ಅನಂತಪುರ್‌ ಜಿಲ್ಲೆಯಲ್ಲಿನ ನಾಗರುರ್‌ ಹಳ್ಳಿಯ ರೈತರು, ತಮ್ಮ ಹಳ್ಳಿಯಲ್ಲಿ ಅಂತರ್ಜಲವು ಹೇರಳವಾಗಿದ್ದ ಹಳೆಯ ದಿನಗಳಿಗಾಗಿ ಹಂಬಲಿಸುತ್ತಿದ್ದಾರೆ. 2007ಕ್ಕೂ ಹಿಂದೆ ಇದ್ದ ಸಮೃದ್ಧಿಯ ದಿನಗಳನ್ನು ಬಹುಶಃ ಮರೆಯಲು ಸಾಧ್ಯವಾಗದ ಅವರು, ಅದರ ಬಗ್ಗೆ ಕೆಲವೊಮ್ಮೆ ಮಾತಿಗೆ ತೊಡಗುತ್ತಾರೆ.

ಸುಮಾರು 2007ರಲ್ಲಿ, ಮಳೆಯು ದುರ್ಲಭವಾಗಿದ್ದಾಗ್ಯೂ, ನಾಗರುರ್‌ ಬಳಿಯ ದೊಡ್ಡಕೆರೆಗಳು ಕೊನೆಯ ಬಾರಿಗೆ ಉಕ್ಕಿ ಹರಿದಿದ್ದವು. “ಎನ್‌. ಟಿ. ರಾಮರಾವ್‌ ಅವರ ಕಾಲದಲ್ಲಿ (ಆಂಧ್ರ ಪ್ರದೇಶದ ಮುಖ್ಯ ಮಂತ್ರಿಯಾಗಿದ್ದ ಸಮಯ) ಮಳೆಯು ಕ್ರಮಬದ್ಧವಾಗಿತ್ತು. ವೈ.ಎಸ್‌. ರಾಜಶೇಖರ ರೆಡ್ಡಿಯವರು ಅಧಿಕಾರವನ್ನು ವಹಿಸಿಕೊಂಡಾಗ (ಮೇ 2004ರಲ್ಲಿ), ಒಂದು ವಾರದವರೆಗೂ ದೊಡ್ಡಕೆರೆಗಳು ಉಕ್ಕಿ ಹರಿದಿದ್ದವು (ಭಾರಿ ಮಳೆಯಿಂದಾಗಿ). ಆದರೆ ಅದೇ ಕೊನೆಯಾಯಿತು” ಎನ್ನುತ್ತಾರೆ 42ರ ವಯಸ್ಸಿನ ರೈತ, ವಿ. ರಾಮಕೃಷ್ಣ ನಾಯ್ಡು.

PHOTO • Sahith M.

‘ಎನ್‌. ಟಿ. ರಾಮರಾವ್‌ ಅವರ ಕಾಲದಲ್ಲಿ ಮಳೆಯು ಕ್ರಮಬದ್ಧವಾಗಿತ್ತುʼ ಎಂಬುದಾಗಿ ತಮ್ಮ ಹಳ್ಳಿಯಲ್ಲಿ ಬರಗಾಲವು ನಿರಂತರವಾಗಿ ಕಾಸಿಕೊಳ್ಳತೊಡಗಿದ ಅವಧಿಗೂ ಮುಂಚಿನ ದಿನಗಳನ್ನು ವಿ. ರಾಮಕೃಷ್ಣ ನಾಯ್ಡು ನೆನಪಿಸಿಕೊಳ್ಳುತ್ತಾರೆ

