ಧಡ್ಗಾಂವ್ ಪ್ರದೇಶದ ಅಕ್ರಾನಿ ತಾಲ್ಲೂಕಿನಲ್ಲಿ ಒಂದು ಉರಿ ಬಿಸಿಲಿನ ಮದ್ಯಾಹ್ನ, ಶೆವಂತಾ ತಡ್ವಿ ತನ್ನ ಸಣ್ಣ ಮೇಕೆಗಳ ಹಿಂಡಿನ ಹಿಂಡಿನ ಹಿಂದೆ ಓಡುತ್ತಿದ್ದಾರೆ, ತನ್ನ ತಲೆಯನ್ನುಸೆರಗಿನಿಂದ ಮುಚ್ಚಿಕೊಂಡ ಅವರು ಮೇಕೆಯೊಂದು ಪೊದೆಯೊಳಗೆ ಹೋದಾಗ ಅಥವಾ ಪಕ್ಕದ ಜಮೀನಿಗೆ ಹೋದರೆ ತನ್ನ ಕೋಲಿನಿಂದ ನೆಲಕ್ಕೆ ಬಡಿದು ಅವುಗಳನ್ನು ವಾಪಸ್‌ ಕರೆಯುತ್ತಾರೆ. "ನಾನು ಅವುಗಳತ್ತ ನಿಗಾ ಇಡ್ಬೇಕು. ಸಣ್ಣ ಮರಿಗಳದು ತುಂಟಾಟ ಹೆಚ್ಚು. ಅವು ಎಲ್ಲೆಂದರಲ್ಲಿ ಹೋಗಿಬಿಡುತ್ತವೆ." ಎಂದು ನಗುತ್ತಾರೆ. "ಈಗ ಅವುಗಳೇ ನನಗೆ ಮಕ್ಕಳಿದ್ದಂತೆ"

ಶೆವಂತಾ ನಂದೂರ್‌ಬಾರ್ ಜಿಲ್ಲೆಯ ಹರಂಕುರಿ ಗ್ರಾಮದ ಸಣ್ಣ ಹಳ್ಳಿ ಮಹಾರಾಜಪದದಲ್ಲಿರುವ ತನ್ನ ಮನೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಕಾಡಿನತ್ತ ನಡೆದು ಬಂದಿದ್ದಾರೆ. ಇಲ್ಲಿ ಅವರು ತನ್ನ ಆಡುಗಳು, ಚಿಲಿಪಿಲಿಗುಟ್ಟುವ ಹಕ್ಕಿಗಳು ಮತ್ತು ಎಲೆಗಳ ಸದ್ದು ಹೊರಡಿಸುವ ಮರಗಳ ನಡುವೆ ಒಂಟಿಯಾಗಿ ಮತ್ತು ಮುಕ್ತವಾಗಿ ಇರುತ್ತಾರೆ. ಇಲ್ಲಿ ಅವಳು ತನ್ನ ಆಡುಗಳು, ಚಿಲಿಪಿಲಿ ಹಕ್ಕಿಗಳು ಮತ್ತು ತುಕ್ಕು ಹಿಡಿಯುವ ಮರಗಳ ನಡುವೆ ಒಂಟಿಯಾಗಿ ಮತ್ತು ಮುಕ್ತಳಾಗಿರುತ್ತಾಳೆ. ವಾನ್ಜೋಟಿ (ಬಂಜರು ಮಹಿಳೆ), ದಾಲ್ಭಾದ್ರಿ (ಶಾಪಗ್ರಸ್ತ ಮಹಿಳೆ) ಮತ್ತು ದುಷ್ಟ್ (ದುಷ್ಟ) ಮೊದಲಾದ ಮೂದಲಿಕೆಯ ಮಾತುಗಳಿಂದಲೂ ಮುಕ್ತವಾಗಿರುತ್ತಾರೆ. ಅವರು ಇಂತಹ ಮೂದಲಿಕೆ ಮತ್ತು ದೌರ್ಜನ್ಯವನ್ನು ಮದುವೆಯಾದ ಹನ್ನೆರಡು ವರ್ಷಗಳಿಂದ ಅನುಭವಿಸುತ್ತಾ ಬಂದಿದ್ದಾರೆ. ಈ ಸ್ಥಳ ಇದೆಲ್ಲವನ್ನೂ ಮರೆಸುತ್ತದೆ.

"ಮಕ್ಕಳಾಗದ ಗಂಡಸರಿಗೆ ಅಂತಹ ಅವಹೇಳನಕಾರಿ ಪದಗಳು ಏಕಿಲ್ಲ?" ಎಂದು ಕೇಳುತ್ತಾರೆ ಶೆವಂತಾ.

