"ಈ ವರ್ಷ, ಈ ರೈತ ವಿರೋಧಿ ಮಸೂದೆಗಳ ಪುಟಗಳನ್ನು ಬೂದಿಯಾಗುವಂತೆ ಸುಡುವುದು ನಮಗೆ ಲೋಹ್ರಿ ಹಬ್ಬವಾಗಿತ್ತು" ಎಂದು ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಸುಖದೇವ್ ಸಿಂಗ್ ಹೇಳುತ್ತಾರೆ. ಸಿಂಗ್ ತನ್ನ 60 ವರ್ಷಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕಾಲವನ್ನು ಕೃಷಿಕರಾಗಿ ಕಳೆದಿದ್ದಾರೆ. ಪ್ರಸ್ತುತ, ದೆಹಲಿ ಮತ್ತು ಹರಿಯಾಣದ ಗಡಿ ಸಿಂಘುವಿನಲ್ಲಿ ಬೀಡುಬಿಟ್ಟಿರುವ ಸಾವಿರಾರು ಪ್ರತಿಭಟನಾಕಾರರಲ್ಲಿ ಸಿಂಗ್ ಕೂಡ ಒಬ್ಬರು.

"ಈ ಸಲದ ಲೋಹ್ರಿ ವಿಭಿನ್ನವಾಗಿತ್ತು" ಎಂದು ಅವರು ಹೇಳುತ್ತಾರೆ. "ಸಾಮಾನ್ಯವಾಗಿ, ನಾವು ಈ ಹಬ್ಬವನ್ನು ನಮ್ಮ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಮನೆಯಲ್ಲಿ ಆಚರಿಸುತ್ತೇವೆ. ಅಷ್ಟೇ ಅಲ್ಲ, ಈ ಹಬ್ಬ ನಮಗೆ ಸಂಭ್ರಮದ ಸಮಯ. ಆದರೆ ಈ ಬಾರಿ, ನಾವು ನಮ್ಮ ಹೊಲ ಮತ್ತು ಮನೆಗಳಿಂದ ದೂರವಿದ್ದೇವೆ. ಆದರೆ ಇದರ ಹೊರತಾಗಿಯೂ, ನಾವು ಒಟ್ಟಿಗೆ ಇದ್ದೇವೆ." ಈ ಕಾನೂನುಗಳನ್ನು ರದ್ದುಗೊಳಿಸುವವರೆಗೂ ನಮ್ಮ ಮನೆಗಳಿಗೆ ಹಿಂತಿರುಗುವುದಿಲ್ಲ ಪ್ರಸ್ತುತ ಸರ್ಕಾರದ ಅಧಿಕಾರಾವಧಿಯ ಕೊನೆಯವರೆಗೂ ನಾವು ಇಲ್ಲಿಯೇ ಇರಬೇಕಾಗಿ ಬಂದರೂ ಸರಿಯೇ."

ಲೋಹ್ರಿ ಒಂದು ಜನಪ್ರಿಯ ಹಬ್ಬವಾಗಿದ್ದು, ಮುಖ್ಯವಾಗಿ ಪಂಜಾಬ್ ಮತ್ತು ಉತ್ತರದ ಕೆಲವು ಭಾಗಗಳಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಮಕರ ಸಂಕ್ರಾಂತಿಯ ಒಂದು ರಾತ್ರಿ ಮೊದಲು (ಚಾಂದ್ರಮಾನ ಕ್ಯಾಲೆಂಡರ್‌ನ ಚಳಿಗಾಲದ ತಿಂಗಳುಗಳ ಕೊನೆಯ ದಿನ) ಆಚರಿಸಲಾಗುತ್ತದೆ ಮತ್ತು ಇದನ್ನು ವಸಂತಕಾಲ ಮತ್ತು ದೀರ್ಘ ದಿನಗಳ ಆರಂಭವೆಂದು ಪರಿಗಣಿಸಲಾಗುತ್ತದೆ. ಜನರು ರಾತ್ರಿಯಲ್ಲಿ ಬೆಂಕಿಯನ್ನು ಬೆಳಗಿಸುತ್ತಾರೆ, ಸೂರ್ಯನಿಗೆ ಎಳ್ಳು-ಬೆಲ್ಲ, ಕಡಲೆಕಾಯಿ ಮತ್ತು ಇತರ ಸಾಂಪ್ರದಾಯಿಕ ಆಹಾರವನ್ನು ಅರ್ಪಿಸುತ್ತಾರೆ  ಹಾಗೂ ಸಂತೋಷ, ಸಮೃದ್ಧಿ ಮತ್ತು ಉತ್ತಮ ಬೆಳೆಗಾಗಿ ಪ್ರಾರ್ಥಿಸುತ್ತಾರೆ.