ಕೆಲವು ವರ್ಷಗಳಲ್ಲಿ ಮಳೆಯ ಪ್ರಮಾಣವು ಕಡಿಮೆಯಿದ್ದಾಗ್ಯೂ, ನಂತರದ ವರ್ಷದಲ್ಲಿ ಮಳೆಯು ತೃಪ್ತಿಕರವಾಗಿದ್ದು, ಬಾವಿಗಳು ತುಂಬಿ ಅಂತರ್ಜಲವು ಪುನರ್ಭರ್ತಿಯಾಗುತ್ತಿತ್ತು. ಇದು ನಿಧಾನವಾಗಿ ಬದಲಾಯಿತು. 2011ಕ್ಕೂ ಮೊದಲು, ಕೆಲವು ವರ್ಷಗಳಲ್ಲಿ, ನಾಗರುರ್‌ ಹಳ್ಳಿಯ ವಾರ್ಷಿಕ ಮಳೆಯ ಪ್ರಮಾಣವು (GroundWater & Water Audit ಇಲಾಖೆಯ ಪರಿಶೋಧನೆಯಂತೆ) 700-800 ಮಿ.ಮೀ.ನಷ್ಟಿತ್ತು. ಆದರೆ ಜೂನ್‌ 2011ರ ನಂತರ, ಹಳ್ಳಿಯಲ್ಲಿ ದಾಖಲಾದ ಅತ್ಯಂತ ಹೆಚ್ಚಿನ ಮಳೆಯು, 607 ಮಿ.ಮೀ.ನಷ್ಟಿದ್ದು (ಜೂನ್‌ 2015-ಮೇ 2016), ಇತರೆ ವರ್ಷಗಳಲ್ಲಿ, ಕೇವಲ 400ರಿಂದ 530 ಮಿ.ಮೀ.ನಷ್ಟಿದೆ.

ಆದಾಗ್ಯೂ, ಇದಕ್ಕೂ ಮೊದಲೇ, 1990ರ ಹೊತ್ತಿಗೆ, ಅನಂತಪುರ್‌ ಜಿಲ್ಲೆಯ ಸುಮಾರು 750 ಹಳ್ಳಿಗಳ ನೀರು ನಿಧಾನವಾಗಿ ಬರಿದಾಗತೊಡಗಿತ್ತು. ಆ ದಶಕದಲ್ಲಿ, ಸುಮಾರು 2300 ಜನಸಂಖ್ಯೆಯುಳ್ಳ ನಾಗರೂರ್‌ ಹಳ್ಳಿಯಲ್ಲಿನ ರೈತರು, ಆಹಾರ ಧಾನ್ಯದಂತಹ ತಮ್ಮ ರೂಢಿಬದ್ಧ ಬೆಳೆಗಳನ್ನು ಬೆಳೆಯುವ ಬದಲಿಗೆ ಕಡಲೆಕಾಯಿ ಮತ್ತು ಕಿತ್ತಳೆಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದ್ದರು. ಸುನೀಲ್‌ ಬಾಬು ಎಂಬ ರೈತ, “ಈ ಬೆಳೆಗಳು ಹೆಚ್ಚು ಲಾಭದಾಯಕವಾಗಿದ್ದ ಕಾರಣ, ಜನರು ಅವನ್ನು ಬೆಳೆಯಲು ಆಗ ಹೆಚ್ಚಿನ ಒಲವು ತೋರುತ್ತಿದ್ದರು” ಎಂದು ತಿಳಿಸಿದರು.

PHOTO • Sahith M.

ಕೆ. ಶ್ರೀನಿವಾಸುಲು ಮತ್ತು ಅವರ ಪರಿವಾರವು, ತಮ್ಮ ಭೂಮಿಯ ನೀರಾವರಿಗೆ ಡ್ರಿಪ್‌-ಪೈಪ್‌ಗಳನ್ನು ಅಳವಡಿಸಲು (ಬಲಕ್ಕೆ) ಖರ್ಚುಮಾಡಿದ 2 ಲಕ್ಷ ರೂ.ಗಳನ್ನು ಒಳಗೊಂಡಂತೆ, ಕೊಳವೆಬಾವಿಗಳನ್ನು ಕೊರೆಯಲು ಒಟ್ಟು 10 ಲಕ್ಷ ರೂ.ಗಳನ್ನು ವ್ಯಯಿಸಿದ್ದಾರೆ

