ರಸ್ತೆ ಮುಗಿಯುವ ಮೊದಲೇ ಜಿಪಿಎಸ್ ಸಿಗ್ನಲ್ ವಿಫಲಗೊಳ್ಳುತ್ತದೆ.
ನಾಗಪುರದಿಂದ ದಕ್ಷಿಣಕ್ಕೆ ಒಂದು ಗಂಟೆಯ ಪ್ರಯಾಣದ ದೂರದಲ್ಲಿರುವ ಭಾನ್ಸೋಲಿ (ಸಾವಂಗಿ) ಗ್ರಾಮದ ಹೊರಗಿನ ಕಿರಿದಾದ ಡಾಂಬರು ರಸ್ತೆ ಧೂಳಿನ ರಸ್ತೆಯಾಗಿ ಮಾರ್ಪಟ್ಟಿದೆ, ಈ ದಾರಿ ಹತ್ತಿ ಮತ್ತು ತೊಗರಿ ಹೊಲಗಳ ನಡುವೆ ಒಂದು ಗೆರೆಯನ್ನು ಎಳೆದು ಬೇರ್ಪಡಿಸಿದಂತೆ ಕಾಣುತ್ತಿತ್ತು.
ಕಿರ್ಸಾನ್ ಜಗ್ಮಾಲ್ ರಬಾರಿ ನಮಗಾಗಿ ಬೈಕಿನಲ್ಲಿ ಕಾಯುತ್ತಿದ್ದರು. 45 ವರ್ಷದ ಅವರು ನಮ್ಮ ಕಾರನ್ನು ಅಲ್ಲೇ ನಿಲ್ಲಿಸುವಂತೆ ಹೇಳಿದರು. ಸುಮಾರು 2,500 ಕುರಿ ಮತ್ತು ಆಡುಗಳನ್ನು ಒಳಗೊಂಡಿರುವ ಅವರ ತಾಂಡಾವನ್ನು ತಲುಪಲು ರಸ್ತೆಯ ಮುಂದಿರುವ ಆಳವಿಲ್ಲದ ಒಂದು ಸಣ್ಣ ಹಳ್ಳವನ್ನು ದಾಟಿ ಹೋಗಬೇಕಿತ್ತು. ಆ ದಾರಿಯಲ್ಲಿ ಕಾರ್ ಹೋಗುವುದು ಸಾಧ್ಯವಿರಲಿಲ್ಲ.
ಇನ್ನೊಂದು ಕಡೆ ನಾಲ್ಕು ಕುಟುಂಬಗಳು - ಕಿರ್ಸಾನ್ ಅವರ ನಿರಂತರ ವಲಸೆ ಹೋಗುವ ಡೇರಾ (ತಾಂಡಾ) - ಪ್ರಯಾಣ ಹೊರಟಿದ್ದವು. ಗಟ್ಟಿಮುಟ್ಟಾದ ಎತ್ತುಗಳು ಎಳೆಯುತ್ತಿದ್ದ ಎರಡು ಲೋಹದ ಗಾಡಿಗಳು ಅವರಿಗೆ ಸಂಬಂಧಿಸಿದ ಹಲವು ಸಾಮಾಗ್ರಿಗಳಿಂದ ತುಂಬಿದ್ದವು - ಹಗ್ಗದ ಮಂಚಗಳು (ಚಾರ್ಪಾಯ್), ಸ್ಟೀಲ್ ಪಾತ್ರೆಗಳು, ಬಟ್ಟೆಯ ಮೂಟೆಗಳು, ಮಣ್ಣಿನ ಗಡಿಗೆಗಳು, ಹಗ್ಗಗಳು, ಬಲೆಗಳು ಮತ್ತು ಪೆಟ್ಟಿಗೆಗಳು ಅದರಲ್ಲಿದ್ದವು. ಸಾಂಪ್ರದಾಯಿಕ ಕಪ್ಪು ಬಣ್ಣದ ಮೂರು ತುಂಡುಗಳ ಉಡುಗೆಯಾದ — ಚೋಲಿ (ರವಿಕೆ), ಘಾಘ್ರಾ (ಲಂಗ) ಮತ್ತು ಲುಡ್ಕಿ (ಮುಸುಕು) ಧರಿಸಿದ ಮಹಿಳೆಯರು ಈ ಗಾಡಿಗಳನ್ನು ನಡೆಸುತ್ತಿದ್ದರು. ಕುರಿ ಮತ್ತು ಆಡಿನ ಮರಿಗಳು ಒಂದೇ ಸಮನೆ ಕೂಗುತ್ತಿದ್ದವು. ಸಣ್ಣ ನಾಯಿಮರಿಯೊಂದು ಹಗ್ಗವನ್ನು ಎಳೆಯುತ್ತಾ, ತಾನು ಮುಂದೊಂದು ದಿನ ವಹಿಸಿಕೊಳ್ಳಲಿರುವ 'ಮಂದೆಯ ವ್ಯವಸ್ಥಾಪಕ'ನ ಜವಾಬ್ದಾರಿಯ ತಾಲೀಮು ನಡೆಸುತ್ತಿತ್ತು.
ಗುಂಪು ಅಲ್ಲಿಂದ ಮರೆಯಾಯಿತು.












