54 ವರ್ಷದ ಕಿರಣ್ ಗಹಲ ಮತ್ತು ಇತರ ಆದಿವಾಸಿ ರೈತರಿಗೆ ಇಂತಹದ್ದೊಂದು ಅನುಭವ ಮೊದಲನೆಯದ್ದೇನಲ್ಲ.
2026ರ ಜನವರಿ 19ರಂದು, ಅವರು ಪಾಲ್ಘರ್ ಜಿಲ್ಲೆಯ ಡೊಲ್ಹಾರಿ ಬುದ್ರುಕ್ ಗ್ರಾಮದಲ್ಲಿರುವ ತಮ್ಮ ಪುಟ್ಟ ಮನೆಯಿಂದ, ಕೆಂಪು ಟಿ-ಶರ್ಟ್ ಮತ್ತು ಕತ್ತಲ್ಲಿ ಶಾಲು ಧರಿಸಿ ಹೊರಬಂದರು. ಅಲ್ಲೇ ನಿಂತು ಕಾಯುತ್ತಿದ್ದ ಟೆಂಪೋ ಟ್ರಕ್ ಒಂದನ್ನು ಹತ್ತಿದ ಅವರು, ಇತರೆ ಆದಿವಾಸಿ ರೈತರ ಗುಂಪಿನೊಂದಿಗೆ ಚರೋಟಿ ಗ್ರಾಮದತ್ತ ಪ್ರಯಾಣ ಬೆಳೆಸಿದರು. ಅದು ಮಹಾರಾಷ್ಟ್ರದ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಆಯೋಜಿಸಿದ್ದ ಮತ್ತೊಂದು ಬೃಹತ್ ಪ್ರತಿಭಟನಾ ಮೆರವಣಿಗೆಗೆ ಆರಂಭದ ತಾಣವಾಗಿತ್ತು.
ಮಾಧ್ಯಮ ವರದಿಗಳು ಮತ್ತು ಎಐಕೆಎಸ್ ಅಂದಾಜಿನ ಪ್ರಕಾರ, ಇಲ್ಲಿ ಹತ್ತಾರು ಸಾವಿರ, ಬಹುಶಃ ಸುಮಾರು 50,000 ದಷ್ಟು ರೈತರು ಜಮಾಯಿಸಿದ್ದಾರೆ. ಇವರು ಪ್ರಮುಖವಾಗಿ ಪಾಲ್ಘರ್ ಜಿಲ್ಲೆಯ ಆದಿವಾಸಿ ಸಮುದಾಯಗಳಿಗೆ ಸೇರಿದವರು. ಇವರುಭೂ ಹಕ್ಕುಗಳ ಸಮರ್ಪಕ ಅನುಷ್ಠಾನ, ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಮರುಜಾರಿ, ವಾಡ್ವನ್ ಬಂದರು ಯೋಜನೆ ರದ್ದು, ಹಾಗೂ ಕುಡಿಯುವ ಮತ್ತು ನೀರಾವರಿ ಬಳಕೆಗೆ ನೀರಿನ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಇವರು ಜಿಲ್ಲಾಧಿಕಾರಿ ಕಚೇರಿಯತ್ತ ತಮ್ಮ ಕಾಲ್ನಡಿಗೆ ಜಾಥಾವನ್ನು ಆರಂಭಿಸಿದ್ದರು.