ಮಳೆಯ ಪ್ರಮಾಣವು ಕಡಿಮೆಯಾಗುವುದರ ಜೊತೆಗೆ, ಹೆಚ್ಚು ನೀರಿನ ಅವಶ್ಯಕತೆಯುಳ್ಳ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಪ್ರವೃತ್ತಿಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕೊಳವೆಬಾವಿಗಳನ್ನು ಕೊರೆದು, ಹೆಚ್ಚು ಆಳದಿಂದ ಅಂತರ್ಜಲವನ್ನು ತೆಗೆಯಲಾಯಿತು. “40 ವರ್ಷಗಳ ಹಿಂದೆ, ಕೊರೆಗಂಡಿಗಳು (borehole) ಇರಲಿಲ್ಲ. ಬಾವಿಗಳನ್ನು ಮಾತ್ರ ತೋಡುತ್ತಿದ್ದೆವು (ನಮ್ಮ ಕೈಯಾರೆ). ಭೂಮಿಯಲ್ಲಿ ಕೇವಲ 10 ಅಡಿ ತೋಡಿದಲ್ಲಿ, ನೀರು ದೊರೆಯುತ್ತಿತ್ತು” ಎಂಬುದಾಗಿ ಸುನೀಲ್‌ ಬಾಬು ಅವರ ತಂದೆ, 70ರ ವಯಸ್ಸಿನ ಕೆ. ಶ್ರೀನಿವಾಸುಲು ನೆನಪಿಸಿಕೊಳ್ಳುತ್ತಾರೆ.

ಭೂಮಿಯ ನೀರಿನ ಸ್ತರವು ವಿಪರೀತವಾಗಿ ತಗ್ಗುತ್ತಿದೆ. ಜಿಲ್ಲೆಯ GroundWater & Water Audit ಇಲಾಖೆಯು 1972ರಲ್ಲಿ ದಾಖಲಾತಿಯನ್ನು ಪ್ರಾರಂಭಿಸಿದ ಲಾಗಾಯ್ತು, ಇದು ಅತ್ಯಂತ ಹೆಚ್ಚಿನ ಕುಸಿತವೆನಿಸಿದೆ. ಪುನರ್ಭರ್ತಿಯೂ ಕಡಿಮೆಯಾಗುತ್ತಿರುವ ಕಾರಣ, ಕೊಳವೆಬಾವೆಗಳು ಈಗ 600-700 ಅಡಿ ಆಳದವರೆಗೂ ಕೊರೆಯಲ್ಪಡುತ್ತವೆ. ನಾಗರುರ್‌ನ ಕೆಲವು ರೈತರು, ಸಾವಿರ ಅಡಿ ಕೊರೆದಾಗ್ಯೂ, ನೀರು ದೊರೆಯಲಿಲ್ಲವೆಂದು ತಿಳಿಸುತ್ತಾರೆ.

ಎಂ.ಎಸ್‌. ಸ್ವಾಮಿನಾಥನ್‌ ರಿಸರ್ಚ್‌ ಫೌಂಡೇಶನ್‌ ವತಿಯಿಂದ 2009ರಲ್ಲಿ ಕೈಗೊಳ್ಳಲಾದ ಅಧ್ಯಯನದ ಪ್ರಕಾರ, ಕೊಳವೆಬಾವಿ ನೀರಾವರಿಯ ತೀವ್ರ ಹೆಚ್ಚಳವು ಅಂತರ್ಜಲದ ಮಟ್ಟವನ್ನು ಕ್ಷೀಣಿಸಿದೆಯಲ್ಲದೆ, ತೆರೆದ ಬಾವಿಗಳನ್ನು ಸಹ ಒಣಗಿಸಿದೆ. ಅನಂತಪುರ್‌ ಜಿಲ್ಲೆಯ 63 ಮಂಡಲ್‌ಗಳಲ್ಲಿನ ಕೇವಲ 12 ಮಂಡಲ್‌ಗಳು ಮಾತ್ರ ಅಂತರ್ಜಲ ಬಳಕೆಗೆ ಸಂಬಂಧಿಸಿದಂತೆ ʼಸುರಕ್ಷಿತʼ ವರ್ಗದಲ್ಲಿವೆ.

PHOTO • Sahith M.