ಪ್ರಸ್ತುತ 25ರ ಹರೆಯದ ಶೆವಂತಾ (ಹೆಸರು ಬದಲಿಸಲಾಗಿದೆ)ತನ್ನ 14ನೇ ವಯಸ್ಸಿನಲ್ಲಿ ಮದುವೆಯಾದರು. ಅವರ ಪತಿ 32 ವರ್ಷದ ರವಿ ಕೃಷಿ ಕಾರ್ಮಿಕನಾಗಿದ್ದು ದಿನಕ್ಕೆ 150 ರೂಪಾಯಿ ದುಡಿಯುತ್ತಾರೆ. ರವಿ ಮದ್ಯವ್ಯಸನಿಯೂ ಹೌದು. ಅವರು ಆದಿವಾಸಿಗಳೇ ಹೆಚ್ಚಾಗಿರುವ ಮಹಾರಾಷ್ಟ್ರದ ಈ ಜಿಲ್ಲೆಯ ಭಿಲ್‌ ಸಮುದಾಯಕ್ಕೆ ಸೇರಿದವರು. ಹಿಂದಿನ ರಾತ್ರಿ ಕೂಡ ರವಿ (ಹೆಸರು ಬದಲಿಸಲಾಗಿದೆ) ಹೊಡೆದಿದ್ದಾಗಿ ಶೆವಂತಾ ಹೇಳುತ್ತಾರೆ. "ಇದರಲ್ಲಿ ಹೊಸತೇನೂ ಇಲ್ಲ" ಎಂದು ನಿಡುಸುಯ್ಯುತ್ತಾರೆ. "ನಾನು ಅವರಿಗೆ ಮಗುವನ್ನು ಹೆತ್ತು ಕೊಡಲು ಸಾಧ್ಯವಿಲ್ಲ. ನನ್ನ ಗರ್ಭಕೋಶದಲ್ಲಿ ತೊಂದರೆಯಿರುವುದರಿಂದ ನಾನು ಮತ್ತೆ ಗರ್ಭ ಧರಿಸಲು ಸಾಧ್ಯವಿಲ್ಲ ಎಂದು ಡಾಕ್ಟರ್‌ ಹೇಳಿದ್ದಾರೆ"

2100ರಲ್ಲಿ ಧಡ್ಗಾಂವ್ ಗ್ರಾಮೀಣ ಆಸ್ಪತ್ರೆಯಲ್ಲಿ ಗರ್ಭಪಾತವಾದಾಗ ಅಲ್ಲಿ ಆಕೆಗೆ ಪಾಲಿಸಿಸ್ಟಿಕ್ ಒವೆರಿಯನ್ ಸಿಂಡ್ರೋಮ್ (ಪಿಸಿಓಎಸ್)‌ ಇರುವುದು ಕಂಡುಬಂದಿತ್ತು. ಅದನ್ನೇ ಶೆವಂತಾ ತನ್ನ ಗರ್ಭಕೋಶದಲ್ಲಿ ದೋಷವಿದೆ ಎಂದು ಹೇಳುವುದು. ಈ ವಿಷಯ ತಿಳಿದಾಗ ಆಕೆಗೆ ಕೇವಲ 15 ವರ್ಷ ಪ್ರಾಯವಾಗಿತ್ತು ಮತ್ತು ಮೂರು ತಿಂಗಳ ಗರ್ಭಿಣಿಯಾಗಿದ್ದರು.

When Shevanta Tadvi is out grazing her 12 goats near the forest in Maharajapada hamlet, she is free from taunts of being 'barren'
PHOTO • Jyoti Shinoli

ಮಹಾರಾಜಪಾದ ಹಳ್ಳಿಯ ಕಾಡಿನ ಬಳಿ ಶೆವಂತಾ ತಡ್ವಿ ತನ್ನ 12 ಆಡುಗಳನ್ನು ಮೇಯಿಸುತ್ತಿರುವುದು, ಈ ಸಮಯದಲ್ಲಿ ಅವರು 'ಬಂಜೆ' ಎಂಬ ನಿಂದನೆಯಿಂದ ಮುಕ್ತರಾಗಿರುತ್ತಾರೆ

ಪಿಸಿಓಎಸ್ ಸಂತಾನೋತ್ಪತ್ತಿ ವಯಸ್ಸಿನ ಕೆಲವು ಮಹಿಳೆಯರಲ್ಲಿ ಕಂಡುಬರುವ ಹಾರ್ಮೋನ್‌ಗಳ ಕಾಯಿಲೆಯಾಗಿದ್ದು, ಇದು ವಿರಳ, ಅನಿಯಮಿತ ಅಥವಾ ತಡವಾದ ಋತುಚಕ್ರಗಳು,  ಹೆಚ್ಚಿದ ಆಂಡ್ರೊಜೆನ್‌ ಮಟ್ಟ ಮತ್ತು ಅಂಡಾಣುಗಳ ಸುತ್ತ ಫಾಲಿಕಲ್‌ನೊಂದಿಗೆ ಅಂಡಾಶಯದ ಹಿಗ್ಗುವಿಕೆಗೆ ಕಾರಣವಾಗುತ್ತದೆ. ಇದರಿಂದ ಬಂಜೆತನ, ಗರ್ಭಪಾತ ಅಥವಾ ಅಕಾಲಿಕ ಹೆರಿಗೆ ಸಂಭವಿಸಬಹುದು.

