ಮುಂಜಾನೆ 9 ರ ಸುಮಾರಿಗೆ ಎಸ್ಲವತ್ ಬನ್ಯಾ ನಾಯಕ್ ವತ್ವರಪಲ್ಲೆ ಹಳ್ಳಿಯ ಬಳಿಯಿರುವ ಹೈದರಾಬಾದ್-ಶ್ರೀಶೈಲಂ ಹೆದ್ದಾರಿಯಲ್ಲಿ ಸುಮಾರು 150 ಹಸುಗಳ ಹಿಂಡನ್ನು ನಿಭಾಯಿಸುತ್ತಿದ್ದಾನೆ. ಈ ಹಿಂಡು ಪೂರ್ವಘಟ್ಟದ ನಲ್ಲಮಲ ಶ್ರೇಣಿಯ ಕೇಂದ್ರಭಾಗದಲ್ಲಿರುವ ಅಮ್ರಾಬಾದ್ ಹುಲಿ ಮೀಸಲು ಪ್ರದೇಶಕ್ಕೆ ನಿಧಾನವಾಗಿ ಪ್ರವೇಶಿಸುತ್ತಿವೆ. ಕೆಲವು ಜಾನುವಾರುಗಳು ಹುಲ್ಲು ಮೇಯುತ್ತಿದ್ದರೆ ಇನ್ನುಳಿದವುಗಳು ನವಿರಾದ ಎಲೆಗಳನ್ನು ಹೊಂದಿರುವ ಮರದ ಗೆಲ್ಲುಗಳನ್ನು ಎಟಕಿಸಿಕೊಳ್ಳುವುದರಲ್ಲಿ ಮಗ್ನವಾಗಿವೆ.

75 ರ ಪ್ರಾಯದ ನಾಯಕ ಲಂಬಾಡಿ ಸಮುದಾಯಕ್ಕೆ ಸೇರಿದವನು. ಇಲ್ಲಿರುವ ಬಹುತೇಕ ಜಾನುವಾರು ತಳಿಗಾರರಂತೆ ಈತನ ಬಳಿಯೂ ತುರುಪು ಜಾತಿಯ ಜಾನುವಾರುಗಳೇ ಇವೆ. ಲಂಬಾಡಿ (ಒಂದು ಬಗೆಯ ಪರಿಶಿಷ್ಟ ಜಾತಿ), ಯಾದವ (ಗೊಲ್ಲ) (ಓ.ಬಿ.ಸಿ) ಮತ್ತು ಚೆಂಚು (ಹೆಸರಿಸಲೇಬೇಕಾಗಿರುವ ಒಂದು ದುರ್ಬಲ ಬುಡಕಟ್ಟು ಗುಂಪು) ಸಮುದಾಯಗಳು ಸಾಂಪ್ರದಾಯಿಕವಾಗಿ ತುರುಪು ತಳಿಯನ್ನು ನೋಡಿಕೊಳ್ಳುವ ತಳಿಗಾರರು. ಈ ತಳಿಯ ಜಾನುವಾರುಗಳಿಗೆ ಚಿಕ್ಕ ಮತ್ತು ಹರಿತವಾದ ಕೊಂಬುಗಳಿದ್ದರೆ, ಕಠಿಣವಾದ ಮತ್ತು ಸದೃಢವಾದ ಕಾಲುಗಳಿವೆ. ಒದ್ದೆಯಾದ, ಒಣಗಿದ, ಕಲ್ಲುಗಳಿಂದ ತುಂಬಿರುವ ಪ್ರದೇಶಗಳೆಂಬ ಭೇದವಿಲ್ಲದೆ ತರಹೇವಾರಿ ಪ್ರದೇಶಗಳಲ್ಲಿ ಇವುಗಳು ಸರಾಗವಾಗಿ ಸಾಗಬಲ್ಲವು. ಜೊತೆಗೇ ಹೆಚ್ಚಿನ ಭಾರವನ್ನೂ ಕೂಡ ಹೊರಬಲ್ಲವು. ಈ ಪ್ರದೇಶಗಳಲ್ಲಿರುವ ಭಾರೀ ಉಷ್ಣತೆಯನ್ನೂ ಕೂಡ ಇವುಗಳು ಕಿಂಚಿತ್ತು ನೀರಿನ ಸಹಾಯದಿಂದಷ್ಟೇ ದೀರ್ಘಕಾಲದವರೆಗೆ ಸಹಿಸಿಕೊಳ್ಳಬಲ್ಲಷ್ಟು ಸಾಮಥ್ರ್ಯವುಳ್ಳವು.