ನಾಗರುರ್‌ನಲ್ಲಿ ಅಂತರ್ಜಲವು ದೊರೆಯುವ ಆಳದ ರೇಖಾಚಿತ್ರ: 2001 - 02ರಲ್ಲಿ ಸುಮಾರು 10 ಮೀಟರ್‌ ಆಳದಲ್ಲಿ ದೊರೆಯುತ್ತಿದ್ದ ಅಂತರ್ಜಲವು 2017ರಲ್ಲಿ 25 ಮೀಟರ್‌ಗಳಷ್ಟು ಆಳಕ್ಕಿಳಿದಿದೆ. ಕೆಲವು ವರ್ಷಗಳಲ್ಲಿ ಇದು ಮತ್ತಷ್ಟು ಆಳಕ್ಕಿಳಿದಿದೆಯಾದರೂ, ಸರಾಸರಿಯು ಕುಸಿಯುತ್ತಿದೆ. (ಆಧಾರ: GroundWater & Water Audit ಇಲಾಖೆ, ಅನಂತಪುರ್). ಬಲಕ್ಕೆ: ಕೆ. ಶ್ರೀನಿವಾಸುಲು, ತಮ್ಮ ಹೊಲದಲ್ಲಿನ ವಿಫಲಗೊಂಡ ಕೊಳವೆಬಾವಿಯೊಂದರ ಕಂಡಿಯನ್ನು ತೋರಿಸುತ್ತಿದ್ದಾರೆ

ಪ್ರತಿಯೊಂದು ಕೊಳವೆಬಾವಿಗೆ ಕನಿಷ್ಠ ಒಂದು ಲಕ್ಷ ರೂ.ಗಳನ್ನು ವ್ಯಯಿಸಿ, ಒಂಬತ್ತು ಎಕರೆಯ ತಮ್ಮ ಜಮೀನಿನಲ್ಲಿ, ಶ್ರೀನಿವಾಸುಲು, ಎಂಟು ಕೊಳವೆಗಾವಿಗಳನ್ನು ಕೊರೆದಸಿದ್ದಾರೆ. ಖಾಸಗಿ ಸಾಲದಾತರಿಂದ ಇವರ ಮೂರು ಗಂಡುಮಕ್ಕಳು ಸುಮಾರು 5 ಲಕ್ಷ ರೂ.ಗಳ ಸಾಲವನ್ನು ಪಡೆದಿದ್ದಾರೆ. ಈಗ, ಅವರ ಕೊಳವೆಬಾವಿಗಳಲ್ಲಿ ಕೇವಲ ಒಂದು ಮಾತ್ರ ಕಾರ್ಯೋನ್ಮುಖವಾಗಿದೆ. ಅದು ಅವರ ಜಮೀನಿನಿಂದ ಸುಮಾರು 2 ಕಿ. ಮೀ. ದೂರದಲ್ಲಿದ್ದು, ಇವರ ಪರಿವಾರವು, ತಮ್ಮ ಜಮೀನಿಗೆ ನೀರನ್ನು ರವಾನಿಸಲು ಡ್ರಿಪ್‌-ಪೈಪ್‌ಗಳಿಗಾಗಿ 2 ಲಕ್ಷ ರೂ.ಗಳನ್ನು ಖರ್ಚುಮಾಡಿದೆ. “ನಮ್ಮ ಉಪಯೋಗಕ್ಕೆ ಸಿದ್ಧವಾಗಿರುವ ಬೆಳೆಗಳನ್ನು ನಾಶವಾಗದಂತೆ ಉಳಿಸಿಕೊಳ್ಳವುದು ನಮ್ಮ ಇಚ್ಛೆ” ಎನ್ನುತ್ತಾರೆ ಶ್ರೀನಿವಾಸುಲು.

