ಸೊಳ್ಳೆಪರದೆಯಿಂದ ಆವೃತವಾಗಿದ್ದ ಚಾಪೆಯ ಮೇಲೆ ಮಲಗಿದ್ದ ಕೆಹಲ್ಯ ವಸವೆ ನಿದ್ದೆಯಲ್ಲಿ ನೋವಿನಿಂದ ವ್ಯಾಕುಲರಾಗಿ ನರಳುತ್ತಿದ್ದರು. ಈ ಅಸ್ವಸ್ಥತೆಯನ್ನು ನೋಡಿದ ಅವರ 18ರ ಮಗಳು ಲೀಲ, ಪಾದವನ್ನು ಉಜ್ಜುತ್ತ, ಅವರಿಗೆ ಸ್ವಲ್ಪ ಆರಾಮವನ್ನು ನೀಡುವ ಪ್ರಯತ್ನದಲ್ಲಿ ತೊಡಗಿದರು.
ಹಲವು ತಿಂಗಳಿನಿಂದಲೂ ಆತ ದಿನವಿಡೀ ಮಂಚದ ಮೇಲೆಯೇ ಇರುತ್ತಾರೆ. ಅವರ ಎಡ ಕೆನ್ನೆಯ ಮೇಲೆ ಗಾಯವಿತ್ತಲ್ಲದೆ, ಬಲಭಾಗದ ಮೂಗಿನ ಹೊಳ್ಳೆಯಲ್ಲಿ ಆಹಾರದ ಟ್ಯೂಬ್ ಅನ್ನು ಅಳವಡಿಸಲಾಗಿತ್ತು. “ಅವರು ಹೆಚ್ಚು ಚಲಿಸುತ್ತಿರಲಿಲ್ಲವಷ್ಟೇ ಅಲ್ಲ, ಮಾತೂ ಆಡುತ್ತಿರಲಿಲ್ಲ. “ಗಾಯವು ನೋಯುತ್ತದೆ” ಎಂಬುದಾಗಿ 42ರ ಅವರ ಪತ್ನಿ ಪೆಸ್ರಿ ತಿಳಿಯಪಡಿಸಿದರು.
ವಾಯುವ್ಯ ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಚಿಂಚ್ಪಾಡ ಕ್ರಿಶ್ಚಿಯನ್ ಆಸ್ಪತ್ರೆಯಲ್ಲಿ, ಈ ವರ್ಷದ 21ನೇ ಜನವರಿಯಂದು 45ರ ಕೆಹಲ್ಯ ಅವರಿಗೆ ಕೆನ್ನೆಯ ಒಳಭಾಗದಲ್ಲಿ (buccal mucosa) ಕ್ಯಾನ್ಸರ್ ಪತ್ತೆಯಾಯಿತು.
ಮಾರ್ಚ್ ಒಂದರಂದು ಭಾರತದಲ್ಲಿ ಪ್ರಾರಂಭವಾದ ಕೋವಿಡ್ 19 ಲಸಿಕೆಯ ಎರಡನೆಯ ಹಂತದಲ್ಲಿ ನಲವತ್ತೈದರಿಂದ ಐವತ್ತೊಂಬತ್ತು ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಸಂಬಂಧಿಸಿದಂತೆ, ಲಸಿಕೆಗೆ ಅರ್ಹತೆಯನ್ನು ತಿಳಿಯಪಡಿಸುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳಲ್ಲಿನ 20 ಸಹ-ಅಸ್ವಸ್ಥತೆ(comobidities)ಗಳಲ್ಲಿ ಅವರ ಕ್ಯಾನ್ಸರ್ ರೋಗವೂ ಒಂದು. “ಪ್ರಾರಂಭದಲ್ಲಿ ಅರವತ್ತು ವರ್ಷ ವಯಸ್ಸಿನವರು ಮತ್ತು ಸಹ-ಅಸ್ವಸ್ಥತೆಯುಳ್ಳ ನಲವತ್ತೈದರಿಂದ ಅರವತ್ತು ವರ್ಷ ವಯಸ್ಸಿನವರನ್ನು ಒಳಗೊಂಡಂತೆ, ಸೂಕ್ತ ವಯೋಮಾನದಲ್ಲಿರುವವರಿಗೆ ಲಸಿಕೆಯು ಮುಕ್ತವಾಗಿ ಲಭ್ಯವಾಗುತ್ತದೆ” ಎಂಬುದಾಗಿ ಈ ಮಾರ್ಗಸೂಚಿಗಳು ಮಾಹಿತಿಯನ್ನಿತ್ತವು. (ಸಹ-ಅಸ್ವಸ್ಥತೆಯಿರಲಿ, ಇಲ್ಲದಿರಲಿ, ಏಪ್ರಿಲ್ ಒಂದರಿಂದ ನಲವತ್ತೈದು ವರ್ಷಕ್ಕಿಂತಲೂ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯನ್ನು ಮುಕ್ತಗೊಳಿಸಲಾಯಿತು.)
ಆದರೆ ವಯಸ್ಸಿನ ಮಿತಿಗಳು, ಸಹ-ಅಸ್ವಸ್ಥತೆಯ ಪಟ್ಟಿಗಳು ಅಥವಾ ವಿಸ್ತೃತ ಅರ್ಹತೆಗಳಿಂದ ಕೆಶಲ್ಯ ಮತ್ತು ಪೆಸ್ರಿಯವರಿಗೆ ಯಾವುದೇ ರೀತಿಯ ಉಪಯೋಗವಿಲ್ಲ. ವಸವೆ ಕುಟುಂಬವು ಪರಿಶಿಷ್ಟ ವರ್ಗವೆನಿಸಿದ ಭಿಲ್ ಸುಮುದಾಯಕ್ಕೆ ಸೇರಿದ್ದು, ಅವರಿಗೆ ಲಸಿಕೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಧಡ್ಗಾಂವ್ ಗ್ರಾಮೀಣ ಆಸ್ಪತ್ರೆಯ ಲಸಿಕೆಯ ಕೇಂದ್ರವೇ ಅವರಿಗೆ ಹತ್ತಿರದ್ದು. ಅಕ್ರನಿ ತಾಲ್ಲೂಕಿನ ಅವರ ಹಳ್ಳಿ, ಕುಂಭಾರಿಯಿಂದ ಇದು ಇಪ್ಪತ್ತು ಕಿ.ಮೀ. ದೂರದಲ್ಲಿದೆ. “ನಾವು ಅಲ್ಲಿಗೆ ಕಾಲ್ನಡಿಗೆಯಲ್ಲೇ ತಲುಪಬೇಕು. ಬೇರೆ ಆಯ್ಕೆಯಿಲ್ಲ” ಎನ್ನುತ್ತಾರೆ ಪೆಸ್ರಿ.”












