“ನಾನು ನನ್ನ ಗಂಡನ ಶವದೊಂದಿಗೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಪಾಮುರು ಎಂಬ ಹಳ್ಳಿಗೆ ಹೋಗಿದ್ದಾಗಲಿ ಅಥವಾ ಅವರ ಅಂತ್ಯಕ್ರಿಯೆಯನ್ನು ಹೇಗೆ ಮಾಡಲಾಯಿತು ಎನ್ನುವುದಾಗಲಿ ನನಗೆ ನೆನಪಿಲ್ಲ. ನನ್ನ ಮಾವ ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ನನಗೆ ಎಲೆಕ್ಟ್ರೋಕನ್ವಲ್ಸಿವ್ ಥೆರಪಿ ಮತ್ತು ಇತರ ಚಿಕಿತ್ಸೆಗಳನ್ನು ನೀಡಲಾಯಿತು, ನಂತರ ನಾನು ಪ್ರಜ್ಞೆಯನ್ನು ಮರಳಿ ಪಡೆದೆ. ನನ್ನ ಪತಿ ನಿಜವಾಗಿಯೂ ಸತ್ತಿದ್ದಾರೆ ಎಂದು ಒಪ್ಪಿಕೊಳ್ಳಲು ನನಗೆ ಎರಡು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು.”
ಈ ಘಟನೆ ನಡೆದು 10 ವರ್ಷ ಕಳೆದರೂ ನಾಗಮ್ಮ ಪತಿಯ ಸಾವನ್ನು ನೆನೆದು ಕುಸಿದು ಹೋಗುತ್ತಾರೆ. “ನಂತರ ನನ್ನ ಸಂಬಂಧಿಕರು ನನ್ನ ಹೆಣ್ಣುಮಕ್ಕಳಿಗಾಗಿ ಬದುಕಬೇಕು ಎಂದು ಹೇಳಿದರು, ಆ ಕ್ಷಣದಿಂದ ನಾನು ನನ್ನ ಬದುಕಿನ ಹೋರಾಟವನ್ನು ಪ್ರಾರಂಭಿಸಿದೆ. ನನಗೆ ಹತ್ತಿರದ ಕಾರ್ಖಾನೆಯಲ್ಲಿ ನೈರ್ಮಲ್ಯ ನೋಡಿಕೊಳ್ಳುವ ಕೆಲಸ ಸಿಕ್ಕಿತು, ಆದರೆ ನಾನು ಆ ಕೆಲಸವನ್ನು ದ್ವೇಷಿಸುತ್ತೇನೆ. ನನ್ನ ಹೆತ್ತವರು ಸಹ ನೈರ್ಮಲ್ಯ ಕೆಲಸಗಾರರಾಗಿದ್ದರು - ನನ್ನ ತಂದೆ ಸೆಪ್ಟಿಕ್ ಟ್ಯಾಂಕ್ / ಮ್ಯಾನ್ಹೋಲ್ ಸ್ವಚ್ಛಗೊಳಿಸುತ್ತಿದ್ದರು ಮತ್ತು ಕಸವನ್ನು ಸಂಗ್ರಹಿಸುತ್ತಿದ್ದರು ಮತ್ತು ನನ್ನ ತಾಯಿ ಗುಡಿಸುತ್ತಿದ್ದರು.
ತಮಿಳುನಾಡಿನಲ್ಲಿನ ಬಹುತೇಕ ನೈರ್ಮಲ್ಯ ಕಾರ್ಮಿಕರು ಆಂಧ್ರಪ್ರದೇಶದವರು; ಅವರು ತೆಲುಗು ಮಾತನಾಡುತ್ತಾರೆ. ತಮಿಳುನಾಡಿನ ಅನೇಕ ಭಾಗಗಳಲ್ಲಿ, ನೈರ್ಮಲ್ಯ ಕಾರ್ಮಿಕರ ಸಮುದಾಯಕ್ಕಾಗಿ ವಿಶೇಷ ತೆಲುಗು ಮಾಧ್ಯಮ ಶಾಲೆಗಳಿವೆ.