ಶ್ರೀನಿವಾಸುಲು ಅವರಂತೆಯೇ ಅನೇಕ ಕೊಳವೆಬಾವಿಗಳನ್ನು ಕೊರೆದು, ಹತಾಶೆಯಿಂದ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿರುವ ಅನೇಕ ರೈತರಿಂದಾಗಿ, 2013ರ ಹೊತ್ತಿಗೆ ಜಿಲ್ಲೆಯಲ್ಲಿ ಸುಮಾರು 2 ಲಕ್ಷ ಕೊಳವೆಬಾವಿಗಳಿದ್ದವು ಎಂಬುದಾಗಿ ಡಾ. ವೈ. ವಿ. ಮಲ್ಲ ರೆಡ್ಡಿ ಎಂಬುವವರು, ಅನಂತ ಪ್ರಸ್ಥಾನಮ್‌  ಎಂಬ ತಮ್ಮ ಪುಸ್ತಕದಲ್ಲಿ ಅಂದಾಜಿಸುತ್ತಾರೆ; “ಆದರೆ ಇವುಗಳಲ್ಲಿ ಸುಮಾರು ಎಂಬತ್ತು ಸಾವಿರ ಕೊಳವೆಬಾವಿಗಳು 2013ರ ಬೇಸಿಗೆಯಲ್ಲಿ ಒಣಗಿಹೋದವೆಂಬುದು ನಮಗೆ ತಿಳಿದಿದೆ” ಎಂದು ಅವರು ಬರೆಯುತ್ತಾರೆ.

ಕೊಳವೆಬಾವಿಗಳ ಒಟ್ಟು ಸಂಖ್ಯೆ ಸುಮಾರು 2017ರಲ್ಲಿ 2.5 ಲಕ್ಷದವರೆಗೆ ತಲುಪಿತ್ತೆಂದು ಈ ವರದಿಗಾರರಿಗೆ ತಿಳಿಸಿದ ರೆಡ್ಡಿಯವರು, “ಕೇವಲ 20 % ಕೊಳವೆಬಾವಿಗಳು ಮಾತ್ರ ಕಾರ್ಯೋನ್ಮುಖವಾಗಿದ್ದು, 80 % ಕೊಳವೆಬಾವಿಗಳು ಕಾರ್ಯಶೀಲವಾಗಿಲ್ಲವೆಂದು ಅಧಿಕಾರಿಗಳು (ಅಂತರ್ಜಲ), ಇತ್ತೀಚೆಗೆ ನನಗೆ ತಿಳಿಸಿದರು” ಎಂದರು.

PHOTO • Sahith M.

ನಾಗರುರ್‌ನಲ್ಲಿ ವಿಫಲಗೊಂಡ ಕೊಳವೆಬಾವಿ ಮತ್ತು ಕಂಡಿಯನ್ನು ಮುಚ್ಚಲು ಬಳಸಲ್ಪಡುವ ಕಲ್ಲು

ಆ ಶೇಕಡ 80ರಲ್ಲಿ, ರಾಮಕೃಷ್ಣ ನಾಯ್ಡು ಅವರ ಜಮೀನಿನ 2 ಬಾವಿಗಳೂ ಸೇರಿವೆ. 2000ದ ನಂತರ ಇವರು ಕೊರೆಸಿದ 3ರಲ್ಲಿ ಕೇವಲ ಒಂದು ಮಾತ್ರ ಕಾರ್ಯೋನ್ಮುಖವಾಗಿದೆ. “ಸುಮಾರು 2010-11ರ ಹೊತ್ತಿಗೆ ನಾನು ಸಾಲವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ಇದಕ್ಕೂ ಮೊದಲು ಅಲ್ಲಿ ಮರಗಳು ಹಾಗೂ ಸಾಕಷ್ಟು ನೀರಿತ್ತು. ಸಾಲವೇ ಇರಲಿಲ್ಲ” ಎಂದರು ನಾಯ್ಡು. ಈಗ ಖಾಸಗಿ ಸಾಲದಾತರಿಂದ ಪಡೆದ ಇವರ ಸಾಲ 2.7 ಲಕ್ಷ ರೂ.ಗಳು. ಕೃಷಿಯ ಆದಾಯದಿಂದ ಪ್ರತಿ ತಿಂಗಳು 2% ಬಡ್ಡಿಯನ್ನಷ್ಟೇ ಪಾವತಿಸಲು ಇವರು ಶಕ್ತರು. “ರಾತ್ರಿಯಲ್ಲಿ ನನಗೆ ನಿದ್ದೆ ಬರುವುದಿಲ್ಲ. ನಾಳೆ ಹಣವನ್ನು ಕೇಳಲು ಯಾರು ಬರಬಹುದು? ಹಳ್ಳಿಯಲ್ಲಿ ನನ್ನನ್ನು ಯಾರು ಅವಮಾನಿಸಬಹು? ಹೀಗೆ, ಸಾಲಗಾರರ ಬಗ್ಗೆ ಯೋಚಿಸುತ್ತಲೇ ಇರುತ್ತೇನೆ” ಎಂದರವರು.