ಈ ವರ್ಷ ಸಿಂಘು ಗಡಿಯಲ್ಲಿ, ಜನವರಿ 13ರಂದು ಆಂದೋಲನಕ್ಕೆ ಹೋಗುವ ದಾರಿಯಲ್ಲಿ ಹಲವಾರು ಸ್ಥಳಗಳಲ್ಲಿ ಬೆಂಕಿಯನ್ನು ಉರಿಸಿ ಅದರಲ್ಲಿ ಮೂರು ಮಸೂದೆಗಳ ಪುಟಗಳನ್ನು ಸುಟ್ಟು ಹಬ್ಬವನ್ನು ಆಚರಿಸಲಾಯಿತು. ಅಂದು ರೈತರು ಒಗ್ಗಟ್ಟಿನ ಘೋಷಣೆಗಳನ್ನು ಕೂಗಿದರು ಮತ್ತು ತಮ್ಮ ಟ್ರಾಕ್ಟರುಗಳ ಪಕ್ಕದಲ್ಲಿ ಬೆಳಗುತ್ತಿದ್ದ ಬೆಂಕಿಯಲ್ಲಿ ಕಾನೂನು ಕಾಗದಗಳ ಬೂದಿಯನ್ನು ಗಾಳಿಯಲ್ಲಿ ಬೆರೆಸಿ ಹಾಡಿ ಕುಣಿದರು.

ರೈತರು ವಿರೋಧಿಸುತ್ತಿರುವ ಮೂರು ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.

PHOTO • Anustup Roy

ಲೋಹ್ರಿ ಆಚರಣೆಯನ್ನು ಪ್ರಾರಂಭಿಸಲು ಪಂಜಾಬ್‌ನ ರೈತರು ತಮ್ಮ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಹೋಗುವಾಗ ಹಾಡುಗಳನ್ನು ಹಾಡುತ್ತಿರುವುದು


PHOTO • Anustup Roy

ಆಂದೋಲನದಲ್ಲಿ ಪಾಲ್ಗೊಂಡಿದ್ದ ಇಬ್ಬರು ರೈತರಾದ ಪಂಜಾಬ್‌ನ ಹರ್ಪ್ರೀತ್ ಸಿಂಗ್ ಮತ್ತು ಹರಿಯಾಣದ ರೋಹಿತ್, ಬೆಂಕಿ ಹೊತ್ತಿಸುವ ಮೊದಲು ಡೋಲು ನುಡಿಸುತ್ತಿರುವುದು


PHOTO • Anustup Roy

ಲೋಹ್ರಿ ಹಬ್ಬದ ವಿಶೇಷ ಸಂದರ್ಭದಲ್ಲಿ ಲಂಗರ್‌ಗಾಗಿ ರೊಟ್ಟಿ ಸಿದ್ಧಪಡಿಸುತ್ತಿರುವುದು - ಈ ವರ್ಷದ ಲೋಹ್ರಿ ಉತ್ಸವದಲ್ಲಿ ಕಾನೂನುಗಳನ್ನು ರದ್ದುಗೊಳಿಸುವವರೆಗೆ ಹೋರಾಟವನ್ನು ಮುಂದುವರೆಸುವ ಪ್ರತಿಜ್ಞೆಯನ್ನು ಮಾಡಲಾಗಿದೆ


PHOTO • Anustup Roy

ಲೋಹ್ರಿ ವಿಶೇಷ ಊಟದ ಭಾಗವಾಗಿ ಜಲೇಬಿಗಳನ್ನು ತಯಾರಿಸಲಾಗುತ್ತಿದೆ


Left: Posters announcing that the three farm laws will be burnt at 7 that evening on the occasion of Lohri. Right: Farmers raise slogans as the Lohri fire burns.
PHOTO • Anustup Roy
Left: Posters announcing that the three farm laws will be burnt at 7 that evening on the occasion of Lohri. Right: Farmers raise slogans as the Lohri fire burns.
PHOTO • Anustup Roy