ಅಮ್ರಾಬಾದ್ ಉಪಜಿಲ್ಲೆಯು ತೆಲಂಗಾಣ-ಕರ್ನಾಟಕ ಗಡಿಭಾಗದ ಪೂರ್ವಭಾಗಕ್ಕಿರುವ ಹಳ್ಳಿಗಳ ಕಡೆಗಿದೆ. ಈ ಭಾಗಗಳಿಂದ ಜಾನುವಾರುಗಳನ್ನು ಕೊಳ್ಳಲೆಂದೇ ಬಹಳಷ್ಟು ಮಂದಿ ಬರುತ್ತಾರೆ. ಇನ್ನು ಜಾನುವಾರುಗಳ ಮೈ ಮೇಲೆ ಕಲೆಗಳಿರುವುದರಿಂದ ಇವುಗಳನ್ನು 'ಪೋಡಾ ತುರುಪು' ಎಂದೂ ಕರೆಯಲಾಗುತ್ತದೆ. ತೆಲುಗು ಭಾಷೆಯಲ್ಲಿ 'ಪೋಡಾ' ಎಂದರೆ ಕಲೆಗಳು ಮತ್ತು 'ತುರುಪು' ಎಂದರೆ ಪೂರ್ವದಿಕ್ಕು. ಟ್ರ್ಯಾಕ್ಟರ್ ಮತ್ತು ಇತರ ಕೃಷಿಸಂಬಂಧಿ ಯಂತ್ರೋಪಕರಣಗಳನ್ನು ಕೊಳ್ಳುವಷ್ಟು ಸ್ಥಿತಿವಂತರಾಗಿಲ್ಲದ ಅದೆಷ್ಟೋ ಮಂದಿ ಚಿಕ್ಕಪುಟ್ಟ ರೈತರಿಗೆ ಪೋಡಾ ತುರುಪು ಬಹಳ ಉಪಯುಕ್ತ ಜಾನುವಾರೆಂಬುದರಲ್ಲಿ ಸಂಶಯವಿಲ್ಲ.

Husaband and wife stand with their cattles behind
PHOTO • Harinath Rao Nagulavancha

75 ರ ಪ್ರಾಯದ ಎಸ್ಲವತ್ ಬಾನ್ಯಾ ನಾಯಕ 60 ರ ಪ್ರಾಯದ ತನ್ನ ಪತ್ನಿಯಾದ ಎಸ್ಲವತ್ ಮರೋನಿಯವರೊಂದಿಗೆ. ಇಂಥಾ ಸಮುದಾಯಗಳಲ್ಲಿ ಮಹಿಳೆಯರು ಸಾಮಾನ್ಯವಾಗಿ ಜಾನುವಾರುಗಳನ್ನು ಮೇಯಿಸುವ ಅಥವಾ ವ್ಯಾಪಾರ ಮಾಡುವ ಪರಿಪಾಠಗಳಿಲ್ಲದಿದ್ದರೂ ಮನೆಯ ಶೆಡ್ಡುಗಳಲ್ಲಿ ಜಾನುವಾರುಗಳನ್ನು ನೋಡಿಕೊಳ್ಳುವ ಜವಾಬ್ದಾರಿಯು ಇವರಿಗಿದೆ. ಕೆಲವೊಮ್ಮೆ ಗಂಡಸರು ಜಾನುವಾರುಗಳೊಂದಿಗೆ ಪಕ್ಕದ ಕಾಡುಗಳಿಗೇನಾದರೂ ಹೋದಲ್ಲಿ ಈ ಮಹಿಳೆಯರೂ ಕೂಡ ಅವರಿಗೆ ಜೊತೆಯಾಗುತ್ತಾರೆ. ಇಂಥಾ ಸಂದರ್ಭಗಳಲ್ಲಿ ತಾತ್ಕಾಲಿಕ ಗುಡಿಸಲುಗಳಲ್ಲಿ ಇವರು ತಮ್ಮ ಗಂಡಂದಿರೊಂದಿಗೆ ನೆಲೆಸುತ್ತಾರೆ.

ಪ್ರತೀವರ್ಷವೂ ದೀಪಾವಳಿಯ ನಂತರದ ಕೆಲ ವಾರಗಳಲ್ಲಿ, ಅಂದರೆ ನವೆಂಬರ್ ತಿಂಗಳಿನಲ್ಲಿ, ವ್ಯಾಪಾರಿಗಳು ಮತ್ತು ರೈತರು ಜಾನುವಾರುಗಳ ವ್ಯಾಪಾರಕ್ಕಾಗಿರುವ ಸ್ಥಳೀಯ ಉತ್ಸವವಾದ ಕುರುಮೂರ್ತಿ ಜತಾರಾಗೆ ಸೇರುತ್ತಾರೆ. ಅಮ್ರಾಬಾದ್ ನಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿ ಆಯೋಜಿಸಲಾಗುವ ತಿಂಗಳಿನುದ್ದಕ್ಕೂ ನಡೆಯುವ ಈ ಉತ್ಸವದಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಮಂದಿ ಸೇರುತ್ತಾರೆ. ನಾಯಕ್ ನಂಥಾ ತಳಿಗಾರರಿಂದ ಖರೀದಿಸಿದ 12 ರಿಂದ 18 ತಿಂಗಳ ಗಂಡು ಕರುಗಳನ್ನು ಇಲ್ಲಿ ಜೋಡಿಗೆ 25,000 - 30,000 ರೂಪಾಯಿಗಳವರೆಗೆ ಮಾರಲಾಗುತ್ತದೆ. ಉತ್ಸವದಲ್ಲಿ ನಾಯಕ್ ಸುಮಾರು ಐದು ಜೋಡಿಗಳನ್ನು ಮಾರಿದರೆ, ಉಳಿದ 1-2 ಜೋಡಿಗಳನ್ನು ವರ್ಷದ ಇತರ ಭಾಗದಲ್ಲಿ ಈತ ಮಾರುತ್ತಾನೆ. ಉತ್ಸವದಲ್ಲಿ ಖರೀದಿಗೆಂದು ಬರುವ ರೈತರು ಜೋಡಿಗೆ ಏನಿಲ್ಲವೆಂದರೂ 25000-40000 ಗಳಷ್ಟು ಬೆಲೆ ತೆತ್ತುತ್ತಾರೆ. ಕೆಲವೊಮ್ಮೆ ರೈತರೂ ಕೂಡ ವ್ಯಾಪಾರಿಗಳಾಗುವುದುಂಟು. ಉತ್ಸವದಲ್ಲಿ ಮಾರಾಟವಾಗದ ಜಾನುವಾರುಗಳನ್ನು ಮರಳಿ ಹಳ್ಳಿಗೆ ಕೊಂಡೊಯ್ದು ತಮ್ಮ ಹೊಲಗಳಲ್ಲಿ ಅವುಗಳನ್ನು ವರ್ಷವಿಡೀ ಮಾರಾಟಕ್ಕಿಡುವ ರೈತರೂ ಇದ್ದಾರೆ.