ಸಾಲ, ಹಲವಾರು ಕೊಳವೆಬಾವಿಗಳು, ನೀರು ಹಾಗೂ ಸಾಲವನ್ನು ಕುರಿತ ನಿರಂತರ ಚಿಂತೆಯ ಹೊರತಾಗಿಯೂ ರೈತನಿಗೆ ಉತ್ತಮ ಬೆಳೆಯು ದೊರಕಿದಾಗಲೂ, ಕೃಷಿ ಮಾರುಕಟ್ಟೆಗಳ ಅಸ್ಥಿರತೆಯಿಂದಾಗಿ ಅನಂತಪುರ್‌ನಲ್ಲಿ ಲಾಭದ ಖಾತರಿಯಿಲ್ಲ. ಈ ವರ್ಷದ ಏಪ್ರಿಲ್‌ನಲ್ಲಿ ತಮ್ಮ ಕೊಳವೆಬಾವಿಯ ನೀರನ್ನು ಬಳಸಿ, ನಾಯ್ಡುರವರು ಸಾಂಬಾರನ್ನು ತಯಾರಿಸಲು ಬಳಸುವ ಸೌತೆಕಾಯಿಯ ಉತ್ತಮ ಫಸಲನ್ನು ಪಡೆದಿದ್ದರು. ಸಾಧಾರಣ ಲಾಭವು ದೊರೆಯುವ ನಿರೀಕ್ಷೆಯಲ್ಲಿದ್ದರು. “ಫಸಲನ್ನು ಕಟಾವು ಮಾಡುವ 10 ದಿನಗಳ ಮೊದಲು, ಕೆ.ಜಿ.ಗೆ 14-15 ರೂಪಾಯಿಯಷ್ಟಿದ್ದ ಬೆಲೆಯು ಒಂದು ರೂ.ಗೆ ಕುಸಿಯಿತು. ಬೀಜಗಳನ್ನು ಖರೀದಿಸಲು ನಾನು ಮಾಡಿದ ಖರ್ಚೂ ಸಹ ಗಿಟ್ಟಲಿಲ್ಲ. ಫಸಲನ್ನು ಮೇಕೆಗಳಿಗೆ ತಿನ್ನಿಸಿದೆ” ಎಂದರಾತ.

PHOTO • Sahith M.

ತಮ್ಮ ಆರು ಎಕರೆ ಜಮೀನಿನಲ್ಲಿ ವಿಫಲಗೊಂಡ ಆರು ಕೊಳವೆಬಾವಿಗಳ ಪೈಕಿ ಒಂದು ಕೊಳವೆಬಾವಿಯ ಪಕ್ಕದಲ್ಲಿ ನಿಂತಿರುವ ಜಿ. ಶ್ರೀರಾಮುಲು

