ತೆಲಂಗಾಣ ರಾಜ್ಯದ ಸಿದ್ಧಿಪೇಟೆ ಜಿಲ್ಲೆಯ ಧರ್ಮಾರಾಮ್ ಹಳ್ಳಿಯ ಕೃಷಿಕ, 42ರ ಹರೆಯದ ವಾರ್ದಬಾಲಯ್ಯ ತನ್ನ ಹೆಸರಿನಲ್ಲಿದ್ದ ಒಂದೆಕರೆ ಭೂಮಿಯನ್ನು ಮಾರಲು ಸಿದ್ಧರಾಗಿದ್ದರು. ಸಿದ್ಧಿಪೇಟೆ ಮತ್ತು ರಾಮಯ್ಯ ಪೇಟೆಗಳನ್ನು ಸಂಪರ್ಕಿಸುವ ರಸ್ತೆಗೆ ತಾಗಿಕೊಂಡಿದ್ದ ನೆಲ ಅದು. ಇದು ನವೆಂಬರ್ 8ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೋಟು ರದ್ಧತಿಯನ್ನು ಪ್ರಕಟಿಸುವ ಒಂದು ವಾರದ ಮೊದಲಿನ ಸನ್ನಿವೇಶ.

ಅಕ್ಟೋಬರಿನಲ್ಲಿ ಅಕಾಲಿಕ ಮಳೆ ಸುರಿದದ್ದರಿಂದಾಗಿ ವಾರ್ಧರಾಮಯ್ಯನವರ ಜೋಳದ ಹೊಲ ನಾಶವಾಗಿತ್ತು.  ಖಾಸಗಿ ಲೇವಾದೇವಿಗಾರರಿಂದ ಮತ್ತು ಆಂಧ್ರ ಬ್ಯಾಂಕಿನಿಂದ ಪಡೆದ ಸುಮಾರು 8-10 ಲಕ್ಷ ರೂಪಾಯಿಗಳ ಸಾಲಕ್ಕೆ ಬಡ್ಡಿ ಒಂದೇ ಸವನೆ ಏರುತ್ತಿತ್ತು. ಹಣ ಇಲ್ಲದೆ ಸಾಲ ಕೊಟ್ಟವರಿಗೆ ಮುಖ ತೋರಿಸುವಂತಿರಲಿಲ್ಲ.  ಹಾಗಾಗಿ ಅವರು ತಮ್ಮ ಸಾಲಕ್ಕೆ ಕೆರೆಭೂಮಿಯಲ್ಲಿ ರಸ್ತೆ ಬಳಿ ಇದ್ದು ಲಾಭದಾಯಕವಾಗಿರುವ ಒಂದೆಕರೆ ಭೂಮಿಯನ್ನು ಖರೀದಿಸುವವರು ಯಾರಾದರೂ ಇದ್ದಾರೋ ಎಂಬ ಹುಡುಕಾಟದಲ್ಲಿ ತೊಡಗಿದ್ದರು.“ ನೆಲ ಖರೀದಿಸಲು ಗಿರಾಕಿಯೊಬ್ಬರು ಬಂದಿದ್ದರು” ಎನ್ನುತ್ತಾರೆ ಅವರ ಹಿರಿಯ ಮಗಳು ಸಿರೀಶಾ.  ಆದರೆ ಇದು ನೋಟು ರದ್ಧತಿಯ ಮೊದಲು. 2012 ರಲ್ಲಿ ಬಾಲಯ್ಯ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದರು.  ಅವರು ತಮ್ಮ ದೊಡ್ಡ ಮಗಳು ಸಿರೀಶಾ ಮದುವೆಗಾಗಿ 4 ಲಕ್ಷ ರೂಪಾಯಿ ಸಾಲ ಮಾಡಿದ್ದರು.  ಆದರೆ ಮೇಲೆ ಬೋರ್ವೆಲ್ ತೋಡಲು 2 ಲಕ್ಷ ಸಾಲ ಆಗಿತ್ತು.  ತೋಡಿದ ಬೋರ್ವೆಲ್ ಗಳಲ್ಲಿ ನಾಲ್ಕರಲ್ಲಿ ಮೂರು ನಿಷ್ಪ್ರಯೋಜಕ ಆಗಿದ್ದವು.  ಇದರಿಂದಾಗಿ ಅವರ ಸಾಲದ ಹೊರೆ ಬೆಳೆದಿತ್ತು.  ಕೆಲವು ತಿಂಗಳ ಹಿಂದೆ ಬಾಲಯ್ಯ ಅವರ ಸಣ್ಣ ಮಗಳು ಅಖಿಲಾ 17, ತುಂಬಿತ್ತು ಮತ್ತು ದೊಡ್ಡ ಮಗಳಿಗೆ ಅದೇ ಪ್ರಾಯದಲ್ಲಿ ಮದುವೆ ಮಾಡಿಕೊಟ್ಟದ್ದರಿಂದಾಗಿ, ಸಣ್ಣ ಮಗಳಿಗೂ (ಇಂಟರ್ ಮೀಡಿಯೇಟ್(12 ನೇ ತರಗತಿ ಅದೇ ಪ್ರಾಯದಲ್ಲಿ ಮದುವೆ ಮಾಡಲು ಬಾಲಯ್ಯ ಉದ್ದೇಶಿಸಿದ್ದರು.


