ಉತ್ತರ ಕೇರಳದ ಕೋಯಿಕ್ಕೋಡ್ನಲ್ಲಿ ಮುಂಗಾರು ಮಳೆ ಸುರಿಯುತ್ತಿದೆ. ಆದರೆ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ರಾತ್ರಿ ಮಲಗಿದ್ದ ಆ ಮುದುಕನಿಗೆ ಮಳೆಯಿಂದ ಯಾವ ತೊಂದರೆಯೂ ಆಗುತ್ತಿಲ್ಲ. ಅವರು ಮಲಗಿರುವ ಬಟ್ಟೆಯ ಟೆಂಟ್ನಿಂದ ಏನೂ ಉಪಯೋಗವಾಗುತ್ತಿಲ್ಲ. ಹಗಲಿನ ಹೊತ್ತು ಅವರು ಪ್ರತಿಭಟನಾ ನಿರತ ಆದಿವಾಸಿ ಕುಟುಂಬಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಧರಣಿಯಲ್ಲಿ ಕುಳಿತುಕೊಂಡಿರುವುದನ್ನು ನೀವು ನೋಡಬಹುದು. ಸುಮಾರು 70 ದಿನಗಳಿಂದ ನಿಲಂಬೂರಿನ 60 ಬುಡಕಟ್ಟು ಕುಟುಂಬಗಳು ಸಮೀಪದ ಮಲಪುರಂನಲ್ಲಿ ರಾಜ್ಯ ಸರ್ಕಾರವು ತಮಗೆ ತುಂಬಾ ಕಾಲದ ಹಿಂದೆ ಮಾತು ಕೊಟ್ಟಂತೆ ಭೂಮಿಯನ್ನು ನೀಡುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸುತ್ತಿದ್ದರು.
ಈ ಹೋರಾಟದ ಕೇಂದ್ರಬಿಂದು ಅದರ ಸಂಚಾಲಕ, ನೈತಿಕ ಸ್ಥೈರ್ಯವೆಂದರೆ 96 ವರ್ಷದ ಅಯಿನೂರ್ ವಾಸು. ಇವರು ಈ ಮುಷ್ಕರದಲ್ಲಿ ಆರಂಭದಿಂದಲೂ ಇದ್ದಾರೆ. ಜನರು ಪ್ರೀತಿಯಿಂದ 'ಗ್ರೋ' ವಾಸು ಎಂದು ಕರೆಯುತ್ತಾರೆ. ಸಣಕಲು ದೇಹದ, ಮೆದುವಾಗಿ ಮಾತನಾಡುವ ವಾಸು ಅವರ ದನಿಯಲ್ಲಿ ಯಾವ ದಬ್ಬಾಳಿಕೆಗೂ ಬಗ್ಗದ ದೃಢವಿಶ್ವಾಸವನ್ನು ಕಾಣಬಹುದು. ಹೆಚ್ಚಿನ ಗಂಡಸರು ಈ ವಯಸ್ಸಿನಲ್ಲಿ ಸುಮ್ಮನೆ ಆರಾಮವಾಗಿ ಮನೆಯಲ್ಲಿ ದಿನ ಕಳೆಯುತ್ತಿರುವಾಗ, ವಾಸು ಅವರು ಮನೆ ಮಠ ಕಳೆದುಕೊಂಡವರ ಬೆನ್ನ ಹಿಂದೆ ನಿಂತು ಹೋರಾಟದ ತೂಕವನ್ನು ಹೆಚ್ಚಿಸುತ್ತಿದ್ದಾರೆ. "ಸರ್ಕಾರ ಏನಾದರೊಂದು ನೆಪ ಹೇಳಿ ಈ [ಬುಡಕಟ್ಟು] ಕುಟುಂಬಗಳಿಗೆ ಮೋಸ ಮಾಡುತ್ತಿದೆ," ಎಂದು ಅವರು ಹೇಳುವಾಗ ಸುಕ್ಕುಗಟ್ಟಿದ ಮುಖದಲ್ಲಿರುವ ಅವರ ಕಣ್ಣುಗಳು ತೀಕ್ಷ್ಣವಾಗಿ ನೋಡುತ್ತಿದ್ದವು. "ಭೂಮಿ ಅವರ ಹಕ್ಕು, ಭಿಕ್ಷೆಯಲ್ಲ," ಎನ್ನುತ್ತಾರೆ ಅವರು.