ಡಿಸೆಂಬರ್‌ 2016ರಲ್ಲಿ, ಕೊಳವೆಬಾವಿಯ ನೀರಿನಿಂದ ದೊರೆತ ಟೊಮ್ಯಾಟೊ ಫಸಲಿನ ಯಶಸ್ಸಿನ ಹೊರತಾಗಿಯೂ ನಷ್ಟವನ್ನು ಅನುಭವಿಸಿದ ಜಿ. ಶ್ರೀರಾಮುಲು, “ಟೊಮ್ಯಾಟೊಗಳಿಗೂ ಬೆಲೆಯಿರಲಿಲ್ಲ” ಎಂದರು. ಇವರ ಆರು ಎಕರೆ ಜಮೀನಿನಲ್ಲಿ ಆರು ಕೊಳವೆಬಾವಿಗಳು ವಿಫಲಗೊಂಡಿವೆ. ಹಳ್ಳಿಯ ಹೊರಗಿನ ಶ್ರೀ ಸಾಯಿ ಟಿಫಿನ್‌ ಹೋಟೆಲಿನಲ್ಲಿ ಚಹಾ ಕುಡಿಯುತ್ತಾ, ತಮ್ಮ ಕೊಳವೆಬಾವಿಗಳ ಬಗ್ಗೆ ಅವರು ಚರ್ಚಿಸಿದರು. ಸುಮಾರು 7.30ರ ಹೊತ್ತಿಗೆ ಈ ಜಾಗವು ಸಾಮಾನ್ಯವಾಗಿ ಗ್ರಾಹಕರಿಂದ ಗಿಜಿಗುಡುತ್ತದೆ. ವಿಫಲಗೊಂಡ ಫಸಲಿನಿಂದಾಗಿ ತಮ್ಮ ಜಮೀನಿನಲ್ಲಿ ಹೆಚ್ಚು ಸಮಯವನ್ನು ವ್ಯಯಿಸದ ಬಹುತೇಕ ಎಲ್ಲ ರೈತರು, ನಿವೇಶನಗಳಲ್ಲಿನ ನಿರ್ಮಾಣ ಕಾಮಗಾರಿಗಳಿಗೆ ಅಥವಾ ದಿನಗೂಲಿಗಾಗಿ MNREGA ಕೆಲಸದ ತಾಣಗಳಿಗೆ ತೆರಳುತ್ತಾರೆ. ಕುಂಬಾರರಾಗಿದ್ದ ಕೆ. ನಾಗರಾಜು, 2003ರಲ್ಲಿ, ಭೋಜನಾಲಯವನ್ನು ಪ್ರಾರಂಭಿಸಿದರು. “ಪ್ರಾರಂಭದಲ್ಲಿ ದಿನಂಪ್ರತಿ 200-300 ರೂ.ಗಳ ವಹಿವಾಟು ನಡೆಯುತ್ತಿದ್ದು, ಈಗ ದಿನವೊಂದಕ್ಕೆ ಸುಮಾರು ̧̧̧̧̧̧̧̧̧̧̧̧̧̧̧̧̧̧̧1,000 ರೂ.ಗಳ ವಹಿವಾಟಿದೆ” ಎಂದು ಅವರು ತಿಳಿಸಿದರು.

ಕೊಳವೆಬಾವಿಗಳು ಮತ್ತು ತಮ್ಮ ಸಾಲದ ವಿಚಾರದೊಂದಿಗೆ, ರಾಷ್ಟ್ರೀಯ ರಾಜಕಾರಣದಿಂದ ಮೊದಲ್ಗೊಂಡು, ತಮ್ಮ ಅದೃಷ್ಟದವರೆಗೂ ರೈತರು ಹಲವಾರು ವಿಷಯಗಳನ್ನು ಚರ್ಚಿಸುತ್ತಾರೆ. ಭೋಜನಾಲಯದ ಗ್ರಾಹಕರೊಬ್ಬರು, “ಒಂದೊಮ್ಮೆ, ಪಕ್ಷವು ಹಳ್ಳಿಯ ರಾಜಕೀಯ ಮುಖಂಡನಿಗೆ ಸಂಬಂಧಿಸಿತ್ತು. ಈಗ ನಾವು ಗಂಗಮ್ಮನೊಂದಿಗೆ (ನೀರು) ಪಾರ್ಟಿ ಮಾಡುತ್ತೇವೆ” ಎಂದು ವ್ಯಂಗ್ಯವಾಡಿದರು. ಅಂದರೆ, ರೈತರು ತಮ್ಮ ಹಳ್ಳಿಯ ಗುಂಪಿನ ಜಗಳಗಳ ನಂತರ ದಸ್ತಗಿರಿಯಾಗುವುದನ್ನು ತಪ್ಪಿಸಲು ಹಣವನ್ನು ಖರ್ಚುಮಾಡುತ್ತಿದ್ದರು. ಆದರೀಗ ಅವರ ಬಹುತೇಕ ಹಣವು ನೀರಿಗೆ ಖರ್ಚಾಗುತ್ತದೆ.