02-Akhila-and-Balayya's-mother-grandmother-RM-Curry Mixed with Demonitisation and a Pinch of Pesticide.jpg

ಬಾಲಯ್ಯನವರ ಸಣ್ಣ ಮಗಳು ಅಖಿಲಾ ಮತ್ತು ಅಜ್ಜಿ ಮಾಂಸಾಹಾರ ತಿನ್ನದ್ದರಿಂದಾಗಿ ಆ ದಿನ ಬದುಕಿ ಉಳಿದಿದ್ದಾರೆ

ಜಾಗ ಮಾರಿ, ಎಲ್ಲ ಸಾಲ ತೀರಿಸಿ, ಮಗಳ ಮದುವೆಯನ್ನೂ ಪೂರೈಸುವುದು ಬಾಲಯ್ಯನವರ ಬಯಕೆಯಾಗಿತ್ತು. ಬಾಲಯ್ಯ ಮಾರಲುದ್ದೇಶಿಸಿದ್ದ ಜಾಗ ರಸ್ತೆ ಪಕ್ಕ ಇದ್ದುದರಿಂದಾಗಿ, ಅದು ಸುಲಭದಲ್ಲಿ ಮಾರಿ ಹೋಗಬಹುದಾಗಿತ್ತು ಮತ್ತು ಕಡಿಮೆಯೆಂದರೂ 15 ಲಕ್ಷ ರೂಪಾಯಿ ಸುಲಭದಲ್ಲಿ ಸಿಗುತ್ತಿತ್ತು ಎನ್ನುತ್ತಾರೆ, ಧರ್ಮಾರಾಮ್ ಹಳ್ಳಿಯ ಜನ.  ಹಾಗಾಗಿದ್ದರೆ, ಅವರ ಹೆಚ್ಚಿನ ಎಲ್ಲ ಸಮಸ್ಯೆಗಳೂ ಪರಿಹಾರ ಕಾಣುತ್ತಿದ್ದವು. ಹಾಳಾದ ಜೋಳದ ಬೆಳೆ ಸಾಲ, ಬಡ್ಡಿಗಾಗಿ ಪೀಡಿಸುತ್ತಿದ್ದ ಖಾಸತಿ ಲೇವಾದೇವಿಗಾರರು, ಅಖಿಲಾ ಮದುವೆ ಮಾಡಬೇಕೆಂಬ ಬಯಕೆ ಎಲ್ಲವಕ್ಕೂ ಪರಿಹಾರ ಇತ್ತು.  ಆದರೆ, ಸರಕಾರ 500, 1000ದ ನೋಟುಗಳನ್ನು ರದ್ದು ಮಾಡಿದ್ದು, ಬಾಲಯ್ಯನವರ ಎಲ್ಲ ಯೋಜನೆಗಳ ಮೇಲೆ ತಣ್ಣೀರು ಸುರಿಯಿತು.  ಭೂಮಿ ಖರೀದಿಗೆಂದು ಒಪ್ಪಿ ಬಂದಿದ್ದ ವ್ಯಕ್ತಿ ಬೇಡವೆಂದು ಹಿಂದೆ ಸರಿ

