"ರೈಲು ಕೇವಲ ಐದು ನಿಮಿಷಗಳ ಕಾಲ ನಿಲ್ಲುತ್ತದೆ, ಅಷ್ಟರೊಳಗೆ ನಾವು ಜನಸಂದಣಿಯ ನಡುವೆ ನುಸುಳಿ ಬೇಗ ಬೇಗ ಹತ್ತಬೇಕಾಗುತ್ತದೆ. "ಕೆಲವೊಮ್ಮೆ ರೈಲು ಮುಂದೆ ಚಲಿಸಲು ಪ್ರಾರಂಭಿಸುತ್ತದೆ, ಅಂತಹ ಸಂದರ್ಭಗಳಲ್ಲಿ ನಾವು ಕೆಲವು ಕಟ್ಟುಗಳನ್ನು ಪ್ಲಾಟ್ಫಾರ್ಮ್ನಲ್ಲಿಯೇ ಬಿಡಬೇಕಾಗುತ್ತದೆ." ಸಾರಂಗ ರಾಜಭೋಯಿ ಓರ್ವ ಹಗ್ಗ ತಯಾರಕಿ, ಮತ್ತು ಅವರು ಅನಿವಾರ್ಯವಾಗಿ ಬಿಟ್ಟುಹೋಗುವ ಕಟ್ಟುಗಳೆಂದರೆ ಜವಳಿ ಕಾರ್ಖಾನೆಗಳ ವ್ಯರ್ಥ ನಾರು, ಅವರಂತಹ ಮಹಿಳೆಯರು ಈ ನಾರಿನಿಂದ ಹಗ್ಗಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಈ ಹಗ್ಗಗಳನ್ನು ಹಸುಗಳು ಮತ್ತು ಎಮ್ಮೆಗಳನ್ನು ಕಟ್ಟಲು, ಟ್ರಕ್ಗಳು ಮತ್ತು ಟ್ರ್ಯಾಕ್ಟರ್ಗಳಲ್ಲಿ ಸರಕುಗಳನ್ನು ಸಾಗಿಸಲು ಮತ್ತು ಬಟ್ಟೆ ಒಣಗಿಸಲು ಬಳಸಲಾಗುತ್ತದೆ.
“ಹಮಾರಿ ಖಾನ್ದಾನಿ ಹೈ [ನಮ್ಮದು ಪಾರಂಪರಿಕ ಉದ್ಯೋಗ]” ಎನ್ನುತ್ತಾರೆ ಸಂತ್ರಾ ರಾಜಭೋಯಿ. ಅವರು ಅಹಮದಾಬಾದ್ನ ವತ್ವಾದಲ್ಲಿನ ಪುರಸಭೆಯ ವಸತಿ ಬ್ಲಾಕ್ನಲ್ಲಿರುವ ತನ್ನ ಮನೆಯ ಸಮೀಪವಿರುವ ತೆರೆದ ಜಾಗದಲ್ಲಿ ಅವರು ಕುಳಿತು ಸಿಂಥೆಟಿಕ್ ದಾರದ ರಾಶಿಯಿಂದ ಗಂಟುಗಳನ್ನು ಬಿಡಿಸುವಲ್ಲಿ ನಿರತರಾಗಿದ್ದರು.
ಸಾರಂಗ ಮತ್ತು ಸಂತ್ರಾ ಗುಜರಾತಿನ ರಾಜಭೋಯಿ ಅಲೆಮಾರಿ ಸಮುದಾಯಕ್ಕೆ ಸೇರಿದವರು. ಅವರು ಈ ವ್ಯರ್ಥ ನಾರನ್ನು ತರಲು ಅಹಮದಾಬಾದ್ ನಗರದಿಂದ ಸೂರತ್ ತನಕ ರೈಲಿನಲ್ಲಿ ಪ್ರಯಾಣಿಸುತ್ತಾರೆ. ನಂತರ ಅದೇ ನಾರಿನಿಂದ ಹಗ್ಗವನ್ನು ತಯಾರಿಸುತ್ತಾರೆ. ಈ ನಾರಿನ ಖರೀದಿಗಾಗಿ ಅವರು ರೈಲು ಪ್ರಯಾಣವನ್ನು ಅವಲಂಬಿಸಿದ್ದಾರೆ. ಇದಕ್ಕಾಗಿ ಅವರು ಇಂದಿನ ರಾತ್ರಿ ಮನೆ ಬಿಟ್ಟರೆ ಮರಳುವಾಗ ಮರುದಿನ ಸಂಜೆ ಏಳು ಗಂಟೆಯಾಗಿರುತ್ತದೆ. ಈ ಸಮಯದಲ್ಲಿ ಅವರು ಮನೆಯಲ್ಲಿನ ಚಿಕ್ಕ ಮಕ್ಕಳನ್ನು ಸಂಬಂಧಿಕರ ಬಳಿ ಬಿಟ್ಟು ಹೋಗುತ್ತಾರೆ.
ಕೆಲವೊಮ್ಮೆ ಅವರು ಹತ್ತುವ ರೈಲು ಅವರು ಹೋಗಬೇಕಾದ ಜಾಗವನ್ನು ತಲುಪಿಸುವ ಹೊತ್ತಿಗೆ ಬೆಳಗಿನ ಒಂದು ಅಥವಾ ಎರಡು ಗಂಟೆಯಾಗಿರುತ್ತದೆ. ಹೀಗಾಗಿ ರೈಲು ಇಳಿದ ಮಹಿಳೆಯರು ಅಲ್ಲೇ ರೈಲ್ವೆ ಪ್ಲಾಟ್ಫಾರ್ಮ್ ಮೇಲೆ ಮಲಗುತ್ತಾರೆ ಮತ್ತು ಇದೇ ಕಾರಣದಿಂದಾಗಿ ಅವರು ಕಿರುಕುಳಕ್ಕೂ ಒಳಗಾಗುತ್ತಾರೆ. “ನಮ್ಮನ್ನು ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿ ಮೂರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಲಾಗುತ್ತದೆ. ಪೊಲೀಸರು ಬಡವರನ್ನು ಬೇಗ ಹಿಡಿಯುತ್ತಾರೆ. ಮನಸ್ಸು ಬಂದರೆ ವಶಕ್ಕೂ ಪಡೆಯುತ್ತಾರೆ “ ಎನ್ನುತ್ತಾರೆ ಕರುಣಾ.
ಕರುಣಾ, ಸಂತ್ರಾ ಮತ್ತು ಸಾರಂಗ ವತ್ವ ಪಟ್ಟಣದ ಚಾರ್ ಮಲಿಯಾ ಮುನ್ಸಿಪಲ್ ಹೌಸಿಂಗ್ ಕಾಲನಿಯಲ್ಲಿ ನೆರೆಹೊರೆಯ ನಿವಾಸಿಗಳು. ತಾವಿರುವ ಮನೆಗಳಲ್ಲಿ ಮೂಲಭೂತ ಸೌಕರ್ಯಗಳಾದ ನಿಯಮಿತ ನೀರು ಮತ್ತು ಚರಂಡಿ ವ್ಯವಸ್ಥೆ ಇಲ್ಲ ಎನ್ನುತ್ತಾರೆ. ಬಹಳಷ್ಟು ಹೋರಾಡಿದ ನಂತರ ವಿದ್ಯುತ್ ಸಂಪರ್ಕವೊಂದು ದೊರೆತಿದೆ.


