ನಾಗಮ್ಮ ಮತ್ತು ಆಕೆಯ ಪತಿ ಮೂಲತಃ ಪಾಮೂರು ಗ್ರಾಮದವರು. ನಾಗಮ್ಮ ಹೇಳುತ್ತಾರೆ, “ನಾನು 1995ರಲ್ಲಿ 18 ವರ್ಷ ವಯಸ್ಸಿನವಳಾಗಿದ್ದಾಗ ನನಗೆ ಮದುವೆಯಾಯಿತು. ನಾನು ಹುಟ್ಟುವ ಮೊದಲೇ ನನ್ನ ಹೆತ್ತವರು ಚೆನ್ನೈಗೆ ಬಂದಿದ್ದರು. ನಾವು ನಮ್ಮ ಮದುವೆಗೆ ಹಳ್ಳಿಗೆ ಹೋದೆವು ಮತ್ತು ಚೆನ್ನೈಗೆ ಹಿಂದಿರುಗುವ ಮೊದಲು ಕೆಲವು ವರ್ಷಗಳ ಕಾಲ ಅಲ್ಲಿಯೇ ಇದ್ದೆವು. ನನ್ನ ಪತಿ ನಿರ್ಮಾಣ ಸ್ಥಳಗಳಲ್ಲಿ ಮೇಸ್ತ್ರಿ ಕೆಲಸ ಮಾಡಲು ಪ್ರಾರಂಭಿಸಿದರು. ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಯಾರಾದರೂ ಕರೆದರೆ, ಅವರು ಹೋಗುತ್ತಿದ್ದರು. ಆತ ಚರಂಡಿಯಲ್ಲಿ ಕೆಲಸ ಮಾಡುತ್ತಾನೆ ಎಂದು ತಿಳಿದಾಗ ನಾನು ಅದನ್ನು ಬಲವಾಗಿ ವಿರೋಧಿಸಿದೆ. ಅದಾದ ನಂತರ ಈ ಕೆಲಸಕ್ಕೆ ಹೋದಾಗಲೆಲ್ಲ ಈ ಬಗ್ಗೆ ಹೇಳುತ್ತಿರಲಿಲ್ಲ. 2007ರಲ್ಲಿ ಸೆಪ್ಟಿಕ್ ಟ್ಯಾಂಕ್ನೊಳಗೆ ಅವರು ಮತ್ತು ಇತರ ಇಬ್ಬರು ಸತ್ತಾಗ, ಯಾರನ್ನೂ ಬಂಧಿಸಲಾಗಿಲ್ಲ; ಅವರ ಹತ್ಯೆಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ. ದೇಶ ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತದೆ ನೋಡಿ; ನಮ್ಮ ಜೀವನ ಮುಖ್ಯವಲ್ಲ. ನಮಗೆ ಸಹಾಯ ಮಾಡಲು ಯಾರೂ ಮುಂದೆ ಬರಲಿಲ್ಲ - ಸರ್ಕಾರವಿಲ್ಲ, ಅಧಿಕಾರಿಗಳು ಇಲ್ಲ. ಇದೆಲ್ಲದರ ನಡುವೆ, ಸಫಾಯಿ ಕರ್ಮಾಚಾರಿ ಆಂದೋಲನ (ಎಸ್ಕೆಎ) ನನ್ನ ಹಕ್ಕುಗಳಿಗಾಗಿ ಹೇಗೆ ಹೋರಾಡಬೇಕೆಂದು ನನಗೆ ಕಲಿಸಿದೆ. ನಾನು 2013ರಲ್ಲಿ ಚಳವಳಿಯ ಸಂಪರ್ಕಕ್ಕೆ ಬಂದೆ.
ತನ್ನ ಹಕ್ಕುಗಳ ಅರಿವಾದ ನಂತರ ನಾಗಮ್ಮ ಅನ್ಯಾಯದ ವಿರುದ್ಧ ದನಿಯೆತ್ತತೊಡಗಿರು. ಅವರು ತಮ್ಮ ಗಂಡ ಅಥವಾ ಪ್ರೀತಿಪಾತ್ರರನ್ನು ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್ಗಳಲ್ಲಿ ಕಳೆದುಕೊಂಡ ಇತರ ಮಹಿಳೆಯರನ್ನು ಭೇಟಿಯಾದರು. "ಜೀವನ ಸಂಗಾತಿಯನ್ನು ಗಟಾರದಲ್ಲಿ ಕಳೆದುಕೊಂಡಿರುವುದು ನಾನೊಬ್ಬಳೇ ಅಲ್ಲ, ನನ್ನಂತೆಯೇ ಅದೇ ದುಃಖವನ್ನು ಹೊಂದಿರುವ ನೂರಾರು ಮಹಿಳೆಯರು ಇದ್ದಾರೆ ಎಂದು ತಿಳಿದಾಗ, ನನ್ನ ದುಃಖವನ್ನು ನನ್ನ ಸ್ವಂತ ಶಕ್ತಿಯಾಗಿ ಪರಿವರ್ತಿಸಲು ಪ್ರಾರಂಭಿಸಿದೆ."