ಎಡ: ಲೋಹ್ರಿಯ ಸಂದರ್ಭದಲ್ಲಿ ಆ ದಿನ ಸಂಜೆ 7 ಗಂಟೆಗೆ ಮೂರು ಕೃಷಿ ಕಾನೂನುಗಳನ್ನು ಸುಡಲಾಗುವುದು ಎಂದು ಘೋಷಿಸುವ ಪೋಸ್ಟರ್‌ಗಳು. ಬಲ: ಲೋಹ್ರಿ ಬೆಂಕಿ ಉರಿಯುತ್ತಿದ್ದಂತೆ ರೈತರು ಘೋಷಣೆಗಳನ್ನು ಕೂಗುತ್ತಿರುವುದು


PHOTO • Anustup Roy

ಒಬ್ಬ ರೈತ ಮೂರು ಕೃಷಿ ಮಸೂದೆಗಳ ಲಿಖಿತ ಪುಟಗಳನ್ನು ಲೋಹ್ರಿ ಬೆಂಕಿಯಲ್ಲಿ ಸುಡುತ್ತಿರುವುದು


PHOTO • Anustup Roy

ಇನ್ನಷ್ಟು ಕಾನೂನು ಪ್ರತಿಗಳು ಬೆಂಕಿಗೆ  ಅಹುತಿಯಾಗುತ್ತಿರುವುದು


PHOTO • Anustup Roy

"ಈ ವರ್ಷ, ನಾವು ರೈತ ವಿರೋಧಿ ಕಾನೂನುಗಳ ಪ್ರತಿಗಳನ್ನು ಸುಡುವ ಮೂಲಕ ಲೋಹ್ರಿಯನ್ನು ಆಚರಿಸುತ್ತಿದ್ದೇವೆ" ಎಂದು ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಸುಖದೇವ್ ಸಿಂಗ್ ಹೇಳುತ್ತಾರೆ


PHOTO • Anustup Roy

ಸಂಜೆಯಾಗುತ್ತಿದ್ದಂತೆ ರೈತರು ನೃತ್ಯ ಮತ್ತು ಹಾಡಲು ಪ್ರಾರಂಭಿಸುತ್ತಾರೆ. ‘ಈ ಬಾರಿಯ ಲೋಹ್ರಿ ವಿಭಿನ್ನವಾಗಿದೆ,’ ಎಂದು ಅವರು ಹೇಳುತ್ತಾರೆ. ‘ಪ್ರತಿವರ್ಷ ನಾವು ಈ ಹಬ್ಬವನ್ನು ನಮ್ಮ ಸಂಬಂಧಿಕರೊಂದಿಗೆ ಮನೆಯಲ್ಲಿ ಆಚರಿಸುತ್ತಿದ್ದೆವು, ಸ್ನೇಹಿತರು ಮನೆಗೆ ಬರುತ್ತಿದ್ದರು, ಸಂತೋಷವಿತ್ತು. ಆದಾಗ್ಯೂ, ಈ ವರ್ಷ, ನಾವು ನಮ್ಮ ಮನೆಗಳು ಮತ್ತು ಹೊಲಗಳಿಂದ ಬಹಳ ದೂರ ಬಂದಿದ್ದೇವೆ. ಆದರೂ ನಾವೆಲ್ಲರೂ ಒಟ್ಟಿಗೆ ಇದ್ದೇವೆ. ಈ ಕಾನೂನುಗಳನ್ನು ಹಿಂಂದೆಗೆದುಕೊಳ್ಳದೆ ನಾವು ಮರಳುವುದಿಲ್ಲ. ಪ್ರಸ್ತುತ ಸರ್ಕಾರದ ಅಧಿಕಾರಾವಧಿಯ ಕೊನೆಯವರೆಗೂ ಇಲ್ಲಿಯೇ ಇರಲು ನಾವು ಸಿದ್ಧʼ

ಅನುವಾದ: ಶಂಕರ ಎನ್. ಕೆಂಚನೂರು

Anustup Roy

Anustup Roy is a Kolkata-based software engineer. When he is not writing code, he travels across India with his camera.

Other stories by Anustup Roy
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru