ಈ ಮೇ ತಿಂಗಳಲ್ಲಿ ಈದ್ ಅಲ್-ಅಧಾ (ಜೂನ್ ಆರಂಭದಲ್ಲಿ) ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಲು ಮೆಹಬೂಬ್ ಬಾಲಿಯಾ ಹಸೇನ್ ನಗರಕ್ಕೆ ಮರಳಿದರು. ಮೇಸ್ತ್ರಿ ಕೆಲಸ ಮಾಡುವ ಅವರ ಕುಟುಂಬವು ವರ್ಷಗಳ ಪರಿಶ್ರಮದಿಂದ ಇಟ್ಟಿಗೆ ಇಟ್ಟಿಗೆಯಾಗಿ ಜೋಡಿಸಿ ಕಟ್ಟಿದ ಎರಡೂವರೆ ಅಂತಸ್ತಿನ ಮನೆಯಿದು. ಇದರಲ್ಲಿ ಐದು ಕೋಣೆಗಳಿವೆ ಮತ್ತು ಭವಿಷ್ಯದಲ್ಲಿ ಅಂಗಡಿಯನ್ನು ತೆರೆಯಲು ಕೆಳ ಮಹಡಿಯಲ್ಲಿ ಸ್ವಲ್ಪ ಜಾಗವೂ ಇದೆ. ಮೆಹಬೂಬ್, ಅವರ ಪತ್ನಿ ಮತ್ತು ಗೃಹಿಣಿ ಸೂರ್ನಾ ಬೀಬಿ (30) ಮತ್ತು ಅವರ ಮೂವರು ಮಕ್ಕಳು ವಾಸಿಸುವ ಮನೆಯ ಭಾಗಕ್ಕೆ ಇನ್ನೂ ಗಾರೆ ಮಾಡಿಲ್ಲ. ಅವರ ಹಿರಿಯ ಮಗ ಬಕುಲ್ ಶೇಖ್ (16), ಶಾಲೆ ಬಿಟ್ಟು ಹತ್ತಿರದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಕಿರಿಯ ಮಕ್ಕಳಾದ ಸಾಗರ್ ಶೇಖ್ (12) ಮತ್ತು ರೆಹಾನ್ ಶೇಖ್ (7) ಸ್ಥಳೀಯ ಶಾಲೆಯಲ್ಲಿ ಓದುತ್ತಿದ್ದಾರೆ. ಪವಿತ್ರ ಕುರ್ಬಾನ್ ಮತ್ತು ಮೆಹಬೂಬ್ ಮನೆಗೆ ಮರಳಿದ ಸಂತೋಷವನ್ನು ಆಚರಿಸಲು, ಅವರ ಕುಟುಂಬವು ಧಾರ್ಮಿಕ ಬಲಿದಾನದ ವ್ಯವಸ್ಥೆಗಳನ್ನು ಸಹ ಮಾಡಿತ್ತು.
ಆದರೆ ಹಾಗಾಗಲಿಲ್ಲ. "ಥಾಣೆಯಲ್ಲಿರುವ ನಿರ್ಮಾಣ ಸ್ಥಳದಿಂದ ಪದೇ ಪದೇ ಕರೆಗಳು ಬಂದವು." ನಂತರ ಅವರನ್ನು ಹಿಂದಕ್ಕೆ ಕರೆಸಿಕೊಂಡರು. ಮೆಹಬೂಬ್ ಮಹಾರಾಷ್ಟ್ರಕ್ಕೆ ವಿಮಾನದಲ್ಲಿ ಹಿಂದಿರುಗಿ ತನ್ನ ಕೆಲಸದಲ್ಲಿ ತೊಡಗಿಸಿಕೊಂಡರು - ಕುಟುಂಬ ಮತ್ತು ಸಂಭ್ರಮಗಳನ್ನು ತೊರೆದು.
ಜೂನ್ 9ರಂದು, ಅವರು ಸ್ಥಳೀಯ ಚಹಾ ಅಂಗಡಿಯೊಂದರಲ್ಲಿ ಚಹಾ ಕುಡಿಯುತ್ತಿದ್ದಾಗ, ಪೊಲೀಸರು ಯಾವುದೇ ವಿವರಣೆಯಿಲ್ಲದೆ ಅವರನ್ನು ಕರೆದೊಯ್ದು, ಥಾಣೆಯ ಮೀರಾ ರಸ್ತೆಯಲ್ಲಿರುವ ಶ್ರೀ ಎಲ್.ಆರ್. ತಿವಾರಿ ಇಂಜಿನಿಯರಿಂಗ್ ಕಾಲೇಜು ಹತ್ತಿರದ ಔಟ್ಪೋಸ್ಟ್ಗೆ ಕರೆದೊಯ್ದರು. ರಾತ್ರಿ, ಅವರನ್ನು ಮೀರಾ ರೋಡ್ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರ ಪೌರತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಕೇಳಲಾಯಿತು.
“'ನೀನು ಬಾಂಗ್ಲಾದೇಶಿ ಅಲ್ವಾ?' ಎಂದು ಅಧಿಕಾರಿಗಳು ನನ್ನನ್ನು ಹಿಂದಿಯಲ್ಲಿ ಕೇಳಿದರು. ನಾನು 'ನಾನು ಪಶ್ಚಿಮ ಬಂಗಾಳದವನು' ಎಂದು ಹೇಳಿ, ಅವರಿಗೆ ನನ್ನ ಆಧಾರ್ ಮತ್ತು ಪ್ಯಾನ್ ಕಾರ್ಡ್ ತೋರಿಸಿದೆ. ಅದಕ್ಕೆ ಅವರು, 'ಈ ದಿನಗಳಲ್ಲಿ ಇವುಗಳನ್ನು ಐದು ರೂಪಾಯಿಗೆ ಖರೀದಿಸಬಹುದು' ಎಂದು ಹೇಳಿದರು” ಎಂದು ಮೆಹಬೂಬ್ ಈ ವರದಿಗಾರನಿಗೆ ತಿಳಿಸಿದರು.
ಹೇಗೋ ಉಪಾಯ ಮಾಡಿ, ಅವರು ಬಾಳಿಯಾ ಹಸೇನ್ ನಗರದಲ್ಲಿರುವ ತನ್ನ ಕುಟುಂಬಕ್ಕೆ ರಹಸ್ಯವಾಗಿ ಫೋನ್ ಮಾಡಿದರು. ಕೂಡಲೇ ಕುಟುಂಬದವರು ಮಹಿಶಾಸ್ಥಲಿಯಲ್ಲಿನ ಸ್ಥಳೀಯ ಗ್ರಾಮ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಿ, ಎಲ್ಲಾ ಅಗತ್ಯ ದಾಖಲೆಗಳನ್ನು ಮೀರಾ ರೋಡ್ ಪೊಲೀಸ್ ಠಾಣೆಗೆ ಕಳುಹಿಸಿದರು. "ನಾಲ್ಕು ದಿನಗಳ ಕಾಲ, ನಾನು ತೀವ್ರ ಮಾನಸಿಕ ಹಿಂಸೆಯನ್ನು ಅನುಭವಿಸಿದೆ" ಎಂದು ಮೆಹಬೂಬ್ ಹೇಳುತ್ತಾರೆ. "ಹಗಲಿನಲ್ಲಿ ನನ್ನನ್ನು ಠಾಣೆಯ ಹೊರಗೆ ಕೂರಿಸುತ್ತಿದ್ದರು ಮತ್ತು ರಾತ್ರಿಗಳಲ್ಲಿ ಪೊಲೀಸ್ ಶಿಬಿರದಲ್ಲಿ ಇರಿಸುತ್ತಿದ್ದರು."
ಮೀರಾ ರೋಡ್ ಪೊಲೀಸರು, ತಮ್ಮ ಕಡೆಯಿಂದ ತಪ್ಪಾಗಿದೆ ಎನ್ನುವ ಮೆಹಬೂಬ್ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಹಿರಿಯ ಇನ್ಸ್ಪೆಕ್ಟರ್ ಮೇಘನಾ ಬುರಾಡೆ, "ಯಾವುದೇ ತಪ್ಪು ಮಾಡಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತು ಮೆಹಬೂಬ್ ಶೇಖ್ ಮತ್ತು ಇತರರ ಬಂಧನವನ್ನು ಪೊಲೀಸ್ ಕಮಿಷನರ್ ಆದೇಶದ ಮೇರೆಗೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.