ದರು.  “ನನ್ನ ತಂದೆ ಮೊದಲು ಸಮಾಧಾನದಲ್ಲಿದ್ದರು. ನೋಟುಗಳಿಗೆ ಆದ ಸ್ಥಿತಿ ಕಂಡ ಮೇಲೆ ಅವರಿಗೆ ಯಾರೂ ತಮ್ಮ ಸಹಾಯಕ್ಕೆ ಬರುವುದಿಲ್ಲ ((ಭೂಮಿ ಖರೀದಿಸುವುದಿಲ್ಲಎಂದು ಅನ್ನಿಸತೊಡಗಿತು  ಮತ್ತು ಅವರು ಬೇಜಾರು ಮಾಡಿಕೊಂಡರು” ಎಂದು ವಿವರಿಸುತ್ತಾರೆ ಸಣ್ಣ ಮಗಳು ಅಖಿಲಾ.

ಬಾಲಯ್ಯ ಸುಲಭದಲ್ಲಿ ಎದೆಗುಂದಿರಲಿಲ್ಲ. ಅವರು ತನ್ನ ನೆಲಕ್ಕೆ ಗಿರಾಕಿಗಳನ್ನು ಹುಡುಕುವುದನ್ನು ಮುಂದುವರಿಸಿದರು. ಆದರೆ ಹೆಚ್ಚಿನವರು ಉಳಿತಾಯ ರಾತ್ರೋರಾತ್ರಿ ಬೆಲೆಯಿಲ್ಲದ್ದಾಗಿ ಬಿಟ್ಟಿತ್ತು. ಹಲವರ ಬಳಿ ಸಕ್ರಿಯ ಬ್ಯಾಂಕ್ ಖಾತೆಯೂ ಇರಲಿಲ್ಲ.

ನೋಟು ರದ್ದತಿಯ ಬಳಿಕ, ನವೆಂಬರ್ 16ರ ವೇಳೆಗೆ, ಇನ್ನು ಸ್ವಲ್ಪ ಕಾಲ ಯಾರೂ ತನ್ನ ಭೂಮಿಯನ್ನು ಖರೀದಿಸಲು ಮುಂದೆ ಬರಲಾರರು ಎಂಬುದು ಅರಿವಾಗಿತ್ತು. ಆ ದಿನ ಬೆಳಗ್ಗೆ ಎದ್ದ ಅವರು ಗದ್ದೆಗೆ ಹೋಗಿ ಜೋಳ ನಷ್ಟ ಆದಮೇಲೆ ನಟ್ಟಿದ್ದ ಸೋಯಾಬೀನ್ ಬೆಳೆಗೆ ಕೀಟನಾಶಕ ಸಿಂಪಡಿಸಿದರು. ಸಂಜೆ ತನ್ನ ತೋಟದಲ್ಲಿ ಮೈಸಮ್ಮನಿಗೆಂದು ಕೋಳಿಯೊಂದನ್ನು ಕತ್ತರಿಸಿ ಅರ್ಪಿಸಿದರು ಮತ್ತು ಅದನ್ನು ರಾತ್ರಿಯ ಊಟಕ್ಕೆಂದು ತಂದರು.

