ಕೇರಳದ 9ನೇ ತರಗತಿಯ ವಿದ್ಯಾರ್ಥಿಗಳು ಮಲಯಾಳಂ ವಿಷಯದ ಪರೀಕ್ಷೆಯ ದಿನದಂದು ಪ್ರಶ್ನೆ ಪತ್ರಿಕೆ ತೆರೆದು ನೋಡಿದಾಗ, ಅದರಲ್ಲಿ ʼತನಿಚ್ಚಿರಿಕ್ಕುಂಬೋಳ್ʼ (ಒಂಟಿಯಾಗಿರುವಾಗ) ಎನ್ನುವ ಕವನದ ಕುರಿತು ಪ್ರಶ್ನೆಯೊಂದಿತ್ತು. ಆ ಪ್ರಶ್ನೆಯಾಗಿ ಬಂದಿದ್ದ ಕವಿತೆಯ ಸಾಲುಗಳಲ್ಲಿ ಮೌನ, ಒಂಟಿತನ ಮತ್ತು ಒಬ್ಬಂಟಿಯಾಗಿರುವಾಗ ನಮ್ಮಲ್ಲಿ ಮೂಡುವ ಸ್ಪಷ್ಟತೆಯ ಕುರಿತು ಮಾತನಾಡುತ್ತಿದ್ದವು. ರಾಜ್ಯಾದ್ಯಂತದ ಲಕ್ಷಾಂತರ ಈ ಕವಿತೆಯ ಸಾಲುಗಳನ್ನು ಓದುತ್ತಿದ್ದ ವಿದ್ಯಾರ್ಥಿಗಳಿಗೆ ತಾವು ಓದುತ್ತಿರುವುದು ಪಿ.ಎ. ಸೇಬಾ ಎಂಬ ಯುವ ಕವಯಿತ್ರಿಯ ಕವನ ಎಂಬ ಅರಿವೇ ಇರಲಿಲ್ಲ.
ಅದೇ ವರ್ಷ ಅಂದರೆ 2023ರಲ್ಲಿ ಸೇಬಾ ʼವಿರಳ್ ಪಳುತಿಲೆ ಆಕಾಶಂಗಳ್' ಎನ್ನುವ ಕಾವ್ಯ ಮತ್ತು ದೃಶ್ಯಗಳ ಅಭಿವ್ಯಕ್ತಿಯಿದ್ದ ಪುಸ್ತಕವೊಂದನ್ನು ಪ್ರಕಟಿಸಿದ್ದರು. ಅವರು ಬೆನ್ನು ಮೂಳೆಯ ಸ್ನಾಯು ಕ್ಷೀಣಿಸುವಿಕೆಯ (ಎಸ್ಎಮ್ಎ) ಸಮಸ್ಯೆಯಿಂದ ಬಳಲುತ್ತಿದ್ದು, ಸೇಬಾ ತಾನು ಅನುಭವಿಸುತ್ತಿರುವ ಸಮಸ್ಯೆಗಳು ತನಗೆ ನೀಡಿದ ಅನುಭವಗಳನ್ನೇ ಈ ಪುಸ್ತಕದಲ್ಲಿ ಪಡಿಮೂಡಿಸಿದ್ದರು. ಇದೊಂದು ಸ್ನಾಯುಗಳ ದೌರ್ಬಲ್ಯದ ಸ್ಥಿತಿಗೆ ಕಾರಣವಾಗುವ ಅಪರೂಪದ ಅನುವಂಶಿಕ ಕಾಯಿಲೆ. ದುರಂತವೆಂದರೆ ಇದಕ್ಕೆ ಪ್ರಸ್ತುತ ಯಾವುದೇ ಚಿಕಿತ್ಸೆ ಲಭ್ಯವಿಲ್ಲ. ಎಸ್ಎಮ್ಎ ಪೀಡಿತರು ನಿಧಾನವಾಗಿ ಕಳೆದುಕೊಳ್ಳುತ್ತಾರೆ. ಕೊನೆಗೆ ಅವರು ಉಸಿರಾಟಕ್ಕೆ ಪೈಪುಗಳನ್ನು ಅವಲಂಬಿಸಬೇಕಾಗುತ್ತದೆ.
