ಮಹಾರಾಷ್ಟರದ ಲಾತೂರ್ ಜಿಲ್ಲೆಯ ಮನೆಕೆಲಸಗಾರ್ತಿ, 68ರ ವಯಸ್ಸಿನ ಜೆಹೆದಾಬಿ ಸೈಯದ್, ಹೀಗೆಂದರು: “ನನ್ನನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಯಾರೂ ತಯಾರಿರಲಿಲ್ಲ. ನಾನು ಎಲ್ಲ ಎಚ್ಚರಿಕೆಗಳನ್ನು ಪಾಲಿಸುತ್ತಿದ್ದೆನಾದರೂ ಅವರ ಮನೆಗಳಿಗೆ ನನಗೆ ಪ್ರವೇಶವಿರಲಿಲ್ಲ. ಈ ಬಟ್ಟೆಯನ್ನು (ಮಾಸ್ಕ್) ನಾನು ತೆಗೆಯುತ್ತಲೇ ಇರಲಿಲ್ಲ. ಅಂತರವನ್ನು ಕಾಯ್ದುಕೊಳ್ಳುವಂತಹ ಎಲ್ಲ ನಿಯಮಗಳನ್ನೂ ಪಾಲಿಸುತ್ತಿದ್ದೆ.”
ಜೆಹೆದಾಬಿ ಕೆಲಸಮಾಡುತ್ತಿದ್ದ ಐದು ಪರಿವಾರಗಳಲ್ಲಿನ ನಾಲ್ಕು ಪರಿವಾರಗಳು ಏಪ್ರಿಲ್ 2020ರ ಕೋವಿಡ್-19 ಲಾಕ್ಡೌನ್ನಲ್ಲಿ, ಅವರಿಗೆ ಕೆಲಸ ಬಿಟ್ಟು ತೆರಳುವಂತೆ ತಿಳಿಸಿದವು. “ನನಗೆ ಉಳಿದದ್ದು ಒಂದು ಮನೆಯಷ್ಟೇ. ಅವರು ನನ್ನಿಂದ ಅತಿ ಹೆಚ್ಚಿನ ಕೆಲಸಮಾಡಿಸುತ್ತಿದ್ದರು.”
ಜೆಹೆದಾಬಿ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಮನೆಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಈಕೆಯನ್ನು ಕೆಲಸದಿಂದ ತೆಗೆದ ಬಹುತೇಕ ಮನೆಗಳಲ್ಲಿ ಪಾತ್ರೆಗಳನ್ನು ತೊಳೆದು, ನೆಲವನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತಿದ್ದರು. ಕಳೆದ ವರ್ಷ ಅವರೆಲ್ಲರೂ ಈಕೆಯನ್ನು ಕೆಲಸದಿಂದ ತೆಗೆದುಹಾಕಿದರು. ತನ್ನನ್ನು ಕೆಲಸಕ್ಕೆ ನೇಮಿಸಿಕೊಂಡವರು, ಮಾರ್ಚ್ 2020ರಲ್ಲಿ, ದೆಹಲಿಯ ಮಸೀದಿಯಲ್ಲಿನ ತಬ್ಲಿಗಿ ಜಮಾತ್ ಧಾರ್ಮಿಕ ಸಭೆಯನ್ನು ಕುರಿತ ವಿವಾದದಿಂದ ಪ್ರಭಾವಿತರಾಗಿದ್ದರು ಎಂಬುದಾಗಿ ಇವರು ಭಾವಿಸುತ್ತಾರೆ. ಅದು, ಕೋವಿಡ್-19 ತಾಣವಾಗಿತ್ತು. “ಜನರಿಗೆ ಮುಸಲ್ಮಾನರಿಂದ ದೂರವಿರುವಂತೆ ಹೇಳುವ ಪಿಸುಮಾತುಗಳು ಬೆಂಕಿಯಂತೆ ಹರಡಿತು.” “ಜಮಾತ್ ಕಾರಣದಿಂದಾಗಿ ನನ್ನ ಕೆಲಸವನ್ನು ಕಳೆದುಕೊಂಡೆ. ಆದರೆ, ನಾನು ಅದಕ್ಕೆ ಸಂಬಂಧಪಟ್ಟಿರುವುದಾದರೂ ಹೇಗೆ” ಎಂಬ ತನ್ನ ಅಳಿಯನ ಮಾತನ್ನು ಈಕೆ ನೆನಪಿಸಿಕೊಳ್ಳುತ್ತಾರೆ.