ಬಾಲಯ್ಯನವರ ಮನೆಯಲ್ಲಿ ಹೆಚ್ಚಾಗಿ ಕೋಳಿ ಸಾರು ಮಾಡುವುದು ವಿಶೇಷ ದಿನಗಳಲ್ಲಿ ಅಥವಾ ದೊಡ್ಡ ಮಗಳು ಅಳಿಯನ ಜೊತೆ ತವರಿಗೆ ಬಂದಾಗ ಮಾತ್ರ. ಯಾವತ್ತೂ ಕೋಳಿಯಡುಗೆಯನ್ನು ಬಾಲಯ್ಯ ತಾವೇ ಸ್ವತಃ ಮಾಡುತ್ತಾರೆ. ಕಳೆದ ಬುಧವಾರ ಅವರಿಗೆ ತನ್ನ ಕೊನೆಯ ಊಟ ಹಬ್ಬದೂಟ ಆಗಬೇಕೆಂದಿತ್ತೇನೋ. ಯಾಕೆಂದರೆ ಆ ವಾರದಲ್ಲಿ ಅವರ ಅತ್ಯುತ್ತಮ ಆಸ್ತಿಯೊಂದು ಅವರಿಗೆ ಕೆಟ್ಟ ಕನಸಾಗಿ ಕಾಡತೊಡಗಿತ್ತು. ಬಾಲಯ್ಯ ತಾನು ತಯಾರಿಸಿದ ಚಿಕನ್ ಸಾರಿನಲ್ಲಿ ಕೀಟನಾಶಕದ ಕಾಳುಗಳನ್ನು ಬೆರೆಸಿದ್ದರು. ಈ ಬಗ್ಗೆ ಕುಟುಂಬದವರಿಗೆ ಯಾರಿಗೂ ಗೊತ್ತಿರಲಿಲ್ಲ. ಅವರಿಗೆ ಅವರ ಕುಟುಂಬವನ್ನು ಸಾಲದ ಮಡುವಿನಲ್ಲಿ ಹಾಕಿಹೋಗಲು ಇಷ್ಟ ಇರಲಿಲ್ಲ. ”ಎಲ್ಲರನ್ನೂ ತಮ್ಮೊಂದಿಗೆ ಕರೆದುಕೊಂಡು ಹೋಗಬಯಸಿದ್ದರು” ಎನ್ನುತ್ತಾರೆ ಬಾಲಯ್ಯನವರ ಒಬ್ಬ ಸಂಬಂಧಿ.

ಊಟದ ವೇಳೆ ಬಾಲಯ್ಯ ತುಟಿ ಪಿಟಕ್ ಅಂದಿರಲಿಲ್ಲ. ಆದರೆ, ಊಟ ಮಾಡುವಾಗ ಸಣ್ಣ ಮಗ 19 ವರ್ಷದ ಪ್ರಶಾಂತ್ ಚಿಕನ್ ಸಾರೇಕೆ ಬೇರೆ ರೀತಿಯ ವಾಸನೆ ಬರುತ್ತಿದೆ ಎಂದು ಕೇಳಿದಾಗ ”ನಾನು ಬೆಳಗ್ಗಿನಿಂದ ಸಂಜೆ ತನಕ ಕೀಟ ನಾಶಕ ಸಿಂಪಡಿಸಿ ಬಂದದ್ದರಿಂದಾಗಿ ಆ ವಾಸನೆ ಇರಬಹುದು” ಎಂದು ಸಮಜಾಯಿಷಿ ನೀಡಿದ್ದರು – ಎಂದ್ ಅಖಿಲಾ ತಮ್ಮ ತಂದೆಯ ಜೊತೆ ಮಾಡಿದ ಕೊನೆಯ ಊಟವನ್ನು ನೆನಪಿಸಿಕೊಳ್ಳುತ್ತಾರೆ.