ಪರೀಕ್ಷೆ ವಿದ್ಯಾರ್ಥಿಗಳು ಅಥವಾ ಈ ಕವಿತೆಗಳನ್ನು ಓದಿದ ಬಹುತೇಕರಿಗೆ ಇಂತಹದ್ದೊಂದು ಕವಿತೆಯನ್ನು ಸೃಷ್ಟಿಸಿದ ಕವಯಿತ್ರಿ ಹಲವು ವರ್ಷಗಳಿಂದ ತನ್ನ ಕೋಣೆಯಿಂದ ಹೊರಗೆ ಸಹ ಬಂದಿಲ್ಲ ಎನ್ನುವುದು ತಿಳಿದಿಲ್ಲ. ಈ ಕವಿತೆಯನ್ನು ಅವರು ಶ್ವಾಸನಾಳಕ್ಕೆ ಆಮ್ಲಜನಕದ ಕೊಳವೆಗಳನ್ನು ಆಳವಡಿಸಿಕೊಂಡು ಅಂಗಾತ ಮಲಗಿಕೊಂಡ ಸ್ಥಿತಿಯಲ್ಲೇ ರಚಿಸಿದ್ದರು. ಆರು ವರ್ಷಗಳಿಗಿಂತ ಹೆಚ್ಚು ಕಾಲ, ಸೇಬಾಟ್ರ್ಯಾಕಿಯೋಸ್ಟಮಿ ಟ್ಯೂಬ್ಮೂಲಕ ಉಸಿರಾಡುತ್ತಿದ್ದರು. ಅವರಿಗೆ ಒತ್ತಡವಿಲ್ಲದೆ ನಡೆಯಲು, ಕುಳಿತುಕೊಳ್ಳಲು ಅಥವಾ ಆಹಾರವನ್ನು ನುಂಗಲು ಸಾಧ್ಯವಿಲ್ಲ.
27 ವರ್ಷದ ಸೇಬಾ ತನ್ನ ಮೊಬೈಲ್ ಫೋನನ್ನೇ ತನ್ನೊಳಗಿನ ಜಗತ್ತನ್ನು ಹೊರ ಜಗತ್ತಿಗೆ ಕಿಟಕಿಯನ್ನಾಗಿ ಮಾಡಿಕೊಂಡಿದ್ದಾರೆ. 2018ರಲ್ಲಿ ಅವರು ತಮ್ಮ ಸೃಜಶೀಲ ಕೆಲಸಗಳನ್ನು ಆನ್ಲೈನ್ ಮೂಲಕ ಪೋಸ್ಟ್ ಮಾಡಲು ಆರಂಭಿಸಿದರು. ಐದು ಇಂಚು ಅಳತೆಯ ಆ ಮೊಬೈಲ್ ಪರದೆಯ ಮೇಲೆ ಅವರು ಬಹಳ ಶ್ರಮದಿಂದ ಅವರು ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು.
ಸೇಬಾ ಬರೆಯುತ್ತಿದ್ದ ಕವಿತೆಗೆಳು ಸೋಷಿಯಲ್ ಮೀಡಿಯಾದ ತಿರುವನಂತಪುರ ಮೂಲದ ಪತ್ರಕರ್ತ ಪಿ. ವೇಣುಗೋಪಾಲ ಅವರ ಕಣ್ಣಿಗೆ ಬಿದ್ದವು. “ಸೇಬಾ ಕವಿತೆಗಳಲ್ಲಿ ಒಂದು ಹರಿತವಿತ್ತು. ಅವರು ನೂರು ವರ್ಷಗಳ ಬದುಕನ್ನು ಅನುಭವಿಸಿ ಮೆದುವಾಗಿರುವ ವ್ಯಕ್ತಿಯಂತೆ ಬರೆಯುತ್ತಾರೆ” ಎನ್ನುತ್ತಾರೆ ವೇಣುಗೋಪಾಲ್. ಈಗಲೂ ವೇಣುಗೋಪಾಲ್ ಸೇಬಾ ಅವರಿಗೆ ದಣಿವು ಕಾಡಿದಾಗ ಟೈಪಿಂಗ್ ಮತ್ತು ಸಪಾದನೆಯಂತ ಕೆಲಸಗಳನ್ನು ಮಾಡಿಕೊಡುತ್ತಾರೆ. “ಸೇಬಾ ಇಂಗ್ಲಿಷ್ ಮತ್ತು ಮಲಯಾಳಂ ಎರಡೂ ಭಾಷೆಗಳಲ್ಲಿ ಸಹಜ ಸೌಂದರ್ಯದ ಲಯದಲ್ಲಿ ಬರೆಯಬಲ್ಲರು. ನಾನು ಅವರು ದಣಿದಿದ್ದಾಗ ಟೈಪಿಂಗ್ ಮಾಡಿಕೊಡುವ ಕೆಲಸವನ್ನಷ್ಟೇ ಮಾಡುತ್ತೇನೆ.”