"ಪಿಸಿಓಎಸ್ ಜೊತೆಗೆ, ರಕ್ತಹೀನತೆ, ಕುಡಗೋಲು ಕೋಶ, ನೈರ್ಮಲ್ಯದ ಕೊರತೆ ಮತ್ತು ಲೈಂಗಿಕವಾಗಿ ಹರಡುವ ರೋಗಗಳು ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗುತ್ತವೆ" ಎಂದು ಮುಂಬೈ ಮೂಲದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ. ಕೋಮಲ್ ಚವಾಣ್ ಹೇಳುತ್ತಾರೆ.

ಶೆವಾಂತಾ ಮೇ 2010ರ ದಿನವನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಾರೆ - ಅವರಿಗೆ ಗರ್ಭಪಾತವಾದ ನಂತರ ಅವರಿಗೆ ಪಿಸಿಓಎಸ್ ಇರುವುದನ್ನು ಗುರುತಿಸಲಾಯಿತು. ಅವರ ಜಮೀನನ್ನು ಉಳುಮೆ ಮಾಡಿದ್ದರಿಂದ ಸೂರ್ಯನ ಬಿಸಿಲು ಆಕೆಯ ನೆತ್ತಿಯನ್ನು ಸುಡುತ್ತಿತ್ತು. "ಆ ದಿನ ನನಗೆ ಹೊಟ್ಟೆ ನೋವಿತ್ತು, ಆದರೆ ನನ್ನ ಗಂಡ ಆಸ್ಪತ್ರೆಗೆ ಬರಲು ಒಪ್ಪದ ಕಾರಣ ನಾನು ನೋವನ್ನು ನಿರ್ಲಕ್ಷಿಸಿ ಕೆಲಸಕ್ಕೆ ಹೋಗಿದ್ದೆ." ಎಂದು ಅವರು ಹೇಳುತ್ತಾರೆ. ಮದ್ಯಾಹ್ನದ ಹೊತ್ತಿಗೆ ನೋವು ಅಸಹನೀಯವಾಗಿ ಹೆಚ್ಚಾಯಿತು. "ನನಗೆ ರಕ್ತಸ್ರಾವವಾಗಲು ಶುರುವಾಯಿತು. ನನ್ನ ಸೀರೆ ರಕ್ತದಿಂದ ನೆನೆದುಹೋಗಿತ್ತು." ಎಂದು ಅವರು ಹೇಳುತ್ತಾರೆ. ನಂತರ ಅವರು ಪ್ರಜ್ಞೆ ಕಳೆದುಕೊಂಡಾಗ, ಜೊತೆಗಿದ್ದ ಇತರ ಕೃಷಿ ಕಾರ್ಮಿಕರು ಆಕೆಯನ್ನು ಎರಡು ಕಿಲೋಮೀಟರ್ ದೂರದಲ್ಲಿರುವ ಧಡ್ಗಾಂವ್ ಆಸ್ಪತ್ರೆಗೆ ಕರೆದೊಯ್ದರು.

ಪಿಸಿಓಎಸ್ ಎಂದು ತಿಳಿದ ನಂತರ ಬದುಕು ಅವರ ಪಾಲಿಗೆ ಸಂಪೂರ್ಣವಾಗಿ ಬದಲಾಯಿತು.

ಶೆವಾಂತಾಗೆ ಬಂಜೆತನಕ್ಕೆ ಕಾರಣವಾಗುವ ದೈಹಿಕ ಸಮಸ್ಯೆ ಇದೆ ಎಂದು ಒಪ್ಪಿಕೊಳ್ಳಲು ಪತಿ ನಿರಾಕರಿಸುತ್ತಾರೆ. "ಅವರು ವೈದ್ಯರ ಬಳಿ ಸಹ ಬರದಿದ್ದರೆ ನನಗೆ ಏಕೆ ಗರ್ಭಧರಿಸಲು ಸಾಧ್ಯವಾಗುತ್ತಿಲ್ಲವೆಂದು ಅವರು ಹೇಗೆ ತಿಳಿಯಲು ಸಾಧ್ಯ?" ಎಂದು ಕೇಳುತ್ತಾರೆ ಶೆವಂತಾ. ಆಕೆಯ ಪತಿ ಆಕೆಯ ಸ್ಥಿತಿಯನ್ನು ಅರ್ಥ  ಮಾಡಿಕೊಳ್ಳುವ ಬದಲು ಆಕೆಯೊಂದಿಗೆ ಆಗಾಗ್ಗೆ ಅಸುರಕ್ಷಿತ ಸಂಭೋಗಕ್ಕಿಳಿಯುತ್ತಾನೆ ಮತ್ತು ಕೆಲವೊಮ್ಮೆ ಲೈಂಗಿಕ ದೌರ್ಜನ್ಯವನ್ನೂ ಎಸಗುತ್ತಾನೆ. "ಬಹಳ ಪ್ರಯತ್ನಗಳ ನಂತರವೂ ನಾನು ಮುಟ್ಟಾದರೆ ಅವನು ನಿರಾಶೆಗೊಳ್ಳುತ್ತಾನೆ. ಮತ್ತು ಅದು ಅವನನ್ನು [ಸಂಭೋಗದ ಸಮಯದಲ್ಲಿ] ಹೆಚ್ಚು ಆಕ್ರಮಣಕಾರಿಯನ್ನಾಗಿಸುತ್ತದೆ" ಎನ್ನುತ್ತಾರೆ ಶೆವಂತಾ. "ನನಗೆ ಅದು ಇಷ್ಟವಾಗುವುದಿಲ್ಲ [ಸಂಭೋಗ]" ಎಂದು ಗುಟ್ಟಾಗಿ ಹೇಳುತ್ತಾರೆ. "ಇದರಿಂದಾಗಿ ನೋವಾಗುತ್ತದೆ, ಕೆಲವೊಮ್ಮೆ ಉರಿಯುತ್ತದೆ, ಇನ್ನೂ ಕೆಲವೊಮ್ಮೆ ತುರಿಕೆಯಾಗುತ್ತದೆ ಮೊದಲೆಲ್ಲ ನಾನು ಅಳುತ್ತಿದ್ದೆ ಕೊನೆಗೆ ಅದನ್ನೂ ನಿಲ್ಲಿಸಿದೆ.”

