ತೋಟಗಾರಿಕಾ ವಿಜ್ಞಾನಿ ಶಂಕರನ್ ಅವರ ಪ್ರಕಾರ ಮಾವಿನ ಹೂವುಗಳು ಅರಳಲು ಸೂಕ್ತವಾದ ತಾಪಮಾನವು 25-30 ಡಿಗ್ರಿ ಸೆಲ್ಸಿಯಸ್. "ಫೆಬ್ರವರಿ 2023ರಲ್ಲಿ, ಹಗಲು ಮತ್ತು ರಾತ್ರಿ ತಾಪಮಾನದ ನಡುವೆ ಗಮನಾರ್ಹ ವ್ಯತ್ಯಾಸ ಕಂಡುಬಂದಿದೆ. ಮರಗಳು ಇದನ್ನು ನಿಭಾಯಿಸಲು ಸಾಧ್ಯವಿಲ್ಲ" ಎಂದು ಅವರು ಹೇಳುತ್ತಾರೆ.
ಕಳೆದ ಕೆಲವು ವರ್ಷಗಳಿಂದ ಮಾವು ಕೃಷಿಯ ಪರಿಸ್ಥಿತಿಗಳು ವ್ಯತಿರಿಕ್ತವಾಗುತ್ತಿರುವುದರಿಂದಾಗಿ ಶ್ರೀರಾಮಮೂರ್ತಿ ಅವರು 2014ರಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ವಿಷಾದಿಸಲು ಪ್ರಾರಂಭಿಸಿದ್ದಾರೆ. ಆ ವರ್ಷ, ಅವರು ಅನಕಪಲ್ಲಿ ಪಟ್ಟಣದ ಬಳಿ 0.9 ಎಕರೆ ಭೂಮಿಯನ್ನು ಮಾರಾಟ ಮಾಡಿದರು ಮತ್ತು ಅದರಿಂದ ಬಂದ ಆರು ಲಕ್ಷ ರೂ.ಗಳನ್ನು ಪೋಮುಲಾ ಭೀಮಾವರಂನಲ್ಲಿ ಮಾವಿನ ತೋಟಕ್ಕೆ ಪೆಟ್ಟುಬಡಿ (ಹೂಡಿಕೆ) ಆಗಿ ಬಳಸಿದರು.
ಈ ಕ್ರಮವನ್ನು ವಿವರಿಸುತ್ತಾ, "ಪ್ರತಿಯೊಬ್ಬರೂ ಅವುಗಳೆಂದರೆ [ಮಾವಿನಹಣ್ಣುಗಳನ್ನು] ಇಷ್ಟ ಮತ್ತು ಅವುಗಳಿಗೆ ಬೇಡಿಕೆಯಿದೆ. ಮಾವು ಕೃಷಿಯು [ಅಂತಿಮವಾಗಿ] ನನಗೆ ಸಾಕಷ್ಟು ಹಣವನ್ನು ನೀಡುತ್ತದೆ ಎಂದು ನಾನು ಭಾವಿಸಿದೆ."
ಆದಾಗ್ಯೂ, ಅಂದಿನಿಂದ, ಅವರು ಲಾಭ ಗಳಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳುತ್ತಾರೆ. "2014 ಮತ್ತು 2022ರ ನಡುವೆ, [ಈ ಎಂಟು ವರ್ಷಗಳಲ್ಲಿ] ಮಾವು ಕೃಷಿಯಿಂದ ನನ್ನ ಒಟ್ಟು ಆದಾಯವು ಆರು ಲಕ್ಷಕ್ಕಿಂತ ಹೆಚ್ಚಿಲ್ಲ" ಎಂದು ಶ್ರೀರಾಮಮೂರ್ತಿ ಹೇಳುತ್ತಾರೆ. ತಮ್ಮ ಭೂಮಿಯನ್ನು ಮಾರಾಟ ಮಾಡುವ ತಮ್ಮ ನಿರ್ಧಾರದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, "ನಾನು ಮಾರಾಟ ಮಾಡಿದ ಭೂಮಿ ಈಗ ಹೆಚ್ಚು ಮೌಲ್ಯಯುತವಾಗಿದೆ. ಬಹುಶಃ ನಾನು ಮಾವಿನ ಕೃಷಿಯನ್ನು ಪ್ರಾರಂಭಿಸಬಾರದಿತ್ತು."
