65 ವರ್ಷದ ಮುನಾವರ್ ಖಾನ್ ಪೊಲೀಸ್ ಸ್ಟೇಷನ್ ತಲುಪಿದಾಗ ಒಳಗಿನಿಂದ ಮಗನ ಹತಾಶ ಗೋಳಾಟ ಕೇಳಿಸುತ್ತಿತ್ತು. ಸುಮಾರು 15 ನಿಮಿಷಗಳ ನಂತರ ಗೋಳಾಟದ ಸದ್ದು ತಣ್ಣಗಾಯಿತು. ಇಸ್ರಾಯೇಲ್ ಖಾನ್ ಅವರ ತಂದೆ ಪೊಲೀಸರು ತನ್ನ ಮಗನಿಗೆ ಹೊಡೆಯುವುದನ್ನು ನಿಲ್ಲಿಸಿರಬಹುದೆನ್ನುವ ಭರವಸೆ ಹೊಂದಿದ್ದರು.
ಇದಕ್ಕೂ ಮುನ್ನ ಇಸ್ರಾಯೇಲ್ ಧಾರ್ಮಿಕ ಸಭೆಯೊಂದರಲ್ಲಿ ಭಾಗವಹಿಸಿದ ನಂತರ ಭೋಪಾಲ್ನಿಂದ ಹೊರಟಿದ್ದರು. ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಅವರು ಅಲ್ಲಿಂದ 200 ಕಿಲೋಮೀಟರ್ ದೂರದಲ್ಲಿರುವ ತಮ್ಮ ಊರಾದ ಗುನಾ ಎನ್ನುವಲ್ಲಿಗೆ ಮರಳುತ್ತಿದ್ದರು.
ಅವರು ಆ ಸಂಜೆ (ನವೆಂಬರ್ 21, 2022) ಗುನಾ ತಲುಪಿದರು, ಆದರೆ ಮನೆಗೆ ಬರಲಿಲ್ಲ. ರಾತ್ರಿ 8 ಗಂಟೆ ಸುಮಾರಿಗೆ ಗೋಕುಲ್ ಸಿಂಗ್ ಕಾ ಚಕ್ ಎಂಬ ಬಸ್ತಿ (ಕಾಲೋನಿ) ಯಲ್ಲಿರುವ ಅವರ ಮನೆಯಿಂದ ರಾತ್ರಿ 8 ಗಂಟೆ ಸುಮಾರಿಗೆ, ನಾಲ್ವರು ಪೊಲೀಸ್ ಅಧಿಕಾರಿಗಳು ಇಸ್ರಾಯೇಲ್ ಪ್ರಯಾಣಿಸುತ್ತಿದ್ದ ಆಟೋರಿಕ್ಷಾವನ್ನು ತಡೆದು ನಿಲ್ಲಿಸಿ ಕರೆದೊಯ್ದರು.
ಇಸ್ರಾಯೇಲ್ ಬಂಧನಕ್ಕೊಳಗಾಗುವ ಹೊತ್ತಿನಲ್ಲಿ ಅವರು ತನ್ನ ಅತ್ತೆಯೊಡನೆ ಮಾತನಾಡುತ್ತಿದ್ದರು, ಎಂದು ಅವರ ಅಕ್ಕ 32 ವರ್ಷದ ಬಾನೊ ಹೇಳುತ್ತಾರೆ. "ನಂತರ ಅವನು ಪೊಲೀಸ್ ಕಸ್ಟಡಿಯಲ್ಲಿದ್ದಾನೆ ಎಂದು ನಮಗೆ ತಿಳಿಯಿತು."
ಅಲ್ಲಿಂದ ಅವರನ್ನು ಹತ್ತಿರದ ಕುಶ್ಮುಡಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಪೊಲೀಸ್ ಅಧಿಕಾರಿಗಳು ನಿರ್ದಯವಾಗಿ ಥಳಿಸುತ್ತಿರುವಾಗಲೇ ತಂದೆ ಮುನಾವರ್ ಠಾಣೆಗೆ ಬಂದಿದ್ದರು.
ಸುಮಾರು 45 ನಿಮಿಷಗಳ ನಂತರ, ಮುನಾವರ್ ತನ್ನ ಮಗನ ಹತಾಶ ಕೂಗು ಮೌನವಾಗಿರುವುದು ಪೊಲೀಸರು ಹೊಡೆಯುವುದನ್ನು ನಿಲ್ಲಿಸಿದ್ದರಿಂದಾಗಿರದೆ, ಪೊಲೀಸರು ನಿರ್ದಯವಾಗಿ ಬಡಿದಿದ್ದರಿಂದ ಎನ್ನುವುದು ಅವರ ಗಮನಕ್ಕೆ ಬಂತು. ಇಸ್ರಾಯೇಲ್ ಅವರ ಮರಣೋತ್ತರ ಪರೀಕ್ಷೆಯು ಅವರು ಹೃದಯ ವೈಫಲ್ಯ ಮತ್ತು ತಲೆಗೆ ಆದ ಗಾಯದಿಂದ ಸಾವನ್ನಪ್ಪಿದ್ದಾರೆ ಎಂದು ಸೂಚಿಸಿತು.
ನಂತರ ಮಧ್ಯಪ್ರದೇಶದ ಮಾಧ್ಯಮಗಳು, ಜೂಜುಕೋರನನ್ನು ಉಳಿಸುವ ಪ್ರಯತ್ನದಲ್ಲಿ ಪೊಲೀಸರ ಮೇಲೆ ದಾಳಿಯೆಸಗಿದ ಗುಂಪಿನ ಭಾಗವಾಗಿದ್ದ 30 ವರ್ಷದ ಮುಸ್ಲಿಂ ಕಾರ್ಮಿಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿ ಮಾಡಿದ್ದವು.
ಆದರೆ ಅವರ ಕುಟುಂಬ ಈ ಮಾತನ್ನು ಒಪ್ಪುವುದಿಲ್ಲ: “ಅವನು ಮುಸ್ಲಿಂ ಆಗಿದ್ದ ಕಾರಣಕ್ಕೆ ಅವನನ್ನು ವಶಕ್ಕೆ ಪಡೆದುಕೊಂಡರು” ಎನ್ನುತ್ತಾರೆ ಇಸ್ರಾಯೇಲ್ ಅವರ ತಾಯಿ ಮುನ್ನಿ ಬಾಯಿ.
ಇಲ್ಲಿ ಇಸ್ರಾಯೇಲ್ ಪೊಲೀಸ್ ಕಸ್ಟಡಿಯಲ್ಲಿ ಸತ್ತಿದ್ದು ವಿವಾದವಲ್ಲ, ಅವರು ಹೇಗೆ ಸತ್ತರು ಎನ್ನುವುದು ನಿಜವಾದ ವಿವಾದ.






