ʼರಾಜ ಸುಪಾಡ್ಕನ್ನೊʼ –ಗುಜರಾತಿಯಲ್ಲಿ ಆನೆ ಕಿವಿಯ ರಾಜ – ನನ್ನ ಬಾಲ್ಯದ ಅಚ್ಚುಮೆಚ್ಚಿನ ಕಥೆಗಳಲ್ಲಿ ಇದು ಒಂದು. ಇದನ್ನು ನಾನು ಮೊದಲ ಬಾರಿಗೆ ನನ್ನ ತಾಯಿಯಿಂದ ಕೇಳಿದೆ. ನಂತರ, ನಾನು ಇದರ ಹಲವಾರು ಆವೃತ್ತಿಗಳನ್ನು ಕೇಳಿದೆ. ಗಿಜುಭಾಯಿ ಬಧೇಕಾ ಅವರ ಮಕ್ಕಳಿಗಾಗಿ ಬರೆದ ಕಿರು ಕಥೆಗಳ ಪುಸ್ತಕದಲ್ಲಿ ಕೂಡ ಇದರ ಒಂದು ಆವೃತ್ತಿಯನ್ನು ನಾನೇ ಓದಿದೆ. ಬಧೇಕಾ ಅವರ ಪುಸ್ತಕದಲ್ಲಿ ಪ್ರಪಂಚದಾದ್ಯಂತದ ಅನೇಕ ಜಾನಪದ ಕಥೆಗಳನ್ನು ಅಳವಡಿಸಲಾಗಿತ್ತು. ಬಹುಶಃ ರಾಜ ಸುಪಾಡ್ಕನ್ನೊ ಕಥೆಗೆ ರಾಜ ಮೈದಾದ ಕತ್ತೆ ಕಿವಿಯ ಕಥೆ ಸ್ಫೂರ್ತಿಯಾಗಿರಬಹುದು.
ಹಸಿದು ದಾರಿತಪ್ಪಿದ ರಾಜನೊಬ್ಬ ಕಾಡಿನಲ್ಲಿ ಒಂದು ಗುಬ್ಬಚ್ಚಿಯ ಕುತ್ತಿಗೆ ಮುರಿದು ತಿಂದಿದ್ದ. ಆ ಕಾರಣಕ್ಕಾಗಿ ಅವನಿಗೆ ದೊಡ್ಡ, ಆನೆಗಳ ಕಿವಿಯಂತಹ ಕಿವಿಗಳನ್ನು ಹೊಂದುವ ಶಾಪ ಸಿಕ್ಕಿತ್ತು. ಅರಮನೆಗೆ ಮರಳಿದ ನಂತರ, ಅವನು ತನ್ನ ಪ್ರಜೆಗಳ ಸೂಕ್ಷ್ಮ ನೋಟದಿಂದ ತನ್ನ ಕಿವಿಗಳನ್ನು ಬಗೆಬಗೆಯ ಶಿರಸ್ತ್ರಾಣಗಳು ಮತ್ತು ಸ್ಕಾರ್ಫ್ಗಳ ಅಡಿಯಲ್ಲಿ ಅಡಗಿಸಿಕೊಂಡು ಉಳಿದ ದಿನಗಳನ್ನು ಕಳೆದನು. ಆದರೆ ಸಮಯ ಬಂದಾಗ, ಅವನು ತನ್ನ ಹತೋಟಿಗೆ ಸಿಗದ ಕೇಶರಾಶಿ ಮತ್ತು ನಿಯಂತ್ರಿಸಲಾಗದ ಗಡ್ಡವನ್ನು ಕತ್ತರಿಸಲು ಕ್ಷೌರಿಕನೊಬ್ಬನನ್ನು ಕರೆಯಬೇಕಾಯಿತು.
ರಾಜನ ಕಿವಿಯನ್ನು ನೋಡಿ ಕ್ಷೌರಿಕನು ದಿಗ್ಭ್ರಮೆಗೊಂಡನು. ಅವನ ದೊಡ್ಡ ಕಿವಿಗಳ ನಾಚಿಕೆಗೇಡಿನ ರಹಸ್ಯ ಈಗ ಬಹಿರಂಗವಾಗುವ ಅಪಾಯದಲ್ಲಿತ್ತು. ಶಕ್ತಿಶಾಲಿ ರಾಜನು ಆ ಸಾಮಾನ್ಯ ಕ್ಷೌರಿಕನನ್ನು ಬೆದರಿಸಿ, ಆ ರಹಸ್ಯವನ್ನು ಯಾರಿಗೂ ಹೇಳದಂತೆ ಆಜ್ಞಾಪಿಸಿದನು. ಆದರೆ, ರಾಜನ ಕ್ಷೌರಿಕನು ಆ ರಹಸ್ಯವನ್ನು ತನ್ನೊಳಗೆ ಇಟ್ಟುಕೊಳ್ಳಲಾಗದೆ, ಕಾಡಿನಲ್ಲಿ ಒಂದು ಮರದ ಬಳಿ ಹೋಗಿ ಅದನ್ನು ಪಿಸುಗುಟ್ಟಿದನು.
ಯಾವುದೋ ಸಂದರ್ಭದಲ್ಲಿ ಮರವು ಮರ ಕಡಿಯುವವನಿಗೆ ಎದುರಾದಾಗ, ಆ ಮರವು ರಾಜನ ಆನೆ ಕಿವಿಯ ರಹಸ್ಯದ ಬಗ್ಗೆ ಹಾಡಿತು. ಮರ ಕಡಿಯುವವನು ಆ ಮಾಂತ್ರಿಕ ಮರವನ್ನು ಡೋಲು ತಯಾರಕನಿಗೆ ಮಾರಿದನು. ಅವನು ಅದರಿಂದ ಡಹರೆ ಎಂಬ ವಾದ್ಯವನ್ನು ಮಾಡಿದನು. ಅದನ್ನು ನುಡಿಸಿದಾಗಲೆಲ್ಲಾ ಅದೇ ಹಾಡನ್ನು ಹಾಡುತ್ತಿತ್ತು. ಮತ್ತು ಬೀದಿಗಳಲ್ಲಿ ಡೋಲು ನುಡಿಸುತ್ತಾ ಕಾಣಿಸಿಕೊಂಡ ಒಬ್ಬ ಮನುಷ್ಯನನ್ನು ತಕ್ಷಣವೇ ರಾಜನ ಬಳಿ ಕರೆತರಲಾಯಿತು… ನಾನು ನೆನಪಿಸಿಕೊಂಡಂತೆ, ರಾಜನು ತನ್ನ ಪಾಪಗಳಿಂದ ಮುಕ್ತಿ ಪಡೆಯಲು ತನ್ನ ರಾಜ್ಯದಲ್ಲಿ ಒಂದು ಪಕ್ಷಿಧಾಮವನ್ನು ಸ್ಥಾಪಿಸಬೇಕೆಂದು ತಿಳಿದುಕೊಳ್ಳುವವರೆಗೂ ಕಥೆ ಮುಂದುವರೆಯುತ್ತದೆ.