ಬಂಜೆತನ, ಮತ್ತು ಅದರೊಂದಿಗೆ ಬರುವ ಸಾಮಾಜಿಕ ಕಳಂಕ, ಅಭದ್ರತೆ ಮತ್ತು ಪ್ರತ್ಯೇಕಿಸಲ್ಪಡುವುದು ಅವರ ಹಣೆಬರಹವೆಂದು ಈಗ ಅವರು ನಂಬಿದ್ದಾರೆ. “ನಾನು ಮದುವೆಗೆ ಮೊದಲು ನಾನು ತುಂಬಾ ಮಾತಾಡುತ್ತಿದ್ದೆ. ನಾನು  ಇಲ್ಲಿಗೆ ಬಂದ ಮೊದಲಿಗೆ, ನೆರೆಹೊರೆಯ ಮಹಿಳೆಯರು ತುಂಬಾ ಸ್ನೇಹಪರರಾಗಿದ್ದರು. ಆದರೆ ಮದುವೆಯಾದ ಎರಡು ವರ್ಷಗಳ ನಂತರ ಇನ್ನು ನಾನು ಗರ್ಭಧರಿಸಲು ಸಾಧ್ಯವಿಲ್ಲವೆಂಬುದು ಅವರಿಗೆ ತಿಳಿದಾಗ, ಅವರು ನನ್ನಿಂದ ತಪ್ಪಿಸಿಕೊಳ್ಳಲು ಪ್ರಾರಂಭಿಸಿದರು. ಅವರು ತಮ್ಮ ನವಜಾತ ಶಿಶುಗಳನ್ನು ನನ್ನಿಂದ ದೂರವಿಡುತ್ತಾರೆ. ನಾನು ಪಾಪಿ ಎಂದು ಹೇಳುತ್ತಾರೆ.”

Utensils and the brick-lined stove in Shevanta's one-room home. She fears that her husband will marry again and then abandon her
PHOTO • Jyoti Shinoli

ಪಾತ್ರೆಗಳು ಮತ್ತು ಶೆವಾಂತರ ಒಂದು ಕೋಣೆಯ ಮನೆಯಲ್ಲಿನ ಇಟ್ಟಿಗೆಗಳಿಂದ ಕೂಡಿದ ಒಲೆ. ಪತಿ ಇನ್ನೊಂದು ಮದುವೆಯಾಗಿ ತನ್ನನ್ನು ತ್ಯಜಿಸಬಹುದೆಂಬ ಭಯ ಅವರನ್ನು ಕಾಡುತ್ತಿದೆ

ತನ್ನ ಕುಟುಂಬದ ಒಂದು ಕೋಣೆಯ ಇಟ್ಟಿಗೆಯ ಮನೆಯಲ್ಲಿ ಕೆಲವು ಪಾತ್ರೆಗಳು ಮತ್ತು ಕಲ್ಲಿನಿಂದ ಹೂಡಲಾಗಿರುವ ಚುಲ್ಹಾ (ಒಲೆ) ಮಾತ್ರವೇ ಇವೆ. ಈಗಾಗಲೇ ಬಳಲಿರುವ ಶೆವಂತಾ ಇಲ್ಲಿ ಬೇರೆಯಾಗಿ ಬದುಕುತ್ತಿದ್ದಾರೆ. ಇದರ ನಡುವೆ ತನ್ನ ಪತಿ ಇನ್ನೊಂದು ಮದುವೆಯಾಗಬಹುದೆನ್ನುವ ಭಯವೂ ಅವರನ್ನು ಕಾಡುತ್ತಿದೆ. "ನನಗೆ ಇಲ್ಲಿ ಬಿಟ್ಟರೆ ಇನ್ನೆಲ್ಲೂ ನೆಲೆಯಿಲ್ಲ" ಎಂದು ಅವರು ಹೇಳುತ್ತಾರೆ. "ನನ್ನ ಹೆತ್ತವರು ಹುಲ್ಲಿನ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಅವರು ಬೇರೆಯವರ ಜಮೀನಿನಲ್ಲಿ 100 ರೂಪಾಯಿ ದಿನಗೂಲಿಗೆ ದುಡಿಯುತ್ತಾರೆ. ನನ್ನ ನಾಲ್ಕು ತಂಗಿಯರು ಅವರವರ ಬದುಕಿನಲ್ಲಿ ವ್ಯಸ್ತರಾಗಿದ್ದಾರೆ. ನನ್ನ ಬಾವಮೈದುನರು ನನ್ನ ಗಂಡನಿಗೆ ಹುಡುಗಿಯನ್ನು ತೋರಿಸುತ್ತಿದ್ದಾರೆ. ಅವರು ನನ್ನನ್ನು ಬಿಟ್ಟುಬಿಟ್ಟರೆ ನಾನು ಎಲ್ಲಿ ಹೋಗುವುದು?"

