“ರಾತ್ರಿಯಿಡೀ ಮೇಘಸ್ಪೋಟವಾಗಿ ಎಲ್ಲವೂ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದವು…ನೀವೇ ನೋಡಿ. ಎಲ್ಲಾ ಕೊಚ್ಚಿಕೊಂಡು ಹೋಗಿದೆ. ನಾವು ನಮ್ಮ ಮನೆ ಮತ್ತು ನಾಲ್ಕು ಪಶುಗಳನ್ನು ಕಳೆದುಕೊಂಡಿದ್ದೇವೆ. ಎಲ್ಲಾ ಹೋಯ್ತು…” ಎಂದು ಶ್ರೀಕವಲ್ ಭರತ್ ಮೊರೆ ತಮ್ಮ ತಗಡಿನ ಗೋಡೆಗಳ ಮನೆ ಮತ್ತು ಶೆಡ್ಗಳ ಸುತ್ತಮುತ್ತ ತೋರಿಸುತ್ತಾ ವಿವರಿಸುತ್ತಿದ್ದರು. “ನೀರು ನಮ್ಮ ಸೊಂಟದವರೆಗೆ ಬಂದಿತ್ತು. ಮಗ ಕೂಗಿ ನಮ್ಮನ್ನು ಎಚ್ಚರಿಸಿದ ಕಾರಣ ನಾವು ಬದುಕುಳಿದೆವು. ಆದರೆ ಅಷ್ಟೊತ್ತಿಗೆ ನೀರು ತುಂಬಿಹೋಗಿತ್ತು,” ಎಂದು ಅವರು ಹೇಳುತ್ತಾರೆ.
ಮೊರೆ ಮಾವ್ಶಿಯವರು ಸಾಧ್ಯ ಇರುವಷ್ಟು ವಸ್ತುಗಳನ್ನು ಮನೆಯಲ್ಲಿರುವ ಕಬ್ಬಣದ ಕವಾಟಿನಲ್ಲಿ ತೆಗೆದಿಟ್ಟು ಕಾಪಾಡಿದರು. ಮನೆಯ ಮಣ್ಣಿನ ನೆಲ ಕಿತ್ತುಹೋಗಿ ಮರಳು ಮತ್ತು ಗುಂಡಿಗಳಷ್ಟೇ ಉಳಿದಿದ್ದವು.
ಸೆಪ್ಟೆಂಬರ್ 21, 2025 ರಂದು, ಧಾರಾಶಿವ್ನ (ಹಿಂದಿನ ಒಸ್ಮಾನಾಬಾದ್) ಭೂಮ್ ಬ್ಲಾಕ್ನಲ್ಲಿರುವ ಚಿಂಚ್ಪುರ್ ಢಗೆಯಲ್ಲಿ ಧಾರಾಕಾರ ಮಳೆ ಸುರಿದಿತ್ತು. ಈ ಗ್ರಾಮವು ಗೋದಾವರಿ ನದಿಯ ಉಪನದಿಯಾದ ಬಾನ್ ಗಂಗಾ ನದಿಯ ತೀರದಲ್ಲಿದೆ. ಮರುದಿನ, ಅಂದರೆ ಸೆಪ್ಟೆಂಬರ್ 22 ರಂದು, ಮತ್ತೆ ರಾತ್ರಿಯಿಡೀ ಜೋರಾಗಿ ಮಳೆ ಸುರಿದಿತ್ತು. ಇಡೀ ಗ್ರಾಮ ನೀರಿನಲ್ಲಿ ಮುಳುಗಿತ್ತು. "ನಮ್ಮ ಇಡೀ ಜೀವನದಲ್ಲಿ ಇಂತಹ ಒಂದು ಘಟನೆಯನ್ನು ಯಾವತ್ತೂ ನೋಡಿರಲಿಲ್ಲ,” ಎಂದು ಜನರು ಆ ಪ್ರವಾಹವನ್ನು ವಿವರಿಸುತ್ತಾರೆ.
ಸೂರ್ಯಕಾಂತ್ ಮೊರೆ ನಮಗೆ ನದಿಯನ್ನು ತೋರಿಸಿದರು, ತಲಾ ಒಂದು ಎಕರೆ ಉದ್ದದ ಎರಡು ದ್ರಾಕ್ಷಿ ತೋಟಗಳು ಸೇರಿದಂತೆ ನದಿಯ ದಡದ ಪಕ್ಕದಲ್ಲಿರುವ ಹೊಲಗದ್ದೆಗಳೆಲ್ಲವೂ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದವು. "ನಾವು ನಮ್ಮ ಪಶುಗಳನ್ನು ಕ್ಷಣಾರ್ಧದಲ್ಲಿ ಉಳಿಸಿದೆವು. ಅವುಗಳ ಕುತ್ತಿಗೆಯವರೆಗೆ ನೀರು ಬಂದಿತ್ತು. ನಾನು ಅವು ಓಡಿಹೋಗಲಿ ಎಂದು ಹಗ್ಗ ಬಿಚ್ಚಿಬಿಟ್ಟೆ. ಅವು ಬದುಕುಳಿದವು," ಎಂದು ಮೊರೆ ಹೇಳುತ್ತಾರೆ. "ಆದರೆ ತಗಡಿನ ಶೆಡ್ ನಲ್ಲಿ ನಾವು ತೆಗೆದಿಟ್ಟಿದ್ದ ಸಾಮಾನಿನ ಚೀಲಗಳು ನೆಂದುಹೋಗಿದ್ದವು. ಜೋಳದ ಚೀಲಗಳು, ಹೆಸರು ಬೇಳೆ, ಉದ್ದಿನ ಬೇಳೆ ಮತ್ತು ನೆಲಗಡಲೆ ಎಲ್ಲವೂ ಇದ್ದವು. ಜೋಳ ಅಥವಾ ಮೆಕ್ಕೆಜೋಳದ ಕಡ್ಬಾ (ಮೇವು) ನೀರಿನಲ್ಲಿ ಕೊಚ್ಚಿ ಹೋಯಿತು,” ಎಂದು ಮಳೆಯ ತೀವ್ರತೆಯನ್ನು ವಿವರಿಸಿದರು.
ಅನೇಕರು ತಮ್ಮ ಒಂದೂವರೆ ಎಕರೆ ಹೊಲದಲ್ಲಿ ಈರುಳ್ಳಿ ಕೃಷಿ ಮಾಡಿದ್ದರು. ಇಡೀ ಹೊಲದಲ್ಲಿ ಈಗ ಬಂಡೆಗಳು ಮತ್ತು ಕಲ್ಲುಗಳು ಮಾತ್ರ ಉಳಿದಿವೆ. ಫಲವತ್ತಾದ ಮಣ್ಣಿನ ಮೇಲಿನ ಪದರದಲ್ಲಿದ್ದ ಎಲ್ಲಾ ಈರುಳ್ಳಿ ಸಸಿಗಳು ನೀರಿನ ಪ್ರವಾಹಕ್ಕೆ ಕೊಚ್ಚಿ ಹೋದವು.























