ಜಾನಾಬಾಯಿ ಸೊನಾವನೆ ತನ್ನ ಆಪ್ತ ಸ್ನೇಹಿತೆಯರೊಂದಿಗೆ ಎಂದೂ ವಾದಕ್ಕಿಳಿದವರಲ್ಲ ಅಥವಾ ಜಗಳ ಮಾಡಿದವರಲ್ಲ.
ಆದರೆ ಈ ವರ್ಷ ಪರಿಸ್ಥಿತಿ ಬದಲಾಗಿದೆ. "ನಾನು ಬೇಗನೆ ಸಿಟ್ಟಾಗುತ್ತಿದ್ದೆ ಮತ್ತು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಗೂ ಸ್ನೇಹಿತರೊಂದಿಗೆ ಜಗಳವಾಡಲು ಶುರುಮಾಡುತ್ತಿದ್ದೆ" ಎಂದು ಮಹಾರಾಷ್ಟ್ರದ ಭಾದೋಲೆ ಗ್ರಾಮದಲ್ಲಿರುವ ತಮ್ಮ ಸಣ್ಣ ಎರಡು ಕೋಣೆಗಳ ಮನೆಯ ಹೊರಗೆ ಕುಳಿತ 62 ವರ್ಷದ ಆ ಮಹಿಳೆ ಹೇಳುತ್ತಾರೆ.
2025ರ ಬೇಸಗೆಯಲ್ಲಿ ರಾಜ್ಯದ ಕೊಲ್ಹಾಪುರ ಜಿಲ್ಲೆಯಲ್ಲಿ ರಾತ್ರಿ ತಾಪಮಾನ ಗಣನೀಯವಾಗಿ ಹೆಚ್ಚಿತು. ಮತ್ತು ಜಾನಾಬಾಯಿಗೆ ನಿದ್ರಿಸಲು ಕಷ್ಟವಾಗತೊಡಗಿತು. ಮೊದಲಿಗೆ, ಈ ಅಸ್ವಸ್ಥತೆ ಒಂದು ಅಥವಾ ಎರಡು ದಿನಗಳಲ್ಲಿ ಕಡಿಮೆಯಾಗಬಹುದೆಂದು ಅವರು ಭಾವಿಸಿದ್ದರು. ಆದರೆ, ಕೆಲವೊಮ್ಮೆ ಅವರಿಗೆ ಕೇವಲ ಮೂರು ಗಂಟೆಗಳಷ್ಟು ಮಾತ್ರ ಅಡಚಣೆ ರಹಿತ ನಿದ್ರೆ ಮಾಡಲು ಸಾಧ್ಯವಾಗುತ್ತಿತ್ತು. ಹೀಗೆ ದಿನಗಳು ವಾರಗಳಾದವು, ವಾರಗಳು ತಿಂಗಳುಗಳವರೆಗೆ ಮುಂದುವರಿದವು. ಅವರು ಸದಾ ಕಿರಿಕಿರಿ ಮತ್ತು ದಣಿವಿನಿಂದ ಬಳಲುತ್ತಿದ್ದರು.
ಭೂಹೀನ ರೈತರಾಗಿರುವ ಜಾನಾಬಾಯಿ ಪ್ರತಿದಿನ ಎಂಟು ಗಂಟೆಗಳ ಕಾಲ ಇತರರ ಹೊಲಗಳಲ್ಲಿ ಬೆನ್ನುಮೂಳೆ ಮುರಿಯುವಂತೆ ಕೆಲಸ ಮಾಡುತ್ತಾರೆ. ಅವರು ಕಳೆ ತೆಗೆಯುತ್ತಾರೆ, ಭಾರವಾದ ಮೇವನ್ನು ಹೊರುತ್ತಾರೆ ಮತ್ತು ಬೆಳೆಗಳನ್ನು ಕೊಯ್ಲು ಮಾಡುತ್ತಾರೆ. ಸಂಜೆಯಾಗುವಷ್ಟರಲ್ಲಿ ಜೀವ ದಣಿದಿರುತ್ತದೆ – ಭುಜಗಳು ನೋಯುತ್ತಿರುತ್ತವೆ, ಇಡೀ ದಿನದ ಭಾರದಿಂದ ಕಾಲುಗಳು ಭಾರವಾಗಿರುತ್ತವೆ. ಇಂತಹ ದಿನದ ಕೊನೆಯಲ್ಲಿ, ಸಾಮಾನ್ಯವಾಗಿ ರಾತ್ರಿ 10 ಗಂಟೆಯ ಸುಮಾರಿಗೆ ಅವರು ತಮ್ಮ ಮನೆಯ ಪ್ರವೇಶದ್ವಾರದ ಬಳಿ ಮಲಗುತ್ತಾರೆ. ಹೀಗೆ ಮಲಗಿದರೆ ಮೊದಲೆಲ್ಲ ಕೆಲವೇ ನಿಮಿಷಗಳಲ್ಲಿ ಅವರಿಗೆ ನಿದ್ರೆ ಆವರಿಸುತ್ತಿತ್ತು.
ಆದರೆ ಆ ರಾತ್ರಿಗಳ ಗಾಢ ಮತ್ತು ಆರಾಮದಾಯಕ ನಿದ್ರೆ ಈಗ ದೂರದ ಕನಸಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಈ ಪ್ರದೇಶದಲ್ಲಿ ಏರುತ್ತಿರುವ ತಾಪಮಾನ ಮತ್ತು ತೇವಾಂಶವು ರಾತ್ರಿಯಿಡೀ ಅವರನ್ನು ಬೆವರುವಂತೆ ಮಾಡುತ್ತಿದೆ. ಚಡಪಡಿಸುತ್ತಾ ಹೊರಳಾಡುತ್ತಾ ವಿಶ್ರಾಂತಿಯಿಲ್ಲದೆ ರಾತ್ರಿ ಕಳೆಯುತ್ತಾರೆ. ಅವರ ಮನೆಯ ಮಾಡಿಗೆ ಹೊದೆಸಿರುವ ತಗಡಿನ ಕಾವು ಅವರನ್ನು ಮತ್ತೆ ಮತ್ತೆ ಎಚ್ಚರಗೊಳ್ಳುವಂತೆ ಮಾಡುತ್ತಿದೆ.
ಹೀಗೆ ಒಮ್ಮೆ ಎಚ್ಚರವಾದರೆ ಅವರಿಗೆ ಮತ್ತೆ ನಿದ್ರೆ ಬರಲು ಕನಿಷ್ಠ ಒಂದು ಗಂಟೆ ಬೇಕಾಗುತ್ತದೆ.