ಕುಟುಂಬದ ಆರು ಮಂದಿ ಸದಸ್ಯರಲ್ಲಿ ನಾಲ್ವರು ಚಿಕನ್ ರಸ ತಿಂದರು. ಬಾಲಯ್ಯ ಅವರ ಪತ್ನಿ ಬಾಲಲಕ್ಷ್ಮಿ, ಬಿ ಟೆಕ್ ಡಿಗ್ರಿ ಓದುತ್ತಿದ್ದ ಮಗ ಪ್ರಶಾಂತ್ ಮತ್ತು ಬಾಲಯ್ಯನವರ 70 ವರ್ಷ ಪ್ರಾಯದ ತಂದೆ ಗಾಲಯ್ಯ, ಆದರೆ ಅಖಿಲಾ ಮತ್ತು ಆಕೆಯ ಅಜ್ಜಿ ಮಾಂಸಾಹಾರ ಸೇವನೆ ಮಾಡುತ್ತಿರಲ್ಲಿಲ್ಲವಾದ್ದರಿಂದ ಅವರಿಬ್ಬರು ಬದುಕಿಕೊಂಡರು.

ಊಟ ಆದ ಬಳಿಕ ಅಜ್ಜನಿಗೆ ತಲೆಸುತ್ತು ಬಂದಂತನಿಸಿ ಅವರು ಮಲಗಿದರು. ಅವರ ಬಾಯಿಯಿಂದ ನೊರೆ ಬುರುಗುತ್ತಿತ್ತು. ನಾವು ಅವರಿಗೆ ಪಾರ್ಶ್ವವಾತ ಬಡಿಯಿತೆಂದು ತಿಳಿದು ಅವರ ಕೈ-ಕಾಲು ನೀವತೊಡಗಿದೆವು. ಕೆಲವು ಕ್ಷಣಗಳಲ್ಲಿ ಅವರು ತೀರಿಕೊಂಡರು” ಎಂದು ಆ ದಿನವನ್ನು ನೆನಪಿಸಿಕೊಳ್ಳುತ್ತಾರೆ ಅಖಿಲಾ.

ಬಾಲಯ್ಯ ಕೂಡಾ ವಾಂತಿ ಮಾಡಿ ಮಲಗಿಕೊಂಡರು. ಆಗ ಅಖಿಲಾ ಮತ್ತು ಆಕೆಯ ತಮ್ಮ ಪ್ರಶಾಂತ್ ಸಂಶಯ ಬಂದು ಅಕ್ಕಪಕ್ಕದವರನ್ನು ಸಹಾಯಕ್ಕಾಗಿ ಕರೆದರು. ಬಂದವರಿಗೆ ಚಿಕನ್ ಸಾರಿನಲ್ಲಿ ವಿಷ ಬೆರೆತಿರುವುದು ಅರಿವಾದಾಗ ಅವರು ಅಂಬುಲೆನ್ಸಿಗೆ ಬರಹೇಳಿದರು. ಬಾಲಲಕ್ಷ್ಮಿ, ಬಾಲಯ್ಯ ಮತ್ತು ಪ್ರಶಾಂತರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಜ್ಜಿ ಮೊಮ್ಮಗಳು ಅಜ್ಜನ ಶವದ ಜೊತೆ ಮನೆಯಲ್ಲೇ ಉಳಿದುಕೊಂಡರು.