ಶೆವಂತಾ ಕೃಷಿ ಕಾರ್ಮಿಕರಾಗಿ ವರ್ಷದಲ್ಲಿ ಸುಮಾರು 160 ದಿನಗಳ ತನಕ 100 ರೂಪಾಯಿ ಕೂಲಿಗೆ ದುಡಿಯುತ್ತಾರೆ. ತಿಂಗಳಿಗೆ 1,000-1,500 ರೂಪಾಯಿಯ ದುಡಿಮೆ ಸಿಕ್ಕರೆ ಅದು ಆಕೆಯ ಅದೃಷ್ಟ. ಆದರೆ ಆ ಹಣದ ಮೇಲೂ ಆಕೆಗೆ ಸಂಪೂರ್ಣ ನಿಯಂತ್ರಣವಿಲ್ಲ. "ನನ್ನ ಬಳಿ ಪಡಿತರ ಚೀಟಿ ಇಲ್ಲ" ಎಂದು ಅವರು ಹೇಳುತ್ತಾರೆ. "ತಿಂಗಳಿಗೆ ಅಕ್ಕಿ, ಜೋಳದ ಹಿಟ್ಟು, ಎಣ್ಣೆ ಮತ್ತು ಮೆಣಸಿನ ಪುಡಿಗಾಗಿ ಸುಮಾರು 500 ರೂಪಾಯಿ ಖರ್ಚು ಮಾಡುತ್ತೇನೆ. ಉಳಿದ ಹಣವನ್ನು ನನ್ನ ಗಂಡ ಕೊಂಡೊಯ್ಯುತ್ತಾರೆ. ಅವರು ಮನೆ ಖರ್ಚಿಗೂ ಹಣವನ್ನು ನೀಡುವುದಿಲ್ಲ. ಡಾಕ್ಟರ್‌ ಖರ್ಚಂತೂ ಬಿಡಿ ಒಂದೊಮ್ಮೆ ನಾನೇನಾದರೂ ಕೇಳಿದರೆ ಹೊಡೆಯುತ್ತಾರೆ. ತಾನು ಆಗಾಗ ದುಡಿಯುವ ಹಣವನ್ನು ಕುಡಿಯುವುದನ್ನು ಬಿಟ್ಟು ಬೇರೆ ಯಾವುದಕ್ಕೆ ಖರ್ಚು ಮಾಡುತ್ತಾರೆಂದು ತಿಳಿದಿಲ್ಲ."

ಒಂದು ಸಮಯದಲ್ಲಿ ಶೆವಂತಾ ತನ್ನ ಪ್ರೀತಿಯ 20 ಆಡುಗಳನ್ನು ಹೊಂದಿದ್ದರು, ಆದರೆ ಅವರ ಗಂಡ ಅವುಗಳನ್ನು ಒಂದೊಂದಾಗಿ ಮಾರುತ್ತಿದ್ದಾನೆ, ಸದ್ಯಕ್ಕೆ ಉಳಿದಿರುವುದು ಕೇವಲ 12 ಆಡುಗಳು ಮಾತ್ರ.

ಆರ್ಥಿಕ ಒತ್ತಡದ ಹೊರತಾಗಿಯೂ, ಶೆವಾಂತಾ ತನ್ನ ಹಳ್ಳಿಯಿಂದ 61 ಕಿಲೋಮೀಟರ್ ದೂರದಲ್ಲಿರುವ ಶಹಡೆ ಪಟ್ಟಣದ ಖಾಸಗಿ ವೈದ್ಯರಿಂದ ಬಂಜೆತನದ ಚಿಕಿತ್ಸೆ ಪಡೆಯಲೆಂದು ಒಂದಿಷ್ಟು ಹಣ ಉಳಿಸುವಲ್ಲಿ ಯಶಸ್ವಿಯಾದರು. ಅವರು 2015ರಲ್ಲಿ ಮೂರು ತಿಂಗಳು ಮತ್ತು 2016ರಲ್ಲಿ ಇನ್ನೂ ಮೂರು ತಿಂಗಳು ಅಂಡೋತ್ಪತ್ತಿ ಉತ್ತೇಜಿಸಲು ಕ್ಲೋಮಿಫೆನ್ ಥೆರಪಿಗೆ 6,000 ರೂಪಾಯಿಗಳನ್ನು ವ್ಯಯಿಸಿದ್ದಾರೆ. "ಆಗ ಧಡ್ಗಾಂವ್‌ನಲ್ಲಿನ ಆಸ್ಪತ್ರೆಯಲ್ಲಿ ಔಷಧಿ ಲಭ್ಯವಿರಲಿಲ್ಲ, ಹೀಗಾಗಿ ನಾನು ನನ್ನ ತಾಯಿಯೊಂದಿಗೆ ಶಹಡೆ ಪಟ್ಟಣದ ಖಾಸಗಿ ಕ್ಲಿನಿಕ್‌ಗೆ ಹೋದೆ"ಎಂದು ನನ್ನೊಡನೆ ಹೇಳಿದರು.