PHOTO • Sahith M.

ನಾಗರುರ್‌ನ ಹೊರವಲಯದ ಶ್ರೀ ಸಾಯಿ ಟಿಫಿನ್‌ ಹೋಟೆಲಿನ ಬಹುತೇಕ ಗ್ರಾಹಕರೆಂದರೆ, ವಿಫಲಗೊಳ್ಳುತ್ತಿರುವ ಫಸಲುಗಳಿಂದಾಗಿ, ದಿನಗೂಲಿಯ ಕೆಲಸದ ತಾಣಗಳಿಗೆ ಹೊರಟ ರೈತರು

ಪ್ರತಿ ವರ್ಷವೂ ನೀರಿನ ಮಟ್ಟವು ಕುಸಿಯುತ್ತಿರುವುದರಿಂದ, ಕೃಷಿಯು ಅನುಪಯುಕ್ತವೆನಿಸಿದ್ದು, ನಾಗರುರ್‌ನಲ್ಲಿ ಯಾರೂ ಕೃಷಿಕ ಕುಟುಂಬಕ್ಕೆ ಮಗಳನ್ನು ಮದುವೆಮಾಡಿಕೊಡಲು ಇಚ್ಛಿಸುವುದಿಲ್ಲವೆಂಬುದಾಗಿ ಅನೇಕರು ನಮಗೆ ತಿಳಿಸಿದರು. ನಾಯ್ಡು, ಹೀಗೆ ಹೇಳುತ್ತಾರೆ:  “ನಮ್ಮ ಹಳ್ಳಿಯ ಹುಡುಗಿಯೊಬ್ಬಳನ್ನು ಮದುವೆಯಾಗಲು ಬಯಸಿದ್ದೆ. ನನಗೆ ಹೈದರಾಬಾದ್‌ ಅಥವಾ ಇನ್ನೆಲ್ಲಾದರೂ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗವು ದೊರೆತಲ್ಲಿ ನಾವು ಒಪ್ಪುತ್ತೇವೆಂಬುದಾಗಿ ಆಕೆಯ ಹೆತ್ತವರು ತಿಳಿಸಿದರು. ತಮ್ಮ ಮಗಳು ರೈತನೊಂದಿಗೆ ಮದುವೆಯಾಗುವುದನ್ನು ಅವರು ಬಯಸುತ್ತಿರಲಿಲ್ಲ.”

ನಾಯ್ಡು, ವಕೀಲನಾಗಲು ಬಯಸಿದ್ದರು. “ಅದರಿಂದ ಉತ್ತಮ ಜೀವನವನ್ನು ನಡೆಸಬಹುದಿತ್ತಲ್ಲದೆ, ಜನರಿಗೆ ನ್ಯಾಯವನ್ನು ದೊರಕಿಸಿಕೊಳ್ಳಲು ನಾನು ಸಹಾಯಮಾಡಬಹುದಿತ್ತು.” ಎಂದರವರು. ಆದರೆ ಕುಟುಂಬದ ಕಲಹದಿಂದಾಗಿ ತಮ್ಮ ಸ್ನಾತಕ ಪದವಿಯನ್ನು ಸ್ಥಗಿತಗೊಳಿಸಿ, ಕೃಷಿಯನ್ನು ಕೈಗೊಳ್ಳುವಂತೆ ಅವರಿಗೆ ಒತ್ತಡವನ್ನು ಹೇರಲಾಯಿತು. ಅವಿವಾಹಿತರಾದ ಅವರಿಗೀಗ 42ರ ವಯಸ್ಸು. ನನಸಾಗದ ಹಲವಾರು ಕನಸುಗಳು ಅವರಲ್ಲಿವೆ.

ಅನುವಾದ: ಶೈಲಜಾ ಜಿ.ಪಿ.

Rahul M.

Rahul M. is an independent journalist based in Andhra Pradesh, and a 2017 PARI Fellow.

Other stories by Rahul M.
Sahith M.

Sahith M. is working towards an M.Phil degree in Political Science from Hyderabad Central University.

Other stories by Sahith M.
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.