ಇದು ಕೇವಲ ಹವಾಮಾನದ ವಿಷಯವಲ್ಲ. ಮಾವಿನ ಮರಗಳು ನೀರಿನ (ನೀರಾವರಿ) ಮೇಲೆ ಅವಲಂಬಿತವಾಗಿವೆ, ಮತ್ತು ನಾಗರಾಜು ಅಥವಾ ಶ್ರೀರಾಮಮೂರ್ತಿ ತಮ್ಮ ಭೂಮಿಯಲ್ಲಿ ಕೊಳವೆಬಾವಿಗಳನ್ನು ಹೊಂದಿಲ್ಲ. 2018ರಲ್ಲಿ ಶ್ರೀರಾಮಮೂರ್ತಿ 2.5 ಲಕ್ಷ ರೂಪಾಯಿ ಖರ್ಚು ಮಾಡಿ ಕೊಳವೆಬಾವಿ ಕೊರೆಸಿದರೂ ಒಂದು ಹನಿ ನೀರು ಸಿಗಲಿಲ್ಲ. ನಾಗರಾಜು ಮತ್ತು ಶ್ರೀರಾಮಮೂರ್ತಿ ಅವರ ತೋಟಗಳಿರುವ ಬುಚ್ಚಯ್ಯಪೇಟ ಮಂಡಲದಲ್ಲಿ ಅಧಿಕೃತವಾಗಿ 35 ಕೊಳವೆಬಾವಿಗಳು ಮತ್ತು 30 ತೆರೆದ ಬಾವಿಗಳಿವೆ.
ಮರಗಳಿಗೆ ನಿರಂತರವಾಗಿ ನೀರು ಹಾಯಿಸುವ ಮಾಡುವ ಮೂಲಕ ಒಣ ಹೂವುಗಳ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಶ್ರೀರಾಮಮೂರ್ತಿ ಹೇಳುತ್ತಾರೆ. ಅವರು ವಾರಕ್ಕೆ ಎರಡು ಟ್ಯಾಂಕರ್ ಲೋಡ್ ನೀರನ್ನು ಸಹ ಖರೀದಿಸುತ್ತಾರೆ, ಇದಕ್ಕಾಗಿ ಅವರು ತಿಂಗಳಿಗೆ 10,000 ರೂ.ಗಳನ್ನು ಖರ್ಚು ಮಾಡುತ್ತಾರೆ. "ಪ್ರತಿ ಮರಕ್ಕೆ ಪ್ರತಿದಿನ ಕನಿಷ್ಠ ಒಂದು ಲೀಟರ್ ನೀರು ಬೇಕಾಗುತ್ತದೆ. ಆದರೆ ನಾನು ವಾರಕ್ಕೆ ಎರಡು ಬಾರಿ ಮಾತ್ರ ನೀರು ಹಾಕುತ್ತೇನೆ; ನನ್ನಿಂದ ಭರಿಸಲು ಸಾಧ್ಯವಿರುವುದು ಅಷ್ಟು ಮಾತ್ರ" ಎನ್ನುತ್ತಾರೆ ಶ್ರೀರಾಮಮೂರ್ತಿ.
ತನ್ನ ಮಾವಿನ ಮರಗಳಿಗೆ ನೀರುಣಿಸಲು ನಾಗರಾಜು ತಲಾ 8,000 ರೂಗಳಂತೆ ವಾರಕ್ಕೆ ಎರಡು ಟ್ಯಾಂಕರ್ ನೀರನ್ನು ಖರೀದಿಸುತ್ತಾರೆ.