ಅನೇಕ ವರ್ಷಗಳಿಂದ ಭಗಬನ್ಪುರ್ನ ಪುರುಷರು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿನ ವಿದ್ಯುತ್ ಸ್ಥಾವರಗಳಲ್ಲಿ ಕೆಲಸಮಾಡಲು ವಲಸೆ ಹೋಗುತ್ತಿದ್ದಾರೆ. ಮೊದಲು 53ರ ಅಖಿಮುದ್ದೀನ್, ಇಪ್ಪತ್ತೈದು ವರ್ಷಗಳ ಹಿಂದೆ ಲೈನ್ಮನ್ ಆಗಿ ಕೆಲಸಮಾಡಲು ತೆರಳಿದರು. “ನಾನು ಹಿಮಾಚಲ ಪ್ರದೇಶದಲ್ಲಿದ್ದೆ. ಕೆಲಸವನ್ನು ಪ್ರಾರಂಭಿಸಿದಾಗ ದಿನವೊಂದಕ್ಕೆ ನನಗೆ 2.50 ರೂ.ಗಳು ದೊರೆಯುತ್ತಿದ್ದವು. ನಮಗೆ ಏನು ಸಾಧ್ಯವೋ ಅದನ್ನು ಮಾಡುತ್ತೇವೆ. ಸ್ವಲ್ಪ ಹಣವನ್ನು ಇಟ್ಟುಕೊಂಡು, ಉಳಿದದ್ದನ್ನು ಮನೆಗೆ ಕಳುಹಿಸುತ್ತೇವೆ. ಇದರಿಂದ ಕುಟುಂಬದ ಜೀವನೋಪಾಯವಾಗುತ್ತದೆ. ಇವರ ಪೀಳಿಗೆಯ ಕೆಲಸಗಾರರಿಂದ ರೂಪುಗೊಂಡ ಜಾಲಗಳಿಂದಾಗಿ ಅನಸ್ ಮತ್ತು ಅಕ್ರಂ, ಇವರನ್ನು ಅನುಸರಿಸುವುದು ಸುಲಭವಾಯಿತು.”
ಆದರೆ, ಇವರ ಉದ್ಯೋಗವು ಅಪಾಯದೊಂದಿಗೆ ಚೆಲ್ಲಾಟವಾಡುವಂಥದ್ದು. ವಿದ್ಯುತ್ ಆಘಾತದಿಂದಾಗಿ ತನ್ನ ಅನೇಕ ಸಹೋದ್ಯೋಗಿಗಳು ಮರಣಕ್ಕೀಡಾದುದನ್ನು ಅಥವಾ ಗಾಯಗೊಂಡಿದ್ದನ್ನು ಅಕ್ರಂ ನೋಡಿದ್ದಾರೆ. “ಅದು ಬಹಳ ಭಯಾನಕವಾದುದು. “ನಮಗಿರುವ ರಕ್ಷಣೆ ಅತ್ಯಲ್ಪ. ಯಾವಾಗ ಏನು ಬೇಕಾದರೂ ಆಗಬಹುದು. ಉದಾಹರಣೆಗೆ, ಇವರ ಸಹೋದರನನ್ನು ಮುಳುಗಿಸಿದಂತಹ ಪರಿಸರದ ವಿಕೋಪಗಳು (ಅನಸ್, ಈಗಲೂ ಪತ್ತೆಯಾಗಿಲ್ಲ. ಆತನ ದೇಹವೂ ದೊರೆತಿರುವುದಿಲ್ಲ). ಆದರೆ ನಮಗೆ ಆಯ್ಕೆಯೇ ಇಲ್ಲ. ಬದುಕುಳಿಯಲು ನಾವು ಹಣವನ್ನು ಸಂಪಾದಿಸಬೇಕು. ಮಾಲ್ದಾದಲ್ಲಿ ಯಾವುದೇ ಕೆಲಸವಿಲ್ಲ. ನಾವು ಇಲ್ಲಿಂದ ವಲಸೆ ಹೋಗಲೇಬೇಕು.”
ಮಾಲ್ದಾ, ದೇಶದ ಅತ್ಯಂತ ಬಡ ಜಿಲ್ಲೆಗಳಲ್ಲೊಂದು. ಇಲ್ಲಿನ ಗ್ರಾಮೀಣ ಜನರ ಬಹು ದೊಡ್ಡ ಭಾಗಕ್ಕೆ ಭೂಮಿಯಿಲ್ಲ. ಕೂಲಿಯನ್ನು ಅವಲಂಬಿಸಿದೆ. “ಜಿಲ್ಲೆಯಲ್ಲಿ ಕೃಷಿಯು ಉದ್ಯೋಗದ ಪ್ರಮುಖ ಸ್ರೋತವೆನಿಸಿದೆ. ಆದರೆ ಭೂಹಿಡುವಳಿಗಳು ಬಹುತೇಕವಾಗಿ ಚಿಕ್ಕವು ಹಾಗೂ ಅಲ್ಪ ಪ್ರಮಾಣದಲ್ಲಿವೆ. ಅವುಗಳಲ್ಲಿನ ಅನೇಕವು ಪುನರಾವರ್ತಿತ ಪ್ರವಾಹದಲ್ಲಿ ಮುಳುಗುತ್ತವೆ. ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಇದು ಕಾರ್ಯಸಾಧ್ಯವಾದುದಲ್ಲ. ಜಿಲ್ಲೆಯಲ್ಲಿ ಯಾವುದೇ ಕೈಗಾರಿಕೆಯಿಲ್ಲವಾಗಿ ಜನರು ಕೆಲಸಕ್ಕಾಗಿ ರಾಜ್ಯದಿಂದ ಹೊರಹೋಗುತ್ತಾರೆ” ಎನ್ನುತ್ತಾರೆ ಮಾಲ್ದಾದ ಹಿರಿಯ ಪತ್ರಕರ್ತ, ಸುಭ್ರೊ ಮೈತ್ರ.
