ತಲಬಿರಾದ ನಿವಾಸಿಗಳು ಸಹ ಅರಣ್ಯ ತೆರವುಗೊಳಿಸುವ ನಿಟ್ಟಿನಲ್ಲಿ, ತಮ್ಮ ಗ್ರಾಮದ ಗ್ರಾಮಸಭೆಯ ಒಪ್ಪಿಗೆಯ ನಿರ್ಣಯವನ್ನು ಫೋರ್ಜರಿ ಮಾಡಲಾಗಿದೆ ಎಂದು ಆರೋಪಿಸುತ್ತಾರೆ. ಅಕ್ಟೋಬರ್ನಲ್ಲಿ ಇದನ್ನು ಕುರಿತಂತೆ ರಾಜ್ಯ ಸರ್ಕಾರದಾದ್ಯಂತ ಹಲವಾರು ಅಧಿಕಾರಿಗಳಿಗೆ ಕಳುಹಿಸಲಾದ ಲಿಖಿತ ದೂರುಗಳನ್ನು ಅವರು ತೋರಿಸುತ್ತಾರೆ. "ಇವೆಲ್ಲವನ್ನೂ ಫೋರ್ಜರಿ ಮಾಡಲಾಗುತ್ತದೆ. ಈ ಅರಣ್ಯವನ್ನು ಕತ್ತರಿಸಲು ನಾವು ಎಂದಿಗೂ ನಮ್ಮ ಒಪ್ಪಿಗೆಯನ್ನು ನೀಡಿಲ್ಲ" ಎಂದರು ವಾರ್ಡ್ ಸದಸ್ಯೆ, ಸುಷ್ಮಾ ಪಾತ್ರ. "ಇದಕ್ಕೆ ವ್ಯತಿರಿಕ್ತವಾಗಿ, ನಮ್ಮ ತಲಬಿರಾ ಗ್ರಾಮ್ಯ ಜಂಗಲ್ ಸಮಿತಿಯು 2012ರ ಮೇ 28ರಂದು ಜಿಲ್ಲಾಧಿಕಾರಿಗೆ ಪತ್ರ ಬರೆದು, FRA ನಿಟ್ಟಿನಲ್ಲಿ ನಮ್ಮ ಅರಣ್ಯ ಹಕ್ಕುಗಳಿಗೆ ಮಾನ್ಯತೆ ನೀಡುವಂತೆ ಕೋರಿದೆ. ಒಪ್ಪಿಗೆಯ ಫೋರ್ಜರಿ ಬಗ್ಗೆ ಅಧಿಕಾರಿಗಳಿಗೆ ನೀಡಿದ ನಮ್ಮ ಲಿಖಿತ ದೂರಿನಲ್ಲಿ ಇದರ ಪ್ರತಿಯನ್ನು ಸಲ್ಲಿಸಿದ್ದೇವೆ" ಎನ್ನುತ್ತಾರೆ ರೌಟ್.
ತಲಬಿರಾ ಅರಣ್ಯವನ್ನು ತೆರವುಗೊಳಿಸಿದ ದಾಖಲೆಗಳನ್ನು ಅಧ್ಯಯನ ಮಾಡಿದ ನವದೆಹಲಿಯ ನೀತಿ ಸಂಶೋಧನಾ ಕೇಂದ್ರದ ಹಿರಿಯ ಸಂಶೋಧಕಿ ಕಾಂಚಿ ಕೊಹ್ಲಿ ಹೀಗೆನ್ನುತ್ತಾರೆ: "ಸಾಮಾನ್ಯವಾಗಿ, ಅರಣ್ಯ ತರೆ ಉದ್ದೇಶಗಳಿಗೆ ಬಳಸುವ ನಿಟ್ಟಿನ ಪ್ರಕ್ರಿಯೆಗಳು ಅತ್ಯಂತ ಅಸ್ಪಷ್ಟವಾಗಿವೆ. ಬಾಧಿತ ಜನರಿಗೆ ತಪಾಸಣಾ ವರದಿಗಳು ಮತ್ತು ಅನುಮೋದನೆಯ ಶಿಫಾರಸುಗಳು ಲಭ್ಯವಿರುವುದು ವಿರಳ. ತಲಬಿರಾ ಪ್ರಕರಣವು ಈ ಸಮಸ್ಯೆಯ ಸೂಚಕವಾಗಿದೆ. ಮರ ಕಡಿಯುವ ಚಟುವಟಿಕೆ ನಡೆದಾಗ ಮಾತ್ರ ಅರಣ್ಯ ಪ್ರದೇಶಗಳಲ್ಲಿ ಗಣಿ ವಿಸ್ತರಣೆಯ ಪ್ರಮಾಣದ ಬಗ್ಗೆ ಗ್ರಾಮಸ್ಥರಿಗೆ ಅರಿವಾಗುತ್ತದೆ,
ದಾಖಲೆಗಳನ್ನು ಓದಿದಾಗ, "ಅನುದ್ದೇಶಿತ ಸ್ಥಳ ಪರಿಶೀಲನಾ ವರದಿಗಳು ಮತ್ತು ತುಂಡು ಭೂಮಿಗಳ ಮೌಲ್ಯಾಂಕನಗಳು ಸ್ಪಷ್ಟವಾಗಿ ಕಂಡುಬರುತ್ತವೆ. 1.3 ಲಕ್ಷ ಮರಗಳನ್ನು ಕಡಿಯುವುದರ ಪರಿಣಾಮವನ್ನು ನಗಣ್ಯವೆಂದು ದಾಖಲಿಸಲಾಗಿದೆಯಲ್ಲದೆ, ಎಂದಿಗೂ ಪ್ರಶ್ನಿಸಿರುವುದಿಲ್ಲ. ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿಯಿಂದ ಗ್ರಾಮಸಭೆಯ ನಿರ್ಣಯಗಳನ್ನು ಪರಿಶೀಲಿಸಲಾಗಿಲ್ಲ. ಒಟ್ಟಾರೆಯಾಗಿ, ಅರಣ್ಯ ಬದಲಾವಣೆ ಪ್ರಕ್ರಿಯೆಯಲ್ಲಿ ಗಂಭೀರ ಕಾನೂನು ಲೋಪಗಳಿರುವಂತೆ ಕಾಣುತ್ತಿದೆ" ಎನ್ನುತ್ತಾರೆ ಕೊಹ್ಲಿ.