2018ರಲ್ಲಿ, ಅವರು ಧಡ್ಗಾಂವ್ ಗ್ರಾಮೀಣ ಆಸ್ಪತ್ರೆಯಲ್ಲಿ ಅದೇ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಲು ಸಾಧ್ಯವಾಯಿತು, ಆದರೆ ಇದು ಮೂರನೇ ಬಾರಿಗೆ ವಿಫಲವಾಯಿತು. "ಅದರ ನಂತರ ನಾನು ಚಿಕಿತ್ಸೆಯ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿದೆ" ಎಂದು ತನ್ನ ಪ್ರಯತ್ನವನ್ನು ನಿಲ್ಲಿಸಿದ ಶೆವಂತಾ ಹೇಳುತ್ತಾರೆ. "ಈಗ ನನ್ನ ಆಡುಗಳೇ ನನ್ನ ಮಕ್ಕಳು."

Many Adivasi families live in the hilly region of Dhadgaon
PHOTO • Jyoti Shinoli

ಅನೇಕ ಆದಿವಾಸಿ ಕುಟುಂಬಗಳು ಧಡ್ಗಾಂವ್‌ನ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ

ಚಿಕಿತ್ಸೆಯು ಒಂದರಿಂದ ಇನ್ನೊಂದು ಪ್ರಕರಣಕ್ಕೆ ಭಿನ್ನವಾಗಿರುತ್ತದೆ ಎಂದು 30 ಹಾಸಿಗೆಗಳ ಧಡ್ಗಾಂವ್ ಗ್ರಾಮೀಣ ಆಸ್ಪತ್ರೆಯ ಸ್ತ್ರೀರೋಗತಜ್ಞ ಮತ್ತು ಗ್ರಾಮೀಣ ಆರೋಗ್ಯ ಅಧಿಕಾರಿ ಡಾ. ಸಂತೋಷ್ ಪರ್ಮಾರ್ ವಿವರಿಸುತ್ತಾರೆ, ಇದು ಸುತ್ತಮುತ್ತಲಿನ 150 ಹಳ್ಳಿಗಳ ರೋಗಿಗಳನ್ನು ಆರೈಕೆ ಮಾಡುತ್ತದೆ ಮತ್ತು ಪ್ರತಿದಿನ ಸುಮಾರು 400 ರೋಗಿಗಳನ್ನು ಹೊರರೋಗಿ ವಿಭಾಗದಲ್ಲಿ ನೋಂದಾಯಿಸಿಕೊಳ್ಳುತ್ತದೆ. "ಕ್ಲೋಮಿಫೆನ್ ಸಿಟ್ರೇಟ್, ಗೊನಡೋಟ್ರೋಪಿನ್ಗಳು ಮತ್ತು ಬ್ರೋಮೋಕ್ರಿಪ್ಟೈನ್ ನಂತಹ ಔಷಧಗಳು ಕೆಲವರಿಗೆ ಕೆಲಸ ಮಾಡುತ್ತವೆ. ಇತರ ಸಂದರ್ಭಗಳಲ್ಲಿ, ಸುಧಾರಿತ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನಗಳಾದ ಇನ್ ವಿಟ್ರೊ ಫರ್ಟಿಲೈಸೇಷನ್ (ಐವಿಎಫ್) ಮತ್ತು ಇಂಟ್ರಾಯುಟೆರಿನ್‌ ಇನ್‌ಸೆಮಿನೇಷನ್ (ಐಯುಐ) ಅಗತ್ಯವಿರುತ್ತದೆ."

