"ಇಲ್ಲಿ ಒಂದು ದೊಡ್ಡ ಸಖುವಾ ಗಾಚ್ [ಮರ] ಇತ್ತು. ಆಗೆಲ್ಲ ಹಿಜ್ಲಾ ಗ್ರಾಮದ ಮತ್ತು ಸುತ್ತಮುತ್ತಲಿನ ಜನರು ಈ ಸ್ಥಳದಲ್ಲಿ ಒಟ್ಟು ಸೇರಿ ಬೈಸಿ [ಸಭೆ] ನಡೆಸುತ್ತಿದ್ದರು. ಈ ದೈನಂದಿನ ಕೂಟಗಳನ್ನು ಗಮನಿಸಿದ ಬ್ರಿಟಿಷರು ಮರವನ್ನು ಕತ್ತರಿಸಲು ನಿರ್ಧರಿಸಿದರು... ಅದರಿಂದ ರಕ್ತ ಸೋರುತ್ತಿತ್ತು. ನಂತರ ಮರದ ತುಂಡು ಕಲ್ಲಾಗಿ ಮಾರ್ಪಟ್ಟಿತು."
ಜಾರ್ಖಂಡ್ ರಾಜ್ಯದ ದುಮ್ಕಾ ಜಿಲ್ಲೆಯಲ್ಲಿ ಈ ಹಿಂದೆ ಮರವು ತಲೆಯೆತ್ತಿ ನಿಂತಿದ್ದ ಸ್ಥಳದಲ್ಲಿ ಕುಳಿತು ರಾಜೇಂದ್ರ ಬಾಸ್ಕಿ ಈ ಶತಮಾನಗಳಷ್ಟು ಹಳೆಯ ಕಥೆಯನ್ನು ವಿವರಿಸುತ್ತಿದ್ದಾರೆ. "ಆ ಮರದ ಕಾಂಡವೇ ಈಗ ಮರಂಗ್ ಬುರು ದೇವರನ್ನು ಪೂಜಿಸುವ ಪವಿತ್ರ ಸ್ಥಳ" ಎಂದು 30 ವರ್ಷದ ಅವರು ಹೇಳುತ್ತಾರೆ. ಸಂತಾಲ್ (ಸಂಥಾಲ್ ಎಂದೂ ಕರೆಯಲಾಗುತ್ತದೆ) ಆದಿವಾಸಿ ಸಮುದಾಯಕ್ಕೆ ಸೇರಿದ ಜನರು ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ಜಾರ್ಖಂಡ್, ಬಿಹಾರ ಮತ್ತು ಬಂಗಾಳದಿಂದ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ವೃತ್ತಿಯಿಂದ ರೈತರಾಗಿರುವ ಬಾಸ್ಕಿ, ಮರಂಗ್ ಬುರುವಿನ ಪ್ರಸ್ತುತ ನಾಯಕಿ (ಅರ್ಚಕ) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹಿಜ್ಲಾ ಗ್ರಾಮವು ದುಮ್ಕಾ ಪಟ್ಟಣದ ಹೊರವಲಯದ ಸಂತಾಲ್ ಪರಗಣ ವಿಭಾಗದಲ್ಲಿದೆ ಮತ್ತು 2011ರ ಜನಗಣತಿಯ ಪ್ರಕಾರ ಈ ಊರು 640 ಜನಸಂಖ್ಯೆಯನ್ನು ಹೊಂದಿದೆ. ಬ್ರಿಟಿಷ್ ಆಡಳಿತದ ವಿರುದ್ಧ ಸಂತಾಲರು ನಡೆಸಿದ ದಂಗೆಯು ಜೂನ್ 30, 1855ರಂದು ಹಿಜ್ಲಾದಿಂದ ಸುಮಾರು ನೂರು ಕಿ.ಮೀ ದೂರದಲ್ಲಿರುವ ಭಗ್ನಾದಿಹ್ ಗ್ರಾಮದ (ಭೋಗ್ನಾದಿಹ್ ಎಂದೂ ಕರೆಯಲ್ಪಡುತ್ತದೆ) ಸಿಡೋ ಮತ್ತು ಕನ್ಹು ಮುರ್ಮು ಅವರ ನಾಯಕತ್ವದಲ್ಲಿ ಪ್ರಾರಂಭವಾಯಿತು.










