ಪ್ರತಿ ದಿನವೂ ಅನಂತಪುರದ ಅಂಬೇಡ್ಕರ್ ಪ್ರತಿಮೆಯು ಹೊಸ ಹೂವಿನ ಹಾರದಿಂದ ಅಲಂಕೃತಗೊಳ್ಳುತ್ತದೆ. ಮುಂಜಾನೆ ಸುಮಾರು 8.30ರ ಹೊತ್ತಿಗೆ ಹೂ ಮಾರಾಟಗಾರ ಎ. ಸುಭಾನ್, ತನ್ನ ಪರಿವಾರದವರು ತಯಾರಿಸಿದ ಕೆಂಪು ಗುಲಾಬಿ ಅಥವಾ ಸುಗಂಧರಾಜ ಹೂಗಳ ಹಾರದೊಂದಿಗೆ ಮೆಟ್ಟಿಲುಗಳನ್ನು ಹತ್ತಿ ಚಿನ್ನದ ಬಣ್ಣವನ್ನು ಬಳಿದ ಪ್ರತಿಮೆಯೆಡೆಗೆ ಸಾಗುತ್ತಾರೆ. ಸುಭಾನ್ ಅಥವಾ ಹದಿನೇಳರ ವಯಸ್ಸಿನ ಅವರ ಸೋದರಳಿಯ ಬಾಲು ಈ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದು, ಎಂದಿಗೂ ಅದನ್ನು ತಪ್ಪಿಸುವುದಿಲ್ಲ.
ಸಂಚಾರಕ್ಕೆ ಅಡ್ಡಲಾಗಿದ್ದ ಡಾ. ಅಂಬೇಡ್ಕರ್ ಅವರ ಹಳೆಯ ಪ್ರತಿಮೆಯನ್ನು ಕೆಡವಿ, ಈಗಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ ನಂತರ ಸುಮಾರು 2010ರಲ್ಲಿ ಈ ಪದ್ಧತಿಯು ಆರಂಭವಾಯಿತು. ಆಂಧ್ರ ಪ್ರದೇಶದ ಅನಂತಪುರದ ಮಧ್ಯ ಭಾಗದಲ್ಲಿರುವ ಗಡಿಯಾರದ ಗೋಪುರದಿಂದ ದಕ್ಷಿಣಕ್ಕೆ ಸುಮಾರು ಒಂದು ಕಿ.ಮೀ. ದೂರದಲ್ಲಿರುವ ಇದು, ಸುಭಾನ್ ಅವರ ಹೂ ಮಾರುವ ಅಂಗಡಿಯಿಂದ ಕಾಲ್ನಡಿಗೆಯ ದೂರದಲ್ಲಿದೆ.
ಇದಕ್ಕೆ ನಿಕಟವಾಗಿರುವ ಇತರೆ ಪ್ರತಿಮೆಗಳಿಗೆ ಇಷ್ಟೊಂದು ಅದೃಷ್ಠವಿಲ್ಲ. ಇದೇ ರಸ್ತೆಯಲ್ಲಿ ಗಡಿಯಾರದ ಗೋಪುರದ ನಂತರದ ಮೊದಲ ಪ್ರತಿಮೆ ಇಂದಿರಾ ಗಾಂಧಿಯವರದು. ಈಗ ಇದನ್ನು ಸೆಣಬಿನ ಬಟ್ಟೆಯಿಂದ ಮುಚ್ಚಲಾಗಿದೆ. 2004ರಿಂದ 2014ರವರೆಗೆ ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದು ಉತ್ತಮ ದಿನಗಳನ್ನು ಕಂಡಿದೆ. ಆಂಧ್ರ ಪ್ರದೇಶವನ್ನು ತೆಲಂಗಾಣವಾಗಿ ವಿಭಜಿಸುವುದನ್ನು ವಿರೋಧಿಸುತ್ತಿದ್ದ ಪ್ರತಿಭಟನಾಕಾರರು 2013ರಲ್ಲಿ ಹಳೆಯ ಪ್ರತಿಮೆಯನ್ನು ಒಡೆದು ಸುಟ್ಟುಹಾಕಿದರು. ನಂತರದಲ್ಲಿ ಹೊಸ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಆದರೆ ಅದಿನ್ನೂ ಮುಸುಕಿನಲ್ಲಿಯೇ ಇದೆ. ಈ ಮಾರ್ಗದಲ್ಲಿರುವ ರಾಜೀವ್ ಗಾಂಧಿಯವರ ಪ್ರತಿಮೆಯನ್ನೂ ಮುಚ್ಚಲಾಗಿದೆ. ಇವು, ಬಹುಶಃ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಏಳಿಗೆಯ ಮಂದಗತಿಯನ್ನು ಬಿಂಬಿಸುತ್ತವೆ.