2023–24ರಲ್ಲಿ ನಿಲಂಬೂರಿನ ಈ ಕುಟುಂಬಗಳು ಐಟಿಡಿಪಿ (ಇಂಟಿಗ್ರೇಟೆಡ್ ಟ್ರೈಬಲ್ ಡೆವಲಪ್ಮೆಂಟ್ ಪ್ರಾಜೆಕ್ಟ್) ಕಚೇರಿಯ ಮುಂದೆ 314 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ ನಂತರ ಈ ಹೋರಾಟವನ್ನು ನಡೆಸುತ್ತಿವೆ.
ಆರು ತಿಂಗಳೊಳಗೆ ಈ 60 ಕುಟುಂಬಗಳಿಗೆ ತಲಾ 50 ಸೆಂಟ್ಸ್ ಭೂಮಿ ನೀಡುವುದಾಗಿ ಜಿಲ್ಲಾಧಿಕಾರಿ ಲಿಖಿತ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ನಿಲ್ಲಿಸಲಾಯಿತು. ಆದರೆ 15 ತಿಂಗಳ ನಂತರ ಸರ್ಕಾರ ಕುಂಟು ನೆಪಗಳನ್ನು ಹೇಳುತ್ತಾ ತಾನು ಕೊಟ್ಟ ಈ ಭರವಸೆಗಳನ್ನು ಮುಂದೂಡಲು ಶುರು ಮಾಡಿತು. ಕುಟುಂಬಗಳು ಮತ್ತೆ ಬೀದಿಗಿಳಿದು ಪ್ರತಿಭಟನೆ ಆರಂಭಿಸಿದವು. ಒಂದು ಕಾಲದಲ್ಲಿ ಪ್ರಖರ ನಕ್ಸಲೈಟ್ ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದ ಗ್ರೋ ವಾಸು ಅವರು ಈಗ ಈ ಹೋರಾಟದಲ್ಲಿ ಕೈಜೋಡಿಸಿದ್ದಾರೆ. ಹಗಲು ರಾತ್ರಿಗಳನ್ನು ಧರಣಿ ನಿರತ ಕುಟುಂಬಗಳ ಜೊತೆಗೆ ಕಳೆಯುತ್ತಿದ್ದಾರೆ.
ಇತ್ತೀಚಿನ ಕೆಲವು ವರ್ಷಗಳಿಂದ ಇವರು ಬೇರೆ ಬೇರೆ ಪ್ರಕರಣಗಳಲ್ಲಿ ಸರ್ಕಾರದೊಂದಿಗೆ ಸಂಘರ್ಷವನ್ನು ನಡೆಸುತ್ತಿದ್ದಾರೆ. 2023 ರಲ್ಲಿ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಪೊಲೀಸ್ ಕ್ರಮದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಇವರು ಎರಡು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ಇದು 2016 ನವೆಂಬರ್ ತಿಂಗಳ ಹಿಂದಿನ ಪ್ರಕರಣ. ನಿಲಂಬೂರು ಕಾಡಿನಲ್ಲಿ ಮಾವೋವಾದಿಗಳಾದ ಕೊಪ್ಪಂ ದೇವರಾಜನ್ ಮತ್ತು ಅಜಿತಾ ಅವರನ್ನು ನಕಲಿ ಎನ್ಕೌಂಟರ್ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿ ಇವರು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನ ಶವಾಗಾರದ ಹೊರಗೆ ನಿಂತು ಪ್ರತಿಭಟನೆ ನಡೆಸಿದ್ದಕ್ಕಾಗಿ ಬಂಧಿಸಲಾಗಿತ್ತು.
ಬಂಧನಕ್ಕೆ ಒಳಗಾದಾಗ ಇವರು ಜಾಮೀನು ಕೋರಿ ಅರ್ಜಿ ಹಾಕಲೂ ಹೋಗಲಿಲ್ಲ. ಹಿಂದಿನ ಅನುಭವದಿಂದಾಗಿ ಜೈಲುವಾಸ ಇವರನ್ನು ಕುಗ್ಗಿಸಲಿಲ್ಲ, ಬದಲಾಗಿ ಸರ್ಕಾರಿ ಪ್ರೇರಿತ ಹಿಂಸಾಚಾರದ ವಿರುದ್ಧದ ಇವರ ಟೀಕೆಯನ್ನು ಇನ್ನಷ್ಟೂ ಹರಿತಗೊಳಿಸಿತು.








