಮತದಾನ ಕೇಂದ್ರಗಳಲ್ಲಿ ಕೆಲಸ ಮಾಡಲು ಒತ್ತಾಯಪೂರ್ವಕವಾಗಿ ನಿಯೋಜಿಸಲಾಗಿತ್ತು. ಮತ್ತು ಅದಕ್ಕಿಂತಲೂ ವಿಪರ್ಯಾಸವೆಂದರೆ ಮತದಾನ ಕೇಂದ್ರಗಳಲ್ಲಿ ನೈರ್ಮಲ್ಯ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅವರ ಕೆಲಸ. ಆದರೆ ಅವರಿಗೇ ವೈಯಕ್ತಿಕ ರಕ್ಷಣೆಯ ಖಾತರಿಯಿಲ್ಲ. ಅದೂ 2021ರ ಏಪ್ರಿಲ್-ಮೇ ತಿಂಗಳಲ್ಲಿ ಕೋವಿಡ್-19 ಸಂಬಂಧಿತ ಸುಮಾರು 2,000 ಶಾಲಾ ಶಿಕ್ಷಕರ ಸಾವುಗಳನ್ನು ಕಂಡ ರಾಜ್ಯದಲ್ಲ. ಆ ವರ್ಷದ ಏಪ್ರಿಲ್ ತಿಂಗಳಿನಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ, ಅವರನ್ನು ಮಹಾಮಾರಿಯ ಉಲ್ಬಣಾವಸ್ಥೆಯ ನಡುವೆಯೂ ಮತದಾನ ಅಧಿಕಾರಿಗಳಾಗಿ ಅವರ ಇಚ್ಛೆಗೆ ವಿರುದ್ಧವಾಗಿ ಕೆಲಸ ಮಾಡುವಂತೆ ಶಿಕ್ಷಕರಿಗೆ ಆದೇಶಿಸಲಾಗಿತ್ತು.










