ಅಂಗೈಯಲ್ಲಿ ಬೀಜಗಳನ್ನು ಹಿಡಿದ ಅಶೋಕ್ ಗಟ್ಕಲ್, “ಶುದ್ಧ ಬಿಳಿ ಬಣ್ಣದ ಈ ಬೀಜಗಳನ್ನು ನೋಡಿ? ಎಂದರು. ಮತ್ತೊಂದು ಅಂಗೈನಲ್ಲಿ ಹಾನಿಗೀಡಾದ ಸೋಯಾಬೀನ್ಗಳನ್ನು ಹಿಡಿದಿದ್ದ ಅವರು, “ಇವುಗಳ ಮಾರುಕಟ್ಟೆ ದರ ಒಂದು ಕ್ವಿಂಟಲ್ಗೆ 3000-3500 ರೂ.ಗಳು. ಆದರೆ ಈ ಬಾರಿ ಬಹುತೇಕ ಬೀಜಗಳಲ್ಲಿ ಕಪ್ಪು ಚುಕ್ಕೆಗಳು ಮತ್ತು ಶಿಲೀಂಧ್ರ(fungus)ಗಳಿವೆ. ಇಂತಹ ಬೀಜಗಳು ಮಾರಾಟವಾಗುವುದಿಲ್ಲ. ಇದರಿಂದ ನನಗೆ ಯಾವುದೇ ಸಂಪಾದನೆಯಿಲ್ಲ” ಎಂದು ತಿಳಿಸಿದರು.
ನವೆಂಬರ್ 11ರಂದು ನಾನು ರತ್ಗಲ್ಲಿ ಹಳ್ಳಿಯ ಗಟ್ಕಲ್ ಅವರ ಜಮೀನಿಗೆ ಭೇಟಿಯಿತ್ತಾಗ ಒಂದು ಕುಡಗೋಲಿನಿಂದ ಹಾನಿಗೀಡಾದ ಬೆಳೆಯನ್ನು ತೆರವುಗೊಳಿಸುತ್ತಿದ್ದ ಅವರು, ಒಬ್ಬಂಟಿಯಾಗಿ ಕೆಲಸಮಾಡುತ್ತಿದ್ದರು. ತಮ್ಮ ಹಣೆ ಮತ್ತು ಮೂಗಿನಿಂದ ಹನಿಯುತ್ತಿದ್ದ ಬೆವರನ್ನು ಒರೆಸಿಕೊಳ್ಳುತ್ತಾ, “ನಾನು ಕೃಷಿ ಕಾರ್ಮಿಕರಿಗೆ ಕೂಲಿಯನ್ನು ಕೊಡುವುದಾದರೂ ಹೇಗೆ?” ಎಂದರು.
ಅಕ್ಟೋಬರ್ನಲ್ಲಿ ಗಟ್ಕಲ್ರವರ ಮೂರು ಎಕರೆಯು ಎರಡು ವಾರಗಳವರೆಗೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿತ್ತು. ಹಿಂದಿನ ತಿಂಗಳ ಭಾರಿ ಮಳೆಯಿಂದಾಗಿ ಶೇಕಡ 90ರಷ್ಟು ಸೋಯಾಬೀನ್ ಬೆಳೆಯು ಕೊಳೆತುಹೋಯಿತು. ಇವರ ಹಳ್ಳಿಯು ನೆಲೆಗೊಂಡಿರುವ ನಾಸಿಕ್ ಜಿಲ್ಲೆಯ ದಿನ್ಡೋರಿ ತಾಲ್ಲೂಕಿನಲ್ಲಿ ಅಕ್ಟೋಬರ್ 1ರಿಂದ 12ನೇ ನವೆಂಬರ್ವರೆಗೆ ಸುಮಾರು 173.2 ಮಿ.ಮೀ. ಮಳೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿನ ಮಳೆಯ ಪ್ರಮಾಣ ಸುಮಾರು 71 ಮಿ. ಮೀ. (ಭಾರತೀಯ ಹವಾಮಾನ ಇಲಾಖೆಯ ಅನುಸಾರ).
ರತ್ಗಲ್ಲಿಯಲ್ಲಿ ಮಳೆಗಾಲದ ಆರಂಭದ ಜೂನ್ ತಿಂಗಳಿನಲ್ಲಿ ಮಳೆಯ ಪ್ರಮಾಣ ಕಡಿಮೆಯಿದ್ದಾಗ್ಯೂ, ಋತುವಿನ ಕೊನೆಯ ಭಾಗದ ಸೆಪ್ಟೆಂಬರ್ನಲ್ಲಿ ಮಳೆಯು ಸಧಾರಿಸಿತು. ಹೀಗಾಗಿ, 51 ವರ್ಷದ ಅಶೋಕ್ ಉತ್ತಮ ಇಳುವರಿಯ ಭರವಸೆಯಲ್ಲಿದ್ದರು. ಆದರೆ ಅಕ್ಟೋಬರ್ನ ಅನಿರೀಕ್ಷಿತ ಮಳೆಯು ಇವರಿಗೆ ಬಲವಾದ ಹೊಡೆತವನ್ನು ನೀಡಿತು. ಅಕ್ಟೋಬರ್ ಅಂತ್ಯದ ವೇಳೆಗೆ, ತಲಾಥಿ ಕಛೇರಿಗೆ ತಮ್ಮ ಬೆಳೆಯು ನಷ್ಟವಾದದ್ದರ ಬಗ್ಗೆ ಇವರು ಮಾಹಿತಿಯನ್ನಿತ್ತರು. ಆದರೆ ಎರಡು ವಾರಗಳ ನಂತರವೂ ಯಾರೂ ಪರಿಶೀಲನೆಗೆ ಬರಲೇ ಇಲ್ಲ.