ವೀರ್ಯ ವಿಶ್ಲೇಷಣೆ, ವೀರ್ಯಾಣು ಎಣಿಕೆ, ರಕ್ತ ಮತ್ತು ಮೂತ್ರ ಪರೀಕ್ಷೆಗಳು ಮತ್ತು ಜನನಾಂಗದ ಪರೀಕ್ಷೆಗಳಂತಹ ಮೂಲಭೂತ ಅಂಶಗಳು ಧಡ್ಗಾಂವ್ ಆಸ್ಪತ್ರೆಯಲ್ಲಿ ಸಾಧ್ಯವಿದೆ ಎಂದು ಪರ್ಮಾರ್ ಹೇಳುತ್ತಾರೆ, ಆದರೆ ಯಾವುದೇ ಸುಧಾರಿತ ಬಂಜೆತನ ಚಿಕಿತ್ಸೆ ಇಲ್ಲಿ ಅಥವಾ ನಂದೂರ್‌ಬಾರ್ ಸಿವಿಲ್ ಆಸ್ಪತ್ರೆಯಲ್ಲಿಯೂ ಸಹ‌ ಲಭ್ಯವಿಲ್ಲ. "ಆದ್ದರಿಂದ, ಬಂಜೆತನವಿರುವ ದಂಪತಿಗಳು ಹೆಚ್ಚಾಗಿ ಖಾಸಗಿ ಚಿಕಿತ್ಸಾಲಯಗಳ ಮೇಲೆ ಅವಲಂಬಿತರಾಗಿದ್ದಾರೆ, ಅಲ್ಲಿ ವೆಚ್ಚಗಳು ಸಾವಿರಾರು ರೂಪಾಯಿಗಳಾಗಿರುತ್ತವೆ" ಎಂದು ಅವರು ಹೇಳುತ್ತಾರೆ. ಆಸ್ಪತ್ರೆಯಲ್ಲಿರುವ ಸ್ತ್ರೀರೋಗತಜ್ಞ ಪರ್ಮಾರ್, ಗರ್ಭನಿರೋಧಕ ಸೇವೆಗಳಿಂದ ತಾಯಿಯ ಆರೋಗ್ಯ ಮತ್ತು ನವಜಾತ ಶಿಶುವಿನ ಆರೈಕೆವರೆಗೆ ಎಲ್ಲವನ್ನೂ ನಿರ್ವಹಿಸುತ್ತಾರೆ.

ಭಾರತದಲ್ಲಿ ಬಂಜೆತನದ ನಿರ್ಲಕ್ಷ್ಯಕ್ಕೆ ಪುರಾವೆಯಾಗಿ 2009ರಲ್ಲಿ ಆರೋಗ್ಯ ನೀತಿ ಮತ್ತು ಯೋಜನೆ ಪತ್ರಿಕೆಯಲ್ಲಿನ ಒಂದು ಪ್ರಬಂಧವು "ಆ ಕುರಿತು ಯೋಜನೆ ಮತ್ತು ನೀತಿಗಳು ಅಲಕ್ಷ್ಯಕ್ಕೊಳಗಾಗಿವೆ" ಎಂದು ಹೇಳುತ್ತದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ( ಎನ್‌ಎಫ್‌ಹೆಚ್‌ಎಸ್ -4; 2015-16) 40-44 ವರ್ಷ ವಯಸ್ಸಿನ ಮಹಿಳೆಯರಲ್ಲಿ ಶೇಕಡಾ 3.6 ರಷ್ಟು ಮಹಿಳೆಯರು ಒಮ್ಮೆಯೂ ಮಕ್ಕಳನ್ನು ಹೆತ್ತಿಲ್ಲ ಅಥವಾ ಮಕ್ಕಳಿಲ್ಲದವರು ಎಂದು ದಾಖಲಿಸಿದೆ. ಜನಸಂಖ್ಯೆಯ ಸ್ಥಿರೀಕರಣದ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ, ಬಂಜೆತನ ತಡೆಗಟ್ಟುವಿಕೆ ಮತ್ತು ಆರೈಕೆ ಸಾರ್ವಜನಿಕ ಆರೋಗ್ಯ ರಕ್ಷಣೆಯು ನಿರ್ಲಕ್ಷಿತಗೊಂಡಿದೆ ಮತ್ತು ಕಡಿಮೆ-ಆದ್ಯತೆಯ ಅಂಶವಾಗಿ ಉಳಿದಿದೆ.

ಮನೆಯತ್ತ ಹೊರಡುತ್ತಾ ಶೆವಂತಾ "ಜನನವನ್ನು ನಿಯಂತ್ರಿಸಲು ಸರ್ಕಾರವು ಕಾಂಡೋಮ್ ಮತ್ತು ಮಾತ್ರೆಗಳನ್ನು ಕಳುಹಿಸುತ್ತದೆ; ಹಾಗೆಯೇ ಬಂಜೆತನಕ್ಕೂ ಇಲ್ಲಿ ಉಚಿತ ಚಿಕಿತ್ಸೆಯನ್ನು ನೀಡಲು ಸಾಧ್ಯವಿಲ್ಲವೇ?” ಎಂದು ಕೇಳುತ್ತಾರೆ.