ಆದರೂ ಜಾನುವಾರುಗಳನ್ನು ಪೋಷಿಸುವ ಕಾರ್ಯವು ಬಹಳ ಸಮಯವನ್ನು ತೆಗೆದುಕೊಳ್ಳುವಂಥದ್ದು. ಕುರುಚಲು ಗಿಡ, ಹುಲ್ಲು ಮತ್ತು ಬಿದಿರುಗಳಿಂದ ತುಂಬಿರುವ ಅಮ್ರಾಬಾದ್ ಆಗಲೇ ಒಣಗಿರುವ ಮತ್ತು ಸಾಯುತ್ತಿರುವ ಅರಣ್ಯ. ಮೀಸಲು ಪ್ರದೇಶದಲ್ಲಿರುವ ಬಫರ್ ವಲಯಗಳಲ್ಲಿ ಜೂನ್ ನಿಂದ ಅಕ್ಟೋಬರ್ ತಿಂಗಳಿನಲ್ಲಿ ಆಹಾರಕ್ಕೇನೂ ಕೊರತೆಯಿರುವುದಿಲ್ಲ. ಆದರೆ ನವೆಂಬರ್ ಮಾಸದ ನಂತರ ಮೇಯಲು ಯೋಗ್ಯವಾದ ಭೂಭಾಗವು ಒಣಗತೊಡಗುತ್ತದೆ. ಕೋರ್ ವಲಯಗಳಿಗೆ ಪ್ರವೇಶಿಸುವ ವಿಚಾರದಲ್ಲಿ ಅರಣ್ಯ ಇಲಾಖೆಯು ಹೇರುವ ನಿರ್ಬಂಧಗಳು ಜಾನುವಾರುಗಳಿಗೆ ನೀಡಬೇಕಾದ ಆಹಾರದ ಸವಾಲನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತವೆ.

ಇಂಥಾ ಸಂದರ್ಭಗಳಲ್ಲಿ ನಾಯಕ್ ತನ್ನ ಹಳ್ಳಿಯಾದ ಮುನ್ನನೂರನ್ನು ಬಿಟ್ಟು ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ತನ್ನ ಸಹೋದರಿಯ ಹಳ್ಳಿಯಾದ ವತ್ವರ್ಲಪಲ್ಲೆಗೆ ತೆರಳುತ್ತಾನೆ. ಇದು ತೆಲಂಗಾಣದ ಅಮ್ರಾಬಾದ್ ಮಂಡಲದ ಮೆಹಬೂಬ್ ನಗರದಲ್ಲಿದೆ (ಈಗ ನಾಗರ್ಕುರ್ನೂಲ್). ಇಂಥಾ ಸಂದರ್ಭಗಳಿಗೆಂದೇ ಆತ ಅರಣ್ಯದ ಪ್ರದೇಶದ ಪಕ್ಕದಲ್ಲೇ ಜಾನುವಾರುಗಳ ಆಹಾರಕ್ಕೆಂದು ಕಣಜದ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾನೆ.

ವೀಡಿಯೋ: ''ಒಂದೇ ಒಂದು ಅಪ್ಪಣೆಯಿಲ್ಲದಿದ್ದರೂ ಅವೆಲ್ಲವೂ ನೀರಿಗೆ ಹಾರುತ್ತವೆ''

