“ತೀನ್ ಆಣಿ ದೋನ್ ಕಿತ್ತಿ? [ಮೂರು ಕೂಡಿಸು ಎರಡು ಎಷ್ಟು?],” ಎಂದು ಪ್ರತಿಭಾ ಹಿಲಿಮ್ ಕೇಳುತ್ತಾರೆ. ಅವರ ಮುಂದೆ ನೆಲದ ಮೇಲೆ ಕುಳಿತುಕೊಂಡಿರುವ 7ರಿಂದ 9 ವಯಸ್ಸಿನ ಸುಮಾರು 10 ಮಕ್ಕಳ ಗುಂಪು ಪ್ರತಿಕ್ರಿಯಿಸುವುದಿಲ್ಲ. ಅವರು ಚಾಕ್ಬೋರ್ಡ್ನಲ್ಲಿ ಬರೆಯುತ್ತಾರೆ, ನಂತರ ಮಕ್ಕಳನ್ನು ಹಿಂತಿರುಗಿ ನೋಡುತ್ತಾರೆ ಮತ್ತು ಅವರು ತೋಳುಗಳು ಮತ್ತು ತಲೆಯಾಡಿಸಿ “ಪಾಂಚ್ [ಐದು]” ಎಂದು ಪುನರಾವರ್ತಿಸುವಂತೆ ಸಂಕೇತಿಸುತ್ತಾರೆ.
ಸೊಂಟಕ್ಕೆ ಜೋಡಿಸಲಾದ ಅಡಿಯಲ್ಲಿ ರಬ್ಬರ್ ಹೊಂದಿರುವ ಚರ್ಮ ಮತ್ತು ಸ್ಟೀಲ್ನ ಪ್ರೊಟೆಕ್ಟರ್ ಸಹಾಯದಿಂದ ಪ್ರತಿಭಾ ನಿಂತಿದ್ದಾರೆ. ಅವರ ಮೊಣಕೈಯ ಬಳಿ ಬಿಳಿ ಸೀಮೆಸುಣ್ಣವನ್ನು ಕಟ್ಟಲಾಗಿದೆ.
‘ಶಾಲೆ’ ನಡೆಯುತ್ತಿದೆ, ಮತ್ತು ಈ ಶಾಲೆಯು ಪಾಲ್ಘರ್ ಜಿಲ್ಲೆಯ ಕಾರ್ಹೆ ಗ್ರಾಮದಲ್ಲಿರುವ ಹಿಲಿಮ್ ಕುಟುಂಬದ ಮೂರು ಕೋಣೆಗಳ ಸಿಮೆಂಟ್ ಮನೆಯಲ್ಲಿದೆ. ಇಲ್ಲಿ, ಈ ವರ್ಷದ ಜುಲೈ 20ರಿಂದ ಪ್ರತಿಭಾ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿಕ್ರಮಗಡ್ ತಾಲೂಕಿನಲ್ಲಿರುವ ಈ ಗ್ರಾಮದ ಸುಮಾರು 30 ಆದಿವಾಸಿ ಮಕ್ಕಳಿಗೆ ಇಂಗ್ಲಿಷ್, ಇತಿಹಾಸ, ಮರಾಠಿ ಮತ್ತು ಗಣಿತವನ್ನು ಕಲಿಸುತ್ತಿದ್ದಾರೆ. 1,378 ಜನರಿರುವ ಈ ಊರಿನ ಎರಡು ಜಿಲ್ಲಾ ಪರಿಷತ್ ಶಾಲೆಗಳು ಒದಗಿಸಿದ ಪಠ್ಯಪುಸ್ತಕಗಳನ್ನು ಹೊತ್ತ ಮಕ್ಕಳು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ತಂಡಗಳಾಗಿ ಬರುತ್ತಾರೆ.
ವಿದ್ಯಾರ್ಥಿಯೊಬ್ಬ ತನ್ನ ಮೇಲಿನ ತೋಳಿನ ವೆಲ್ಕ್ರೋ ಪಟ್ಟಿಗೆ ಕಟ್ಟಲಾದ ಸೀಮೆಸುಣ್ಣವನ್ನು ಸರಿಪಡಿಸಲು ಸಹಾಯ ಮಾಡುತ್ತಿರುವಾಗ “ಶಸ್ತ್ರಚಿಕಿತ್ಸೆಯ ನಂತರ, ಪ್ರತಿಯೊಂದು ಸಣ್ಣ ಕೆಲಸ ಮುಗಿಸುವುದಕ್ಕೂ ಹೆಚ್ಚು ಸಮಯ ಹಿಡಿಯುತ್ತದೆ. ಇದರೊಂದಿಗೆ ಬರೆಯುವುದು ಸಹ ಕಷ್ಟ,” ಎಂದು ಪ್ರತಿಭಾ ಹೇಳುತ್ತಾರೆ.
