ಲತಾಬಾಯಿಯವರಿಗೆ ವಾರದಲ್ಲಿ ಒಂದು ದಿನವೂ ರಜೆ ಹಾಕಲು ಸಾಧ್ಯವಿಲ್ಲ. ಪ್ರತಿದಿನ ಕೆಲಸ ಮಾಡುತ್ತಾರೆ. ಆರೋಗ್ಯ ಕೆಟ್ಟು ಒಂದು ದಿನ ರಜೆ ತೆಗೆದುಕೊಂಡರೆ ಅವರು ಕೆಲಸ ಮಾಡುವ ಗುತ್ತಿಗೆ ಕಂಪನಿ ದಿನಕ್ಕೆ 500 ರುಪಾಯಿ ದಂಡ ಹಾಕುತ್ತದೆ.
ಲಾತೂರು ನಗರದಲ್ಲಿ ಕಸ ಸಂಗ್ರಹಿಸುವ ಕೆಲಸ ಮಾಡುವ ಲತಾಬಾಯಿಯವರ ಕೆಲಸವನ್ನು ಗುರುತಿಸಿ ಅವರಿಗೆ ಪ್ರಶಸ್ತಿಯನ್ನೂ ನೀಡಲಾಗಿದೆ.
“ಇಡೀ ಲಾತೂರು ಸಿಟಿಯಲ್ಲಿ ನಾನೊಬ್ಬಳೇ ಮಹಿಳಾ ಡ್ರೈವರ್. ನನಗೆ ನಿಗದಿಪಡಿಸಿದ ವಸತಿ ಪ್ರದೇಶಗಳನ್ನು ಸ್ವಚ್ಛವಾಗಿಟ್ಟ ಕಾರಣಕ್ಕೆ 2011 ರಲ್ಲಿ ಲಾತೂರು ಉತ್ಸವದಲ್ಲಿ ಶಾಸಕ ಅಮಿತ್ ದೇಶ್ಮುಖ್ ಅವರ ಕೈಯಿಂದ ಲಾತೂರು ಭೂಷಣ ಪ್ರಶಸ್ತಿ ಸಿಕ್ಕಿತು” ಎಂದು ಅವರು ಪಾರಿಗೆ ತಿಳಿಸಿದರು.
“ಮುನ್ಸಿಪಲ್ ಕಾರ್ಪೋರೇಷನ್ನ ಅಧಿಕಾರಿಗಳು ಬಂದು ಆ ಜಾಗವನ್ನು ನೋಡಿದರು. ಅವರಿಗೆ ಒಂದೇ ಒಂದು ಹಸಿ ಕಸ, ಒಣ ಕಸ ಸಿಗಲಿಲ್ಲ. ಅಷ್ಟು ದೊಡ್ಡ ಕಾರ್ಯಕ್ರಮದಲ್ಲಿ ದೊಡ್ಡ ದೊಡ್ಡ ಜನರ ಮುಂದೆ, ಮಂತ್ರಿಗಳ ನಡುವೆ ಆ ಪ್ರಶಸ್ತಿಯನ್ನು ತೆಗೆದುಕೊಳ್ಳುವಾಗ ತುಂಬಾ ಭಾವುಕಳಾಗಿದ್ದೆ. ನನ್ನ ಹೋರಾಟವನ್ನು ಗುರುತಿಸುತ್ತಾರೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಅದು ಕೇವಲ ಆ ಒಂದು ದಿನಕ್ಕೆ ಮಾತ್ರ ಸೀಮಿತವಾಗುತ್ತದೆ ಎಂದೂ ನಾನು ಭಾವಿಸಿರಲಿಲ್ಲ,” ಎಂದು ಅವರು ಹೇಳುತ್ತಾರೆ.
ಮಹಾರಾಷ್ಟ್ರದ ಲಾತೂರು ನಗರದಲ್ಲಿ ವಾಸಿಸುವ 40 ವರ್ಷ ಪ್ರಾಯದ ಲತಾಬಾಯಿ ರಸಲ್ ಅವರು, “ನಾನು 2002 ರಿಂದ ಈ ಲಾತೂರಿನಲ್ಲಿ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದೇನೆ,” ಎನ್ನುತ್ತಾರೆ. 2002 ರಲ್ಲಿ ಅವರ ಪತಿ ತೀರಿಕೊಂಡರು. ಏಳು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಮದುವೆಯಾಗುವಾಗ ಲತಾ ಅವರಿಗೆ 17 ವರ್ಷ ಪ್ರಾಯ. ಗಂಡನ ಮರಣದ ನಂತರ ಬದುಕು ಕಟ್ಟಿಕೊಳ್ಳಲು, ತಮ್ಮ ಐವರು ಮಕ್ಕಳನ್ನು ಸಾಕಲು ಅವರು ಕಸ ಸಂಗ್ರಹಿಸುವ ಕೆಲಸಕ್ಕೆ ಇಳಿದರು.
