ಮಾಹೆಯಾನ ಐದು ಸಾವಿರ ರೂ.ಗಳನ್ನು ಸಂಪಾದಿಸುತ್ತಿದ್ದ ಜೆಹೆದಾಬಿಯ ಆದಾಯವು ಒಂದು ಸಾವಿರಕ್ಕೆ ಕುಸಿಯಿತು. “ನನಗೆ ಕೆಲಸ ತೊರೆಯುವಂತೆ ತಿಳಿಸಿದ ಪರಿವಾರಗಳು ಮತ್ತೆ ನನ್ನನ್ನು ಕರೆಯುವುದಿಲ್ಲವೇ? ಹಲವಾರು ವರ್ಷಗಳ ಕಾಲ ನಾನು ಅವರ ಕೆಲಸವನ್ನು ನಿರ್ವಹಿಸಿದ್ದೇನೆ. ಇದ್ದಕ್ಕಿದ್ದಂತೆ, ನನ್ನನ್ನು ತ್ಯಜಿಸಿ, ಬೇರೆ ಹೆಂಗಸರನ್ನು ನೇಮಿಸಿಕೊಂಡಿದ್ದಾರೆ” ಎಂದರಾಕೆ.
ಈ ವರ್ಷ ಆಕೆಯ ಪರಿಸ್ಥಿತಿಯೇನು ಸುಧಾರಿಸಿಲ್ಲ. “ಅದು ಮತ್ತಷ್ಟು ಅಸಹನೀಯವಾಗಿದೆ” ಎನ್ನುತ್ತಾರೆ ಜೆಹೆದಾಬಿ. 2021ರ ಮಾರ್ಚ್ನಲ್ಲಿ ಮೂರು ಮನೆಗಳಲ್ಲಿ ಕೆಲಸ ಮಾಡಿ ಮಾಹೆಯಾನ ಮೂರು ಸಾವಿರ ರೂ.ಗಳನ್ನು ಗಳಿಸುತ್ತಿದ್ದರು. ಆದರೆ ಇಬ್ಬರು ಉದ್ಯೋಗದಾತರು ಏಪ್ರಿಲ್ನಲ್ಲಿ ಕೋವಿಡ್-19ನ ಎರಡನೇ ಅಲೆಯು ಮಹಾರಾಷ್ಟ್ರದಲ್ಲಿ ಹರಡಲಾರಂಭಿಸಿದಾಗ ಆಕೆಯನ್ನು ಕೆಲಸದಿಂದ ತೆಗೆದರು. ”ಕೊಳೆಗೇರಿಯಲ್ಲಿ ನೆಲೆಸುವ ನಾವು ಸ್ವಚ್ಛತೆಯ ನಿಯಮಗಳನ್ನು ಪಾಲಿಸುವುದಿಲ್ಲವೆಂದು ಅವರು ಹೇಳಿದರು.”
ಆದ್ದರಿಂದ, ಈಗ ಆಕೆ ಹೆಚ್ಚಿನ ಕೆಲಸ ದೊರೆಯುವವರೆಗೆ, ತನ್ನ ಏಕೈಕ ಉದ್ಯೋಗದಾತರಿಂದ ಮಾಹೆಯಾನ ಕೇವಲ ಏಳು ನೂರು ರೂ.ಗಳನ್ನು ಮಾತ್ರ ಸಂಪಾದಿಸುತ್ತಾರೆ.





