“ಸರ್ಕಾರದ ಯೋಜನೆಗಳ ಬಗ್ಗೆ ನಮಗೆ ಹೇಗೆ ಗೊತ್ತಾಗುತ್ತದೆ? ನಮ್ಮಂತವರಿಗಾಗಿ ಇರುವ ಯೋಜನೆಗಳ ಬಗ್ಗೆ ಮಾಹಿತಿ ನೀಡುವವರು ಯಾರೂ ಇಲ್ಲ” ಎನ್ನುತ್ತಾರೆ ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯ 42 ವರ್ಷದ ಸಂಜೀವನಿ ಬೆಡಗೆ. ತುಳಜಾಪುರ ತಾಲ್ಲೂಕಿನ ಜಲಕೋಟ್ ಗ್ರಾಮದಲ್ಲಿ ರೈತರಾಗಿರುವ ಇವರು, ತಮ್ಮ ಸಣ್ಣ ಆದಾಯವನ್ನು ಹೆಚ್ಚಿಸಿಕೊಳ್ಳಲು ಇತರರ ಹೊಲಗಳಲ್ಲಿಯೂ ಕೂಲಿ ಕೆಲಸ ಮಾಡುತ್ತಾರೆ. 2020ರಿಂದ ಅವರು ವಿವಿಧ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದರೂ, ಅವರ ಪ್ರತಿ ಪ್ರಯತ್ನವೂ ವಿಫಲವಾಗಿದೆ. “ನನ್ನ ಗಂಡ ಶಂಕರ್, ಜನವರಿ 24, 2020ರಂದು, ಲಾಕ್ಡೌನ್ ಆರಂಭವಾಗುವ ಕೆಲವೇ ದಿನಗಳ ಮೊದಲು, ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡರು” ಎಂದು ಸಂಜೀವನಿ ಹೇಳುತ್ತಾರೆ. “ಮನುಷ್ಯ ಸಾಯುತ್ತಾನೆ, ಆದರೆ ಸಾಲ ಸಾಯುವುದಿಲ್ಲ. ನನ್ನ ಗಂಡ ಸಾಲದ ಹೊರೆ ತಾಳಲಾರದೆ ಪ್ರಾಣ ಬಿಟ್ಟರು. ಈಗ ಆ ವಜ್ಜೆ ನನ್ನ ಮೇಲೆ ಬಿದ್ದಿದೆ” ಎಂದು ಅವರು ನೋವು ತೋಡಿಕೊಂಡರು.
ಅವರ ಗಂಡನ ತಂದೆಗೆ ಜಲಕೋಟ್ ಎನ್ನುವಲ್ಲಿ ಐದು ಎಕರೆ ಹೊಲವಿದೆ. ಅದರಲ್ಲಿ ಶಂಕರ್ ಮತ್ತು ಅವರ ಮೂವರು ಸಹೋದರರು ಒಟ್ಟಾಗಿ ಬೇಸಾಯ ಮಾಡುತ್ತಿದ್ದರು. “ನಮ್ಮ ಹೊಲಕ್ಕೆ ನೀರು ಸಿಗುವುದು ಮಳೆ ಬಂದರೆ ಮಾತ್ರ, ನೀರಾವರಿ ವ್ಯವಸ್ಥೆಯಿಲ್ಲ. ಆದರೂ, ಉತ್ತಮ ಬೆಲೆ ಸಿಗುವ ಕಾರಣ ಕೆಲವು ಹೆಚ್ಚು ನೀರು ಬಯಸುವ ಬೆಳೆಗಳನ್ನು ಬೆಳೆಯುತ್ತೇವೆ” ಎಂದು ಸಂಜೀವನಿ ಹೇಳುತ್ತಾರೆ. “ಮಳೆಗಾಲದಲ್ಲಿ ಸೋಯಾಬೀನ್ ಮತ್ತು ತೊಗರಿ ಬೆಳೆಯುತ್ತೇವೆ, ಮತ್ತು ದೀಪಾವಳಿಯ ನಂತರ ಜೋಳ, ಗೋಧಿ ಮತ್ತು ಕಪ್ಪು ಕಡಲೆಯನ್ನು ಬಿತ್ತುತ್ತೇವೆ.”
2011ರಿಂದ 2014ರವರೆಗೆ, ಜೋಳ, ಗೋಧಿ ಮತ್ತುಕಪ್ಪು ಕಡಲೆ ಕ್ವಿಂಟಾಲಿಗೆಸುಮಾರು ರೂ. 2,200 ಬೆಲೆಗೆಮಾರಾಟವಾಗುತ್ತಿತ್ತು, ಸೋಯಾಬೀನ್ ಮತ್ತುತೊಗರಿ ಕ್ವಿಂಟಲ್ಗೆ ಸುಮಾರುರೂ. 5,000 ಬೆಲೆಯಿತ್ತು. ಮನೆಯಉಪಯೋಗಕ್ಕೆ ಸಾಕಾಗುವಷ್ಟು ಧಾನ್ಯವನ್ನುತೆಗೆದಿರಿಸಿದ ನಂತರ, ಅವರಿಗೆಸುಮಾರು 4 ಕ್ವಿಂಟಾಲ್ ಚಳಿಗಾಲದಬೆಳೆ (ಸುಮಾರು ರೂ. 26,400) ಮತ್ತು 5 ಕ್ವಿಂಟಾಲ್ ಸೋಯಾಬೀನ್ಮತ್ತು ತೊಗರಿ (ಸುಮಾರುರೂ. 50,000) ಉಳಿಯುತ್ತಿತ್ತು. ಇದರಿಂದಅವರ ವಾರ್ಷಿಕ ಆದಾಯಸುಮಾರು ರೂ. 76,400 ಆಗುತ್ತಿತ್ತು. ಈ ಹಣವನ್ನು ನಾಲ್ಕುಸಹೋದರರ ಕುಟುಂಬಗಳ ನಡುವೆನಾಲ್ಕು ಭಾಗಗಳಾಗಿ ವಿಂಗಡಿಸಲಾಗುತ್ತಿತ್ತು ಎಂದು ಸಂಜೀವನಿ ಜಲಕೋಟ್ಗ್ರಾಮದಲ್ಲಿ ನನಗೆ ತಿಳಿಸಿದರು.
“ನಾವು ವಾಸಿಸುತ್ತಿದ್ದಆ ಮಣ್ಣಿನ ಮನೆಯಲ್ಲಿ (ಹುಲ್ಲಿನ ಸೂರಿನೊಂದಿಗೆ) ಹಲವು ಸಮಸ್ಯೆಗಳಿದ್ದವು. ವಿಶೇಷವಾಗಿಮಳೆಗಾಲದಲ್ಲಿ, ಸೂರು ಸೋರುತ್ತಿತ್ತುಮತ್ತು ನಮ್ಮ ಮಕ್ಕಳುಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ಆದರೆ, ವೈದ್ಯಕೀಯ ಚಿಕಿತ್ಸೆಮಾತ್ರ ತುಂಬಾ ದುಬಾರಿಯಾಗಿತ್ತು” ಎಂದು ಅವರು ವಿವರಿಸುತ್ತಾರೆ.








