ಬಿಹಾರದ ದರ್ಬಂಗಾ ಜಿಲ್ಲೆಯ ತರ್ಡಿ ಗ್ರಾಮದ ಕೃಷಿ ಕಾರ್ಮಿಕರ ಮಗನಾದ ಲಾಲ್ ಸಿಂಗ್, 1997ರಲ್ಲಿ ಮುಂಬೈಗೆ ಬರುತ್ತಾರೆ; ಅವರಿಗೆ ತನ್ನೂರು ಎಂದರೆ ಬಡತನ ಮತ್ತು ಸಂಕಷ್ಟಗಳ ಸಂಕೇತ, ಆದರೆ ಮುಂಬೈ ನಗರ ತನ್ನ ವೈಭವದ ಬೆಳಕಿನಿಂದ ಅವರನ್ನು ಆಕರ್ಷಿಸಿತ್ತು. ಜೀವನೋಪಾಯವನ್ನು ಹುಡುಕುತ್ತಾ ಹಳ್ಳಿಗಳಿಂದ ನಗರಗಳತ್ತ ವಲಸೆ ಹೋದ ಭಾರತದ 2.1 ಕೋಟಿ ಜನರ ಪೈಕಿ ಇವರೂ ಒಬ್ಬರಾಗಿದ್ದರು ಮತ್ತು ಅದೇ ದಶಕದಲ್ಲಿ ಕೇವಲ ಮುಂಬೈ ನಗರವನ್ನೇ ಗುರಿಯಾಗಿಸಿಕೊಂಡು ಬಂದ 25 ಲಕ್ಷ ಜನರ ಗುಂಪಿನಲ್ಲಿಯೂ ಇದ್ದರು. ಇವೆಲ್ಲವೂ ಕೇವಲ ಹೊಟ್ಟೆಪಾಡಿನ ಹುಡುಕಾಟಕ್ಕಾಗಿ ನಡೆದ ಪಯಣವಾಗಿತ್ತು; ಮುಂಬಯಿಯಲ್ಲಿ ಅವರು ಸೆಕ್ಯೂರಿಟಿ ಗಾರ್ಡ್, ಕಾರ್ಖಾನೆಯ ದಿನಗೂಲಿ ಕಾರ್ಮಿಕ, ಆಫೀಸ್ ಬಾಯ್, ನಾಯಿಗಳನ್ನು ವಾಕ್ ಮಾಡಿಸುವ ಕೆಲಸದ ಜೊತೆಗೆ ಅಡುಗೆಯವನಾಗಿಯೂ ಕೆಲಸ ಮಾಡುತ್ತಾರೆ, ಆದರೆ ಇದೇ ಮಹಾನಗರದಲ್ಲಿ ಅವರೊಳಗೆ ಹೊಸದೊಂದು ಹಂಬಲ ಮತ್ತು ಹೊಸ ಕನಸು ಚಿಗುರುತ್ತದೆ; ಅಂತಿಮವಾಗಿ ಅವರಿಗೆ ತನಗೆ ನಟನೆ ಮತ್ತು ಬರಹದ ಪ್ರೀತಿಯಿರುವುದು ಅರಿವಾಗುತ್ತದೆ.
ಮುಂಬಯಿ ನಗರದಲ್ಲಿ 28 ವರ್ಷಗಳನ್ನು ಕಳೆದಿರುವ ಲಾಲ್ ಸಿಂಗ್ ಹಗಲು ಹೊತ್ತು ಹೊಟ್ಟೆಪಾಡಿಗಾಗಿ ದುಡಿಮೆ ಮಾಡುತ್ತಾರೆ. ಅದರ ಜೊತೆಗೆ ತೆರೆಮರೆಯಲ್ಲಿ ತನ್ನ ಕನಸುಗಳನ್ನು ಇನ್ನಷ್ಟು ಹರಿತಗೊಳಿಸುತ್ತಾ ತಮ್ಮ ಸೃಜನಶೀಲ ಕನಸುಗಳಿಗೆ ನೀರೆರೆದು ಪೋಷಿಸುತ್ತಿದ್ದಾರೆ. ಇದು ಲಾಲ್ ಸಿಂಗ್ ಅವರ ಸುದೀರ್ಘ ಪಯಣದ ಕಥೆ. ಈ ಕತೆ ಹೆದರಿಕೆ ಹುಟ್ಟಿಸುವಂತಿದ್ದರೂ, ಅಷ್ಟೇ ಸ್ಫೂರ್ತಿದಾಯಕವಾಗಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
ಅನುವಾದ: ಶಂಕರ. ಎನ್. ಕೆಂಚನೂರು