ಬಾಲಯ್ಯ ಆಸ್ಪತ್ರೆಯ ಹಾದಿಯಲ್ಲಿ ತೀರಿಕೊಂಡರೆ, ಪತ್ನಿ ಮತ್ತು ಮಗ ತಮ್ಮ ಹಳ್ಳಿಯಿಂದ 20 ಕಿ ಮೀ ದೂರದಲ್ಲಿರುವ ಸಿದ್ಧಿಪೇಟೆಯ ಖಾಸಗಿ ಅಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿರೀಶಾ ಮತ್ತು ಆಕೆಯ ಪತಿ ರಮೇಶ್ ಆಸ್ಪತ್ರೆಯಲ್ಲಿ ತಾಯಿ ಮಗನನ್ನು ನೋಡಿಕೊಂಡು ಆಸ್ಪತ್ರೆ ಬಿಲ್ ಪಾವತಿಸಲು ಒದ್ದಾಡುತ್ತಿದ್ದಾರೆ. ”ಪ್ರಶಾಂತ್ ಎಮರ್ಜನ್ಸಿ ವಾರ್ಡಿನಲ್ಲಿದ್ದು ಆರೋಗ್ಯಶ್ರೀ ಯೋಜನೆಯಡಿ (ಸರ್ಕಾರಿ ಆರೋಗ್ಯ ಸೇವೆ ಯೋಜನೆ) ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿಗೆ ನಮ್ಮದೇ ಉಳಿದ ದುಡ್ಡು ಮತ್ತು ಊರವರು ಸಹಾಯ ಮಾಡಿದ ದುಡ್ಡು ಖರ್ಚು ಮಾಡಿ ಚಿಕಿತ್ಸೆ ನೀಡುತ್ತಿದ್ದೇವೆ” ಎನ್ನುತ್ತಾರೆ ರಮೇಶ್. ಅವರು ಆಸ್ಪತ್ರೆ ಬಿಲ್ಲುಗಳನ್ನೆಲ್ಲ ಜತನದಿಂದ ಇಟ್ಟುಕೊಂಡಿದ್ದಾರೆ. ಏಕೆಂದರೆ ಸರ್ಕಾರ ಬಾಲಯ್ಯ ಅವರ ಸಾವಿನ ಬಳಿಕ ಆ ಕುಟುಂಬಕ್ಕೆ ಸಹಾಯ ನೀಡುವ ಭರವಸೆ ಇತ್ತಿದೆ.


03-Balayya's-mother-RM-Curry Mixed with Demonitisation and a Pinch of Pesticide.jpg

ನೆರೆಹೊರೆಯವರ ಜೊತೆ ದುಃಖದಲ್ಲಿರುವ ವಿಧವೆ ತಾಯಿ, ಆಕೆ ತನ್ನ ಮಗ ಬಾಲಯ್ಯ, ಗಂಡ ಗಾಲಯ್ಯ ಇಬ್ಬರನ್ನೂ ಕಳೆದುಕೊಂಡಿದ್ದಾರೆ

ಇತ್ತ ಮನೆಯಲ್ಲಿ ಅಖಿಲಾ ನೆರೆಹೊರೆಯವರು ಕೊಟ್ಟ ಹಣದ ಸಹಾಯದಿಂದ ತನ್ನ ಅಜ್ಜ ಮತ್ತು ತಂದೆಯ ಅಂತ್ಯಕ್ರಿಯೆಗಳನ್ನು ಮುಗಿಸಿದ್ದಾರೆ. ಜಿಲ್ಲಾಡಳಿತವೂ 15000 ರೂಪಾಯಿ ಕೊಟ್ಟಿದೆ ಎಂದು ಹೇಳಲಾಗುತ್ತಿದೆ.

ಅಖಿಲಾ ತಾಳ್ಮೆ ಕಳೆದುಕೊಂಡಿಲ್ಲ. ಆದರೆ ಭವಿಷ್ಯದ ಬಗ್ಗೆ ಚಿಂತೆಯಲ್ಲಿದ್ದಾರೆ. ”ನನಗೆ ಓದಬೇಕೆಂಬ ಆಸೆ ಇತ್ತು. ನನಗೆ ಗಣಿತ ಇಷ್ಟ. ನಾನು EAMCT (ಇಂಜಿನಿಯರಿಂಗ್ ಮೆಡಿಕಲ್ ಸೀಟಿಗೆ ಪ್ರವೇಶ ಪರೀಕ್ಷೆ) ಬರೆಯಬೇಕೆಂದಿದ್ದೆ. ಆದರೆ ಈಗ… ನನಗೆ ಗೊತ್ತಿಲ್ಲ….”

Rahul M.

Rahul M. is an independent journalist based in Andhra Pradesh, and a 2017 PARI Fellow.

Other stories by Rahul M.
Translator : Rajaram Tallur

Rajaram Tallur is a freelance journalist and a translator by profession. He has over 25 years of work experience in print and web media. Healthcare, science and developmental journalism are among his areas of interest.

Other stories by Rajaram Tallur