ಅಧಿಕಾರಿಗಳು ಗ್ರಾಮಸ್ಥರ ಪ್ರತಿಭಟನೆಗಳನ್ನು ಆಲಿಸಬೇಕು ಎನ್ನುತ್ತಾರೆ ರಂಜನ್ ಪಾಂಡಾ. "ಕಲ್ಲಿದ್ದಲು ಹವಾಮಾನದ ಅತಿದೊಡ್ಡ ಅಪರಾಧಿ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಇಡೀ ಜಗತ್ತು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳನ್ನು ಹಂತಹಂತವಾಗಿ ತೆಗೆದುಹಾಕಲು ಪ್ರಯತ್ನಿಸುತ್ತಿದೆ."
"ಸರ್ಕಾರವು ಹಳ್ಳಿಗಳ ಜನರಲ್ಲಿ ಅರಣ್ಯ ಹಕ್ಕುಗಳ ಕಾಯ್ದೆಯ ಪ್ರಚಾರಕ್ಕೆ ಯಾವುದೇ ಪ್ರಯತ್ನ ಮಾಡುವುದಿಲ್ಲ. ನಾವು ನಮ್ಮ ಸ್ವಂತ ಪ್ರಯತ್ನದಿಂದ ದಾವೆಗಳನ್ನು ಸಲ್ಲಿಸಿದ್ದೇವೆ. ಯಾವುದೇ ಕಾನೂನು ಬರುವ ಮೊದಲೇ ನಾವು ಈ ಅರಣ್ಯವನ್ನು ಸಂರಕ್ಷಿಸಿದ್ದೇವೆ" ಎನ್ನುತ್ತಾರೆ ದಿಲೀಪ್ ಸಾಹು. "ಇಂದು ಸರ್ಕಾರವು ನಾವು ಗ್ರಾಮಸ್ಥರು ನಮ್ಮ ಕಾಡುಗಳನ್ನು ಕಂಪನಿಗೆ ನೀಡಲು ಒಪ್ಪಿಗೆ ನೀಡಿದ್ದೇವೆ ಎಂದು ಹೇಳಿಕೊಳ್ಳುತ್ತದೆ. 'ನಿಮಗೆ ನಮ್ಮ ಒಪ್ಪಿಗೆ ಇದ್ದರೆ, ಕಂಪನಿಯು ನಮ್ಮ ಮರಗಳನ್ನು ಕಡಿಯಲು ಹಳ್ಳಿಗಳಲ್ಲಿ ನೀವು ಇಷ್ಟೊಂದು ಪೊಲೀಸ್ ಪಡೆಯನ್ನು ಏಕೆ ನಿಯೋಜಿಸಬೇಕು?" ಎಂಬುದಾಗಿ ನಾನು ಅವರನ್ನು ಪ್ರಶ್ನಿಸ ಬಯಸುತ್ತೇನೆ ಎಂದರವರು.
ಅನುಬಂಧ: ತಲಬಿರಾ ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಯಾವುದೇ ಮರಗಳನ್ನು ಕಡಿಯಲಾಗಿಲ್ಲ ಎಂದು ಅದಾನಿ ಎಂಟರ್ಪ್ರೈಸಸ್ ಸ್ಪಷ್ಟಪಡಿಸಿದೆ. ಆದ್ದರಿಂದ ಆ ಪರಿಸ್ಥಿತಿಯನ್ನು ಪ್ರತಿಬಿಂಬಿಸಲು ಮೇಲಿನ ಲೇಖನವನ್ನು 2020ರ ಜನವರಿ 9ರಂದು ನವೀಕರಿಸಲಾಗಿದೆ.
ಅನುವಾದ: ಶೈಲಜಾ ಜಿ. ಪಿ.