ಕಳೆದ ವರ್ಷದವರೆಗೂ, ವರ್ಲಿ ಆದಿವಾಸಿ ಸಮುದಾಯಕ್ಕೆ ಸೇರಿದವರಾದ ಪ್ರತಿಬಾ ಹಿಲೀಮ್ ಸ್ಥಳೀಯ ಜಿಲ್ಲಾ ಪರಿಷತ್ (ಝಡ್ಪಿ) ಶಾಲೆಗಳಲ್ಲಿ ಕಳೆದ 28 ವರ್ಷಗಳಿಂದ ಬೋಧನೆ ಮಾಡುತ್ತಿದ್ದರು. ತನ್ನ 20ನೇ ವಯಸ್ಸಿನಲ್ಲಿ ಮದುವೆಯಾದ ನಂತರ, ಕಾರ್ಹೆಯಿಂದ 100 ಕಿಲೋಮೀಟರ್ ದೂರದಲ್ಲಿರುವ ಭಿವಾಂಡಿ ನಗರಕ್ಕೆ ಸ್ಥಳಾಂತರಗೊಂಡರು, ಅಲ್ಲಿ ಅವರ ಪತಿ ಕೆಲಸ ಮಾಡುತ್ತಿದ್ದರು - ಅವರ ಪತಿ 50 ವರ್ಷದ ಪಾಂಡುರಂಗ್ ಹಿಲೀಮ್ ಈಗ ರಾಜ್ಯ ನೀರಾವರಿ ಇಲಾಖೆಯ ಕಚೇರಿಯಲ್ಲಿ ಹಿರಿಯ ಗುಮಾಸ್ತನಾಗಿದ್ದಾರೆ. ಅವರನ್ನು 2015ರಲ್ಲಿ ಹತ್ತಿರದ ಥಾಣೆ ಜಿಲ್ಲೆಯ ಕಲ್ವಾ ಪಟ್ಟಣಕ್ಕೆ ವರ್ಗಾವಣೆ ಮಾಡಿದಾಗ, ಬೋಧನೆಯನ್ನು ಮುಂದುವರಿಸಲು ಅವರು ಅಲ್ಲಿಂದ ಭಿವಾಂಡಿಗೆ ಹೋಗಿಬರುತ್ತಿದ್ದರು.
ಭಿವಾಂಡಿಯ ಹೊಸ ಝಡ್ಪಿ ಶಾಲೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ನಂತರ, ಅವರು ಸಾಮಾನ್ಯವಾಗಿ ತಿಂಗಳಿಗೊಮ್ಮೆ ಕಾರ್ಹೆಯಲ್ಲಿರುವ ಹಿಲೀಮ್ ಕುಟುಂಬದ ಮನೆಗೆ ಬರುತ್ತಿದ್ದರು. ಅಂತಹ ಒಂದು ಭೇಟಿಯ ಸಮಯದಲ್ಲಿ ಜೂನ್ 2019ರಲ್ಲಿ ಅವರ ತೊಂದರೆಗಳು ಪ್ರಾರಂಭವಾದವು. ಆ ತಿಂಗಳು 50 ವರ್ಷದ ಪ್ರತಿಭಾರಿಗೆ ಗ್ಯಾಂಗ್ರೀನ್ ಇರುವುದು ತಿಳಿದುಬಂದಿತು, ಇದು ದೇಹದ ಅಂಗಾಂಶಗಳು ಸಾಯುವುದರಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಅನಾರೋಗ್ಯ, ಗಾಯ ಅಥವಾ ಸೋಂಕು ಉಂಟಾದಾಗ ಅಲ್ಲಿ ರಕ್ತ ಪೂರೈಕೆಯಿಲ್ಲದಿದ್ದಾಗ ಗ್ಯಾಂಗ್ರೀನ್ ಸಂಭವಿಸುತ್ತದೆ.
ಸ್ವಲ್ಪ ಸಮಯದ ನಂತರ, ಅವರ ಎರಡೂ ಮುಂಗೈಗಿಂತ ಕೆಳಗಿನ ಭಾಗ ಮತ್ತು ಮೊಣಕಾಲಿನ ಕೆಳಭಾಗಗಳನ್ನು ಕತ್ತರಿಸಬೇಕಾಯಿತು.