2023ರ ಹೊಸ ವರ್ಷದ ದಿನದಂದು ಭರವಸೆಯ ಕುರಿತು ಅವರು ಬರೆದಿದ್ದ "ಟ್ರ್ಯಾಪ್ಡ್ ಇನ್ ಎ ಕೇಜ್ ಬಟ್ ವರ್ಡ್ಸ್ ಬ್ರೇಕ್ ಫ್ರೀ (ಪಂಜರದೊಳಗಿದ್ದೇನೆ, ಆದರೆ ಪದಗಳು ಅವುಗಳನ್ನು ಮೀರಿ ಹೊರಬರುತ್ತವೆ)" ಬರೆಹವೊಂದು ಟೆಲಿಗ್ರಾಫ್ ಪತ್ರಿಕೆಯ ಮೊದಲ ಪುಟದಲ್ಲಿ ಪ್ರಕಟವಾಗಿತ್ತು. ಪತ್ರಿಕೆಯ ಸಂಪಾದಕ ಆರ್.ರಾಜಗೋಪಾಲ್ ಸೇಬಾ ಅವರ ಬರವಣಿಗೆಯನ್ನು ಫೇಸ್ಬುಕ್ ಮೂಲಕ ಗಮನಿಸಿದ್ದರು. ಬರವಣಿಗೆಯಿಂದ ಪ್ರೇರಿತರಾದ ಅವರು ಸೇಬಾ ಅವರಿಂದ ತಮ್ಮ ಪತ್ರಿಕೆಗೂ ಬರೆಸಿದ್ದರು. ಸ್ವಲ್ಪ ಸಮಯದ ನಂತರ ಅವರ ಮಲಯಾಳಂ ಬರೆಹಗಳನ್ನು ʼವಿರಲ್ ಪಳುತ್ತಿಲೆ ಆಕಾಶಂಗಳ್ (ಬೆರಳುಗಳ ನಡುವಿನಿಂದ ಕಾಣುವ ಆಗಸ)ʼ ಎನ್ನುವ ಪುಸ್ತಕದಲ್ಲಿ ಸಂಕಲಿಸಿ ಪ್ರಕಟಿಸಲಾಯಿತು. ಕೇರಳದ ಕೈಗಾರಿಕಾ ಸಚಿವ ಪಿ.ರಾಜೀವ್ ಇದನ್ನು ಜನವರಿ 2023ರಲ್ಲಿ ಎರ್ನಾಕುಲಂ ಪ್ರೆಸ್ ಕ್ಲಬ್ಬಿನಲ್ಲಿ ಬಿಡುಗಡೆ ಮಾಡಿದರು. ಸೇಬಾ ತನ್ನ ಅಮ್ಮನ ಫೋನಿನಲ್ಲಿ ಈ ಕಾರ್ಯಕ್ರಮವನ್ನು ತನ್ನ ಕೋಣೆಯಲ್ಲಿಯೇ ಮಲಗಿ ವೀಕ್ಷಿಸಿದರು.
“ಅವಳು ʼನೋಡಮ್ಮ, ನನ್ನ ಆಕಾಶವನ್ನು ಈಗ ಎಲ್ರೂ ನೋಡ್ತಿದ್ದಾರೆʼ ಎಂದು ಮತ್ತೆ ಮತ್ತೆ ಹೇಳುತ್ತಿದ್ದಳು” ಎಂದು ಸೇಬಾರ ಅಮ್ಮ ಸಬೀರಾ ಅಂದಿನ ದಿನದ ನೆನಪನ್ನು ಪಾರಿಯೊಂದಿಗೆ ಹಂಚಿಕೊಂಡರು.










