"ಜನರು ಚೌಕಾಶಿ ಮಾಡುವುದು ತಮಾಷೆಯಾಗಿ ಕಾಣುತ್ತದೆ” ಎಂದು ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಥಾಟಿ ಮುಂಜಲು ಅಥವಾ ತಾಳೆ ಹಣ್ಣಿನ ಮಾರಾಟಗಾರರಾದ ಕುಪ್ಪಾ ಪಪ್ಪಾಲ ರಾವ್ ಹೇಳಿದರು. “ಅನೇಕರು ದೊಡ್ಡ ಕಾರುಗಳಲ್ಲಿ ಬರುತ್ತಾರೆ, ಅಚ್ಚುಕಟ್ಟಾಗಿ ಮಾಸ್ಕ್ ಧರಿಸಿರುತ್ತಾರೆ, ಒಂದು ಡಜನ್ಗೆ ರೂ 50 ಇರುವ ಮುಂಜಲುಗಳ ಬೆಲೆಯನ್ನು ರೂ. 30-40ಕ್ಕೆ ಕೇಳುತ್ತಾರೆ” ಅವರು ನಗುತ್ತಾ ಹೇಳುತ್ತಾರೆ.
ಜನರು ಆ 20 ರೂಪಾಯಿಗಳನ್ನು ಉಳಿಸಿ ಅದೇನು ಮಾಡುತ್ತಾರೋ ಎಂದು ಪಪ್ಪಾಲ ರಾವ್ ಆಶ್ಚರ್ಯದಿಂದಕೇಳುತ್ತಾರೆ. “ಆ ಹಣದ ಅಗತ್ಯ ಅವರಿಗಿಂತ ಹೆಚ್ಚು ನನಗಿದೆಯೆನ್ನುವುದು ಅವರಿಗೆ ಅರ್ಥವಾಗುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಮಾಮೂಲಿ ದಿನಗಳಲ್ಲಾದರೆ ಆ ಹಣ ನನಗೆ ಮನೆಗೆ ಹೋಗುವ ಬಸ್ಚಾರ್ಜ್ಗೆ ಸಾಲುತ್ತಿತ್ತು.”
ಇತರ ಮುಂಜಲು ಮಾರಾಟಗರರಂತೆಯೇ 48 ವರ್ಷದ ಪಪ್ಪಾಲ ರಾವ್ ಕೂಡ ಕೇವಲ ಒಂದು ಹರಿದ ಖಾಕಿ ಬಣ್ಣದ ಮಾಸ್ಕ್ ಧರಿಸಿದ್ದರು. ಅವರು ಮೇ 29ರಂದು ವಿಶಾಖಪಟ್ಟಣಂ ನಗರದ ವಿಶಾಖಪಟ್ಟಣಂನ ಇಂದಿರಾ ಗಾಂಧಿ ವನ್ಯಜೀವಿ ಅಭಯಾರಣ್ಯದ ಬಳಿ ರಾಷ್ಟ್ರೀಯ ಹೆದ್ದಾರಿ 16ರ ಪಕ್ಕದಲ್ಲಿ ತನ್ನ ವ್ಯಾಪಾರವನ್ನು ನಡೆಸುತ್ತಿದ್ದರು. ಕಳೆದ 21 ವರ್ಷಗಳಿಂದ ತಾಟಿನಿಂಗುಗಳನ್ನು ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. “ಕಳೆದ ವರ್ಷ ನಾವು ದಿನಕ್ಕೆ ಸುಮಾರು 700-800 ಸಂಪಾದಿಸುತ್ತಿದ್ದೆವು- ಮುಂಜಲು ನಮ್ಮನ್ನು ಎಂದಿಗೂ ನಿರಾಶೆಗೊಳಿಸಿಲ್ಲ” ಎನ್ನುತ್ತಾರೆ.
ಆದರೆ, ಈ ವರ್ಷ ಮುಂಜಲು ಮಾರಾಟಗಾರರು ಕೋವಿಡ್ -19 ಲಾಕ್ಡೌನ್ನಿಂದಾಗಿ ಆ ಪ್ರಮುಖ ವ್ಯಾಪಾರದ ವಾರಗಳನ್ನು ಕಳೆದುಕೊಂಡರು. ಅವರು ಈ ಬಾರಿ ಮೇ ಕೊನೆಯ ವಾರದಲ್ಲಿ ಹಣ್ಣುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. "ನಾವು ಹಣ್ಣುಗಳನ್ನು ಮಾರಾಟ ಮಾಡಲು ಅಥವಾ ಬೇರೆಲ್ಲಿಯೋ ಕೆಲಸ ಮಾಡಲು ಸಾಧ್ಯವಿಲ್ಲ" ಎಂದು ಪಪ್ಪಾಲ ರಾವ್ ಅವರ ಪತ್ನಿ ಕಪ್ಪ ರಾಮ (37) ಗ್ರಾಹಕರಿಗಾಗಿ ಒಂದು ಡಜನ್ ಮುಂಜಲುಗಳನ್ನು ಪ್ಯಾಕ್ ಮಾಡುತ್ತಾ ಹೇಳಿದರು. ಅವರು ಮತ್ತು ಪಪ್ಪಾಲ ರಾವ್ ಅವರು ವಿಶಾಖಪಟ್ಟಣಂ ಜಿಲ್ಲೆಯ ಆನಂದಪುರಂ ಮಂಡಲದಲ್ಲಿರುವ ತಮ್ಮ ಮನೆಯಿಂದ 20 ಕಿ.ಮೀ ದೂರದಲ್ಲಿ ಮುಂಜಲು ಮಾರಾಟ ಮಾಡಲು ಒಟ್ಟಿಗೆ ಪ್ರಯಾಣಿಸುತ್ತಾರೆ.
ಈ ವರ್ಷ ಮಾರಾಟ ಅಷ್ಟೇನೂ ಉತ್ತಮವಾಗಿಲ್ಲ. ದಿನವೊಂದಕ್ಕೆ ಕೇವಲ 30-35 ಡಜನ್ ಮುಂಜಲುಗಳು ಮಾತ್ರ ಮಾರಾಟವಾಗುತ್ತಿವೆ”ಎಂದು ರಾಮ ವಿವರಿಸಿದರು. “ದಿನದ ಕೊನೆಯಲ್ಲಿ, ಸಾರಿಗೆ ಮತ್ತು ಆಹಾರ ವೆಚ್ಚಗಳ ನಂತರ, ನಮಗೆ ರೂ. 200-300 ಉಳಿಯುತ್ತದೆ," ಎಂದು ಪಪ್ಪಾಲ ರಾವ್ ಹೇಳಿದರು, ಕಳೆದ ವರ್ಷ ಅವರು ದಿನವೊಂದಕ್ಕೆ 46 ಡಜನ್ ಹಣ್ಣುಗಳನ್ನು ಮಾರಾಟ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಈ ವರ್ಷ, ಅವರು ಮತ್ತು ರಾಮ ಅವರು ಜೂನ್ 16ರವರೆಗೆ ಕೇವಲ 12 ದಿನಗಳ ಕಾಲ ಮುಂಜಲುವನ್ನು ಮಾರಾಟ ಮಾಡಲು ಸಾಧ್ಯವಾಯಿತು. ನಂತರ ಜೂನ್ನಲ್ಲಿ ತಾಟುನಿಂಗುಗಳ ಮಾರಾಟವು ದಿನಕ್ಕೆ ಸುಮಾರು 20 ಡಜನ್ಗಳಿಗೆ ಇಳಿಯಿತು.