ಹೀಗೆ ಜಾನುವಾರುಗಳು ಮೂರನೇ ಬೆಳೆಯಾದ (ಫೆಬ್ರವರಿ-ಮಾರ್ಚ್ ಅಥವಾ ಮೇ-ಜೂನ್ ಅವಧಿಯಲ್ಲಿ) ಭತ್ತದ ಹುಲ್ಲುಗಳನ್ನು ಮೇಯಲು ಗುಂಟೂರು, ಪ್ರಕಾಸಮ್ ಮತ್ತು ನೆಲ್ಲೂರು ಜಿಲ್ಲೆಗಳತ್ತ ಅಜಮಾಸು 300 ಕಿಲೋಮೀಟರುಗಳಷ್ಟು ದೂರ ಪ್ರಯಾಣಿಸುತ್ತವೆ. ಜಾನುವಾರುಗಳನ್ನು ಮೇಯಿಸುವವರು ರೈತರಿಂದ ಹುಲ್ಲುಗಳನ್ನು ಖರೀದಿಸಿ, ಬದಲಿಗೆ ಗೊಬ್ಬರವನ್ನು ನೀಡಿದರೆ ರೈತರು ಈ ಜಾನುವಾರುಗಳನ್ನು ತಮ್ಮ ಜಮೀನಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಅವಕಾಶ ನೀಡುತ್ತಾರೆ. ಜುಲೈ ತಿಂಗಳ ಮಳೆಗಾಲವು ಶುರುವಾಗುವ ಮುನ್ನ ಜಾನುವಾರುಗಳು ಮರಳಿ ತಮ್ಮ ಮನೆಯನ್ನು ಸೇರಿಯಾಗುತ್ತವೆ.

ಅಂದಹಾಗೆ ಬಾನ್ಯಾ ನಾಯಕ್ ಮತ್ತು ಇತರ ಕೆಲ ತಳಿಗಾರರು ಕೇವಲ ಗಂಡು ತಳಿಗಳನ್ನಷ್ಟೇ ವ್ಯಾಪಾರ ಮಾಡುತ್ತಾರೆ. ''ನಾನು ಹೆಣ್ಣು ದನಗಳನ್ನು ಮಾರುವುದಿಲ್ಲ. ಅವುಗಳ ಹಾಲನ್ನೂ ನಾವು ಮಾರುವುದಿಲ್ಲ. ಅವುಗಳು ನಮಗೆ ತಾಯಿಯಿದ್ದಂತೆ'', ಎನ್ನುತ್ತಾನೆ ನಾಯಕ್. ಆದರೂ ಈತ ಅಪರೂಪಕ್ಕೆಂಬಂತೆ ದೊರಕಿದ ಹಾಲಿನಿಂದ ಒಂದಷ್ಟು ತುಪ್ಪದ ಬಾಟಲ್ ಗಳನ್ನು ಸಿದ್ಧಪಡಿಸಿ ಹಳ್ಳಿಯಲ್ಲಿ ಮಾರುತ್ತಾನೆ. ಇದು ಗೊಬ್ಬರದ ವಿಚಾರದಲ್ಲೂ ಸತ್ಯ.

ತಳಿಗಳನ್ನು ಸಂರಕ್ಷಿಸಲು ಮತ್ತು ಇವುಗಳ ಬಗ್ಗೆ ಪ್ರಚುರಪಡಿಸಲು ಗೊಲ್ಲ ಮತ್ತು ಲಂಬಾಡಿ ಸಮುದಾಯಗಳು ತಮ್ಮದೇ ಆದ ಪುಟ್ಟ ಸಮುದಾಯವೊಂದನ್ನು ರಚಿಸಿಕೊಂಡಿವೆ. ಅದರ ಹೆಸರೇ ಅಮ್ರಾಬಾದ್ ಪೋಡಾ ಲಕ್ಷ್ಮಿ ಗೋವು ಸಂಗಮ್. ಆಗಸ್ಟ್ 2018 ರಲ್ಲಿ ಆಂದ್ರಪ್ರದೇಶದ ಸರಕಾರಿ ಅಧಿಕಾರಿಗಳ ಸಹಯೋಗದಲ್ಲಿ ಸಂಗಮ್ ಸಮಾಜವು ನ್ಯಾಷನಲ್ ಬ್ಯೂರೋ ಆಫ್ ಜೆನೆಟಿಕ್ ರಿಸೋರ್ಸಸ್ ನಲ್ಲಿ ನೋಂದಾವಣೆಯನ್ನು ಮಾಡಿಕೊಂಡಿತ್ತು. ಈ ಕೇಂದ್ರವು ದೇಶದೆಲ್ಲೆಡೆ ಜಾನುವಾರು ಮತ್ತು ಕೋಳಿ ಸಾಕಣಿಕೆಯ ಆನುವಂಶಿಕ ಸಂಪನ್ಮೂಲಗಳ ಮೌಲ್ಯಮಾಪನ, ವಿಭಾಗೀಕರಣ ಮತ್ತು ಬಳಕೆಯ ಕಾರ್ಯವನ್ನು ನಿರ್ವಹಿಸುತ್ತದೆ. ನೋಂದಾವಣೆಯ ನಂತರ ಪೋಡಾ ತುರುಪು ಈ ದೇಶದಲ್ಲಿ ಅಧಿಕೃತವಾಗಿ ನೋಂದಾಯಿಸಲ್ಪಟ್ಟ 44 ನೇ ಜಾನುವಾರು ತಳಿಯ ಸ್ಥಾನವನ್ನು ಪಡೆದುಕೊಳ್ಳಲಿದೆ. ಇದು 2014 ರಲ್ಲಿ ಸ್ಥಳೀಯ ತಳಿಗಳ ಸಂರಕ್ಷಣೆಗೆಂದು ಆರಂಭವಾದ ಕೇಂದ್ರ ಸರ್ಕಾರದ ಗೋಕುಲಂ ಮಿಷನ್ನಿನಲ್ಲಿ ಸಂರಕ್ಷಣೆ, ಹೆಚ್ಚಿನ ಸಂಗ್ರಹ ಮತ್ತು ಹೆಚ್ಚಿನ ಲಾಭಗಳನ್ನು ತರುವಲ್ಲಿ ಸಹಾಯಕವಾಗಲಿದೆ.

ಪೋಡಾ ತುರುಪು ತಳಿಯನ್ನು ಪಾಲನೆ ಮಾಡುತ್ತಿರುವ ಹಲವಾರು ಮಂದಿ ಇಂಥದ್ದೊಂದು ಗುರುತಿಸುವಿಕೆಗಾಗಿ ಕಾದಿದ್ದಾರೆ. ''ಇದು ನಮಗೆಲ್ಲರಿಗೂ ಬಹಳ ಲಾಭದಾಯಕವಾಗಲಿದೆ ಮತ್ತು ನಾವು ಈ ನೆರವನ್ನು ನಮ್ಮ ಪೀಳಿಗೆಯುದ್ದಕ್ಕೂ ಸದಾ ನೆನಪಿನಲ್ಲಿಟ್ಟುಕೊಳ್ಳಲಿದ್ದೇವೆ'', ಎನ್ನುತ್ತಿದ್ದಾರೆ 60 ರ ಪ್ರಾಯದ ಮನ್ನನೂರ್ ಹಳ್ಳಿಯ ತಳಿಗಾರರಾಗಿರುವ ರಮಾವತ್ ಮಲ್ಯ ನಾಯಕ್.

Man holding his cow
PHOTO • Harinath Rao Nagulavancha

ಜಾನುವಾರುಗಳೊಂದಿಗೆ ನಮಗಿರುವ ಬಂಧವು ವಿಶಿಷ್ಟವಾದದ್ದು. ನಾವು ಅವುಗಳನ್ನು ನಮ್ಮ ಮಕ್ಕಳಂತೆಯೇ ಪಾಲನೆ ಮಾಡುತ್ತೇವೆ, ಪ್ರೀತಿಸುತ್ತೇವೆ. ಇವುಗಳು ಹಲವು ಪೀಳಿಗೆಗಳಿಂದಲೂ ನಮ್ಮ ಜೊತೆಗಿವೆ. ನಮ್ಮ ಜೀವನವೂ ಇವುಗಳ ಮೇಲೆ ಅವಲಂಬಿತವಾಗಿದೆ. ನಮ್ಮ ಹಿರಿಯರು ಇವುಗಳ ಮೇಲೆ ಅವಲಂಬಿತರಾಗಿದ್ದರು. ಸದ್ಯ ನಾವು ಅವಲಂಬಿತರಾಗಿದ್ದೇವೆ. ಮುಂದೆ ನಮ್ಮ ಮಕ್ಕಳೂ ಕೂಡ ಇವುಗಳ ಮೇಲೆ ಅವಲಂಬಿತರಾಗಲಿದ್ದಾರೆ'', ಎನ್ನುತ್ತಿದ್ದಾರೆ 38 ರ ಪ್ರಾಯದ ಗಂಟಾಲ ಹನುಮಂತು. ಲಂಬಾಡಿ ಸಮುದಾಯಕ್ಕೆ ಸೇರುವ ಈತ ನಾಗರ್ಕುರ್ನೂಲ್ ಜಿಲ್ಲೆಯ ಅಮ್ರಾಬಾದ್ ಮಂಡಲದ ಲಕ್ಷ್ಮಾಪುರ (ಬಿ.ಕೆ) ಹಳ್ಳಿಯಲ್ಲಿ ಅಮ್ರಾಬಾದ್ ಪೋಡಾ ಲಕ್ಷ್ಮಿ ಗೋವು ಸಂಗಮ್ ಸಮಾಜದ ಅಧ್ಯಕ್ಷನಾಗಿದ್ದಾನೆ.

Man taking his cattles for grazing
PHOTO • Harinath Rao Nagulavancha

ಮೇಯಿಸಲೆಂದು ನಾವು ಜಾನುವಾರುಗಳನ್ನು ಸುಮಾರು 6-8 ಕಿಲೋಮೀಟರ್ ದೂರಕ್ಕೆ ಕರೆದುಕೊಂಡು ಹೋಗಿ ನಂತರ ಮನೆಗೆ ಮರಳುತ್ತೇವೆ. ಅವುಗಳು ಎತ್ತರದ ಪ್ರದೇಶಗಳನ್ನೂ ಕೂಡ ಸಲೀಸಾಗಿ ಹತ್ತಿ ಮೇಯಲು ಆರಂಭಿಸುತ್ತವೆ'', ಎನ್ನುತ್ತಾನೆ ಹನುಮಂತು. ಮಹಾರಾಷ್ಟ್ರದ ಕುರ್ನೂಲ್ ಜಿಲ್ಲೆ ಮತ್ತು ತೆಲಂಗಾಣದ ಮೆಹಬೂಬ್ ನಗರ್ ಜಿಲ್ಲೆಯ ನಡುವಿನಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಶ್ರೀಶೈಲಂ ಅಣೆಕಟ್ಟಿನ ಪ್ರದೇಶದ 15 ಕಿಲೋಮೀಟರ್ ದಕ್ಷಿಣದ ಜಾಗದಲ್ಲಿ ಗೋವುಗಳನ್ನು ಒಂದು ತಿಂಗಳ ಮಟ್ಟಿಗೆ ಬಿಡಲಾಗಿತ್ತು.

A herd of cattle grazing
PHOTO • Harinath Rao Nagulavancha

''ಕಾಡುಗಳಲ್ಲಿ ನಾವು ಸೌದೆಗಳನ್ನು ರಾಶಿ ಹಾಕಿ ಕ್ಯಾಂಪ್ ಫೈರ್ ನಂತೆ ಬೆಂಕಿ ಉರಿಸುತ್ತೇವೆ. ಇದು ತಾನು ತಂಗಿರುವ ಪ್ರದೇಶದ ಸೂಚನೆಯೆಂಬಂತೆ ಜಾನುವಾರುಗಳಿಗೆ ಕೆಲಸ ಮಾಡುತ್ತದೆ'', ಎನ್ನುತ್ತಾನೆ ಹನುಮಂತು. ಶ್ರೀಶೈಲಂ ಅಣೆಕಟ್ಟಿಗಿಂತ 15 ಕಿಲೋಮೀಟರ್ ದೂರದಲ್ಲಿರುವ ಈ ಸ್ಥಳದಲ್ಲಿ ಈತನ ಶೆಡ್ ಒಂದಿದೆ. ಅಂದಹಾಗೆ ಜಾನುವಾರುಗಳು ಕೃಷ್ಣಾ ನದಿಯನ್ನು ದಾಟಿಕೊಂಡೇ ತೆಲಂಗಾಣದಿಂದ ಆಂಧ್ರಪ್ರದೇಶದವರೆಗೆ ಬಂದಿವೆ

A heard of cattle walking through a river
PHOTO • Harinath Rao Nagulavancha

ಇವುಗಳು ಕೃಷ್ಣಾ ನದಿಯನ್ನು ಸಲೀಸಾಗಿ ಈಜಿ ದಾಟಬಲ್ಲವು. ನನ್ನ ಒಂದೇ ಒಂದು ಅಪ್ಪಣೆಗೆ ಎಲ್ಲವೂ ಕೂಡ ಜೊತೆಯಾಗಿ ನದಿಗೆ ಹಾರುತ್ತವೆ. ನಮ್ಮ ಆಣತಿಗಳನ್ನು ಪಾಲಿಸಲು ಅವುಗಳಿಗೆ ಹೊಡೆಯಬೇಕೆಂದಿಲ್ಲ. ನಮ್ಮದೊಂದು ಸೀಟಿಯ ಸದ್ದೇ ಸಾಕು. ಮೊದಲ ಗೋವು ಮಾತ್ರ ತನ್ನ ಹೆಜ್ಜೆಯನ್ನು ಇಟ್ಟರಾಯಿತು. ಹಿಂಡಿನಿಂದ ಅದೆಷ್ಟು ದೂರವಿದ್ದರೂ ಕೂಡ ಉಳಿದೆಲ್ಲವೂ ಕೂಡ ಮೊದಲ ಗೋವನ್ನು ಹಿಂಬಾಲಿಸಿಕೊಂಡು ಬರುತ್ತವೆ. ಜಾನುವಾರುಗಳೊಂದಿಗೆ ವ್ಯವಹರಿಸಲು ನಾವು ಕೆಲ ಬಗೆಯ ಸದ್ದುಗಳನ್ನು ಮಾಡುತ್ತೇವೆ. ಇದೊಂಥರಾ ಭಾಷೆಯಿದ್ದಂತೆ. ಎಲ್ಲವೂ ಅಲ್ಲದಿದ್ದರೂ, ಕೆಲ ಜಾನುವಾರುಗಳು ಈ ಸಂಜ್ಞೆಗಳನ್ನು ಅರ್ಥಮಾಡಿಸಿಕೊಂಡು ಅನುಸರಿಸುತ್ತವೆ'', ಎನ್ನುತ್ತಿದ್ದಾನೆ ಹನುಮಂತು.

Man with his cattle
PHOTO • Harinath Rao Nagulavancha
A calf by the river
PHOTO • Harinath Rao Nagulavancha

ಎಡ: ಎಸ್ಲವತ್ ಬಾನ್ಯಾ ನಾಯಕ್ ತನ್ನ ಹಸುವಿನ ಹಾಲಿನ ಬಹುಪಾಲನ್ನು ಕರುವಿನ ಆರೋಗ್ಯಕರ ಬೆಳವಣಿಗೆಗೆಂದೇ ಮೀಸಲಿಡುತ್ತಾನೆ. ಬಲ: ಎರಡು ವಾರದ ಕರುವೂ ಕೂಡ ಈಜುವ ಸಾಮಥ್ರ್ಯವನ್ನು ಹೊಂದಿರುತ್ತದೆ. ಆದರೂ ಸುರಕ್ಷೆಗೆಂಬಂತೆ ಈಜುವಿಕೆಯ ಸಮಯದಲ್ಲಿ ಕರುವನ್ನು ಒಂದು ಮರದ ಕೊರಡಿಗೆ ಕಟ್ಟಲಾಗಿರುತ್ತದೆ.

a herd of cattle
PHOTO • Harinath Rao Nagulavancha

ಜಾನುವಾರುಗಳು ಕಣಜದ ಪ್ರದೇಶದಲ್ಲಿ ಅದೆಷ್ಟೇ ತಿಂಗಳುಗಳಿಂದ ಇದ್ದರೂ, [ವಿಪರೀತ ಮಳೆಯಾದ ಸಂದರ್ಭಗಳಲ್ಲಿ] ಪ್ರದೇಶಗಳಲ್ಲಿ ನೀರು ಜಮೆಯಾದರೂ ಅವುಗಳ ಗೊರಸುಗಳು ಮೃದುವಾಗುವುದಿಲ್ಲ. ಈ ಗೊರಸುಗಳೇ ಪೋಡಾ ತುರುಪು ತಳಿಯ ವೈಶಿಷ್ಟತೆಗಳಲ್ಲೊಂದು'', ಎಂದು ಅಭಿಪ್ರಾಯಪಡುತ್ತಾನೆ ಹನುಮಂತು.

Man watching over his cattle
PHOTO • Harinath Rao Nagulavancha
Old man
PHOTO • Harinath Rao Nagulavancha

ಅಮ್ರಾಬಾದ್ ಹುಲಿ ಮೀಸಲು ಪ್ರದೇಶವಾಗಿರುವುದರಿಂದ ಆಗಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ತಳಿಗಾರರ ಮಧ್ಯೆ ವೈಮನಸ್ಸುಗಳಾಗುವುದುಂಟು. ದೊಡ್ಡ ಹಿಂಡಿನಲ್ಲಿ ಸಾಗುವ ಜಾನುವಾರುಗಳು ಆಹಾರದ ತಲಾಶೆಯಲ್ಲಿ ಸಾಮಾನ್ಯವಾಗಿ ಬಫರ್ ಮತ್ತು ಕೋರ್ ವಲಯಗಳಲ್ಲಿ ಹಂಚಿಹೋಗುತ್ತವೆ. ''ಅಪಾಯವು ತನ್ನ ಆಸುಪಾಸಿನಲ್ಲಿ ಸುಳಿಯುತ್ತಿದ್ದರೆ ಜಾನುವಾರುಗಳು ತಕ್ಷಣ ಎಚ್ಚರವಾಗುತ್ತವೆ. ಅವುಗಳು [ಹುಲಿ, ಚಿರತೆ, ಕರಡಿ] ಅಕ್ಕಪಕ್ಕದಲ್ಲೇನಾದರೂ ಇದ್ದರೆ ಜೊತೆಯಾಗಿಯೇ ಹೆದರಿಸಿ ಓಡಿಸುತ್ತವೆ. ಆಚಂಪೇಟ್ [ಅರಣ್ಯ] ವಲಯದಲ್ಲಿ ಹುಲಿಯೊಂದು ಇದೆಯೆಂಬುದು ಇಂದು ತಿಳಿದುಬಂದರೆ ಅವರು ಅಮ್ರಾಬಾದ್ ವಲಯಕ್ಕೆ ತೆರಳುತ್ತಾರೆ. ಅಮ್ರಾಬಾದ್ ವಲಯದಲ್ಲಿ ಅಂಥದ್ದೇನಾದರೂ ಕಂಡುಬಂದರೆ ಅಲ್ಲಿಂದ ಮದ್ದಿಮಡುಗು [ಅರಣ್ಯ] ವಲಯಕ್ಕೆ ಮುಂದೆ ಅವರು ಪ್ರಯಾಣ ಬೆಳೆಸುತ್ತಾರೆ'', ಎನ್ನುತ್ತಿದ್ದಾರೆ ಮನ್ನನೂರ್ ಹಳ್ಳಿಯ ತಳಿಗಾರರಾದ ರಮಾವತ್ ಮಲ್ಯ ನಾಯಕ್ (ಬಲ). ಆದರೂ ಕೆಲವೊಮ್ಮೆ ಚಿರತೆಗಳು (ಅಪರೂಪಕ್ಕೊಮ್ಮೆ ಹುಲಿಗಳೂ ಕೂಡ) ಗೋವುಗಳು ಮತ್ತು ಕರುಗಳ ಮೇಲೆ ದಾಳಿ ಮಾಡಿ ಅವುಗಳನ್ನು ಕೊಲ್ಲುವ ಘಟನೆಗಳು ನಡೆಯುತ್ತಿರುತ್ತವೆ.

Man using his cattle for work
PHOTO • Harinath Rao Nagulavancha

ಲಕ್ಷ್ಮಾಪುರ (ಬಿ.ಕೆ) ಹಳ್ಳಿಯ ರತ್ನವತ್ ರಮೇಶ್ ರಂಥಾ ಹಲವಾರು ಚಿಕ್ಕಪುಟ್ಟ ರೈತರಿಗೆ ಪೋಡಾ ತುರುಪು ತಳಿಯ ಜಾನುವಾತುಗಳು ಬಲು ಉಪಯುಕ್ತವಾಗಿರುವಂಥವುಗಳು. ''ಅದೆಷ್ಟು ಕಠಿಣವಾಗಿದ್ದರೂ ಕೆಲಸಕ್ಕೆ ಇವುಗಳು ಹಿಂದೇಟು ಹಾಕುವುದಿಲ್ಲ. ಒಂದು ಪಕ್ಷ ತಾನು ನಾಳೆ ಸಾಯುವೆನೆಂಬ ಸೂಚನೆಯು ಸಿಕ್ಕಂತಾದರೆ ಇಂದಿನ ದಿನವಿಡೀ ದುಡಿದು ಮನೆಗೆ ಮರಳಿ ಮರುದಿನವಷ್ಟೇ ಸಾವಿಗೆ ಶರಣಾಗುತ್ತದೆ'', ಎನ್ನುತ್ತಾರೆ ಮಲ್ಯ ನಾಯಕ್.

Man with his cattle
PHOTO • Harinath Rao Nagulavancha
Old woman
PHOTO • Harinath Rao Nagulavancha

ಲಕ್ಷ್ಮಾಪುರ (ಬಿ.ಕೆ) ಹಳ್ಳಿಯಲ್ಲಿರುವ ಆರು ಎಕರೆ ಜಮೀನಿನಲ್ಲಿ ಹತ್ತಿ, ಮೆಣಸು, ರಾಗಿ ಮತ್ತು ದ್ವಿದಳಧಾನ್ಯಗಳನ್ನು ಬೆಳೆಯುವ ಗಂಟಾಲ ಬಾಲು ನಾಯಕ್ ಪೋಡಾ ತುರುಪು ಜಾನುವಾರುಗಳನ್ನು ಬಹುವಾಗಿ ಅವಲಂಬಿಸಿದ್ದಾನೆ. ''ಅವುಗಳನ್ನು ನಾವು ಪಲೆಂಕಿ, ಇಡ್ಡಿ, ಬೋರಿ, ಲಿಂಗಿ... ಇತ್ಯಾದಿ ಹೆಸರಿನಿಂದ ಕರೆಯುತ್ತೇವೆ. ಇವೆಲ್ಲವೂ ನಾವು ಆರಾಧಿಸುವ ದೇವಿಯರ ಹೆಸರುಗಳು'', ಎನ್ನುತ್ತಾರೆ ಹನುಮಂತುವಿನ ತಾಯಿಯಾಗಿರುವ 80 ರ ವೃದ್ಧೆಯಾದ ಗಂಟಾಲ ಗೋರಿ.

Herd of cattle, up for sale
PHOTO • Harinath Rao Nagulavancha

''ಪ್ರತೀವರ್ಷವೂ ನಾವು 'ಕುರುಮೂರ್ತಿ ಜತಾರಾ'ಗೆ [ಮೆಹಬೂಬ್ ನಗರ್ ಜಿಲ್ಲೆಯ ಚಿನ್ನಚಿಂಟಕುಂಟ ಮಂಡಲದ ಅಮ್ಮಾಪುರ ಹಳ್ಳಿಯಲ್ಲಿ ನಡೆಯುವ ಒಂದು ಸ್ಥಳೀಯ ಉತ್ಸವ] ಹೋಗಿ ಜಾನುವಾರುಗಳ ವ್ಯಾಪಾರ ಮಾಡುತ್ತೇವೆ. ರಾಯಚೂರು, ಅನಂತಪುರ ಮತ್ತು ಮಂತ್ರಾಲಯಗಳಿಂದಲೂ ಖರೀದಿಗೆಂದು ನೂರಾರು ಜನ ಬಂದು ಸೇರುತ್ತಾರೆ. ಈ ತಳಿಯು ಅವರು ಮಾಡುವ ಕೃಷಿಗೆ ತಕ್ಕದಾದ ಜಾನುವಾರು ಎಂಬ ನಂಬಿಕೆ ಅವರಿಗಿದೆ'', ಎನ್ನುತ್ತಿದ್ದಾನೆ ಹನುಮಂತು.

ಅನುವಾದ : ಪ್ರಸಾದ್ ನಾಯ್ಕ್

Harinath Rao Nagulavancha

Harinath Rao Nagulavancha is a citrus farmer and an independent journalist based in Nalgonda, Telangana.

Other stories by Harinath Rao Nagulavancha
Translator : Prasad Naik

Currently working as a Senior Engineer at Gurugram (Haryana), Prasad Naik has served in Uige of Republic of Angola (Africa) for a drinking water supply project. Prasad Naik is a freelance writer and columnist. He can be contacted at [email protected]. This translation was coordinated by Crazy Frog Media Features. Crazy Frog Media is a congregation of likeminded Journalists. A Bangalore-based online news media hub that offers news, creative content, business solutions and consultancy services.

Other stories by Prasad Naik