2007ರಲ್ಲಿ ಪಶ್ಚಿಮ ಬಂಗಾಳ ಸರ್ಕಾರದಿಂದ ಪ್ರಕಟಿತಗೊಂಡ ಮಾಲ್ದಾ ಪ್ರದೇಶದ ಜಿಲ್ಲಾ ಮಾನವಾಭಿವೃದ್ಧಿ ವರದಿ: ಇದು, ಕೆಲಸಗಾರರ ವಲಸೆಯ ಕಾರಣಗಳನ್ನು ಎತ್ತಿ ತೋರಿಸುತ್ತದೆ. ವರದಿಯು ನೀರಿನ ಸಂಪನ್ಮೂಲಗಳ ಅಸಮಾನ ಹಂಚಿಕೆಯನ್ನು ಮತ್ತು ಕೃಷಿಗೆ ಸಂಬಂಧಿಸಿದ ಹವಾಮಾನದ ಪ್ರತಿಕೂಲ ಪರಿಸ್ಥಿತಿಗಳು ಜಿಲ್ಲೆಯ ಕೃಷಿ ಕೆಲಸಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದೆಯೆಂಬುದನ್ನು ಅವಲೋಕಿಸುತ್ತದೆ. ನಿಧಾನಗತಿಯ ನಗರೀಕರಣ, ಕೈಗಾರಿಕಾ ಚಟುವಟಿಕೆಗಳ ಕೊರತೆ, ಗ್ರಾಮೀಣ ಪ್ರದೇಶಗಳಲ್ಲಿನ ಕೆಲಸಕಾರ್ಯಗಳು ಋತುಗಳನ್ನು ಅವಲಂಬಿಸಿವೆ. ಈ ಕಾರಣದಿಂದಾಗಿ, ಕೂಲಿಯ ಮಟ್ಟವು ಕಡಿಮೆಯಾಗಿದ್ದು, ಅಪ್ರಮುಖ ಕೆಲಸಗಾರರನ್ನು ಕೆಲಸವನ್ನರಸಿ ದೂರದ ಸ್ಥಳಗಳಿಗೆ ತೆರಳುವಂತೆ ಒತ್ತಾಯಿಸಿವೆ.
ಏಪ್ರಿಲ್ ಮೊದಲ ವಾರದಲ್ಲಿ, ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದಾಗ್ಯೂ, 37ರ ನಿರಜ್ ಮೊಂಡಲ್ ಮಾಲ್ದಾದ ಮಾನಿಕ್ಚಕ್ ವಲಯದ ಭೂತ್ನಿ ದಿಯರ(ನದಿ ದಡದ ದ್ವೀಪಗಳು)ದಲ್ಲಿ ಪತ್ನಿ ಹಾಗೂ ವಯಸ್ಕ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು, ಉತ್ತಮ ಭವಿಷ್ಯವನ್ನರಸಿ ಮಾಲ್ದಾದಿಂದ ದೆಹಲಿಗೆ ತೆರಳಿದರು. “ಮಾಸ್ಕ್ ಧರಿಸಿ, ಜೀವನವನ್ನು ನಿಭಾಯಿಸಿ, ಲಾಕ್ಡೌನ್ [2020] ಆದಾಗಿನಿಂದಲೂ ಕೆಲಸವೇ ಇಲ್ಲ. ಸರ್ಕಾರದಿಂದ ನಮಗೆ ಏನು ದೊರೆಯಿತೋ ಅದರಲ್ಲೇ ಜೀವನ ಸಾಗಿಸಿದೆವು. ಆದರೆ ಕೈಯಲ್ಲಿ ಹಣವಿರಲಿಲ್ಲ. ಏನೇ ಆಗಲಿ, ಮಾಲ್ದಾದಲ್ಲಿ ಹೆಚ್ಚು ಕೆಲಸಗಳಿಲ್ಲ.”
ನೀರಜ್ಗೆ ಮಾಲ್ದಾದಲ್ಲಿ ಇನ್ನೂರು ರೂ. ಕೂಲಿ ದೊರೆತರೆ, ದೆಹಲಿಯಲ್ಲಿ 500-550ರವರೆಗೆ ಕೂಲಿ ದೊರೆಯುತ್ತದೆ. “ನೀವು ಹೆಚ್ಚಿಗೆ ಉಳಿಸಿ, ಮನೆಗೆ ಕಳುಹಿಸಬಹುದು. ಕುಟುಂಬದಿಂದ ದೂರವುಳಿಯಬೇಕಾಗುತ್ತದೆ ಎಂಬುದು ನಿಜವೇ ಆದರೂ, ಯಾರೂ ಬೇಕೆಂತಲೇ ಮನೆಯಿಂದ ಹೊರಡುವುದಿಲ್ಲ” ಎಂದರವರು.