ಇಂಡಿಯನ್ ಜರ್ನಲ್ ಆಫ್ ಕಮ್ಯುನಿಟಿ ಮೆಡಿಸಿನ್‌ನಲ್ಲಿ ಪ್ರಕಟವಾದ 2012-13ರ 12-ರಾಜ್ಯಗಳ ಅಧ್ಯಯನವು , ಹೆಚ್ಚಿನ ಜಿಲ್ಲಾ ಆಸ್ಪತ್ರೆಗಳು ಬಂಜೆತನ ತಡೆಗಟ್ಟಲು ಮತ್ತು ನಿರ್ವಹಿಸಲು ಮೂಲಭೂತ ಮೂಲಸೌಕರ್ಯ ಮತ್ತು ರೋಗನಿರ್ಣಯ ಸೌಲಭ್ಯಗಳನ್ನು ಹೊಂದಿವೆ ಎಂದು ಹೇಳಿದೆ, ಆದರೆ ಹೆಚ್ಚಿನ ಸಮುದಾಯ ಆರೋಗ್ಯ ಕೇಂದ್ರಗಳು (ಸಿಎಚ್‌ಸಿ), ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಎಚ್‌ಸಿ) ಈ ಸೇವೆಗಳು ಲಭ್ಯವಿಲ್ಲ. ಶೇಕಡಾ 94ರಷ್ಟು ಪಿಎಚ್‌ಸಿ ಮತ್ತು ಶೇಕಡಾ 79ರಷ್ಟು ಸಿಎಚ್‌ಸಿಗಳಲ್ಲಿ ವೀರ್ಯ ಪರೀಕ್ಷೆ ಲಭ್ಯವಿರಲಿಲ್ಲ. ಶೇಕಡಾ 42ರಷ್ಟು ಆಸ್ಪತ್ರೆಗಳಲ್ಲಿ ಸುಧಾರಿತ ಪ್ರಯೋಗಾಲಯ ಸೇವೆಗಳು ಲಭ್ಯವಿದ್ದರೂ ಸಿಎಚ್‌ಸಿಗಳಲ್ಲಿ ಕೇವಲ 8 ಶೇಕಡಾ ಮಾತ್ರ ಲಭ್ಯವಿದೆ. ಡಯಾಗ್ನೋಸ್ಟಿಕ್ ಲ್ಯಾಪರೊಸ್ಕೋಪಿ ಕೇವಲ 25 ಶೇಕಡಾ ಜಿಲ್ಲಾ ಮಟ್ಟದಲ್ಲಿ ಲಭ್ಯವಿದ್ದರೆ, ಹಿಸ್ಟರೊಸ್ಕೋಪಿ ಶೇಕಡಾ 8ರಷ್ಟು ಆಸ್ಪತ್ರೆಗಳಲ್ಲಿ ಲಭ್ಯವಿತ್ತು. ಕ್ಲೋಮಿಫೆನ್‌ನೊಂದಿಗಿನ ಅಂಡೋತ್ಪತ್ತಿ ಪ್ರಚೋದನೆಯನ್ನು ಶೇಕಡಾ 83ರಷ್ಟು ಆಸ್ಪತ್ರೆಗಳಲ್ಲಿ ಮತ್ತು ಗೊನಡೋಟ್ರೋಪಿನ್‌ಗಳನ್ನು ಶೇಕಡಾ 33ರಷ್ಟು ಆಸ್ಪತ್ರೆಗಳಲ್ಲಿ ಪ್ರಾಕ್ಟೀಸ್ ಮಾಡಲಾಗುತ್ತಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಆರೋಗ್ಯ ಕೇಂದ್ರಗಳಲ್ಲಿನ ಯಾವುದೇ ಸಿಬ್ಬಂದಿಗಳು ಬಂಜೆತನ ನಿರ್ವಹಣೆ ಕುರಿತು ಯಾವುದೇ ಸೇವೆಯಲ್ಲಿ ತರಬೇತಿ ಪಡೆದಿಲ್ಲ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.

"ಚಿಕಿತ್ಸೆಯ ಲಭ್ಯತೆಯು ಒಂದು ಸಮಸ್ಯೆಯಾಗಿದೆ, ಆದರೆ ಹೆಚ್ಚು ಮುಖ್ಯವಾದುದು ಗ್ರಾಮೀಣ ಆರೋಗ್ಯ ವ್ಯವಸ್ಥೆಯಲ್ಲಿ ತಜ್ಞ ಸ್ತ್ರೀರೋಗತಜ್ಞರ ಅನುಪಸ್ಥಿತಿಯಾಗಿದೆ" ಎಂದು ಭಾರತೀಯ ವೈದ್ಯಕೀಯ ಸಂಘದ ನಾಸಿಕ್ ಚಾಪ್ಟರ್‌ನ ಮಾಜಿ ಅಧ್ಯಕ್ಷ ಡಾ. ಚಂದ್ರಕಾಂತ್ ಸಂಕ್ಲೆಚಾ ಹೇಳುತ್ತಾರೆ. "ಬಂಜೆತನಕ್ಕೆ ಚಿಕಿತ್ಸೆ ನೀಡಲು, ತರಬೇತಿ ಪಡೆದ ಮತ್ತು ಅರ್ಹ ಸಿಬ್ಬಂದಿ ಮತ್ತು ಹೈಟೆಕ್ ಉಪಕರಣಗಳು ಅಗತ್ಯ. ಸರ್ಕಾರದ ಆದ್ಯತೆಗಳು ತಾಯಿಯ ಆರೋಗ್ಯ ಮತ್ತು ನವಜಾತ ಶಿಶುಗಳ ಆರೈಕೆಯಾಗಿರುವುದರಿಂದ, ಪಿಎಚ್‌ಸಿ ಅಥವಾ ಸಿವಿಲ್ ಆಸ್ಪತ್ರೆ ಮಟ್ಟದಲ್ಲಿ ಕೈಗೆಟುಕುವ ಬಂಜೆತನ ನಿವಾರಣಾ ಚಿಕಿತ್ಸೆಯನ್ನು ಒದಗಿಸುವುದು ಆರ್ಥಿಕವಾಗಿ ಕಷ್ಟಕರವಾಗಿದೆ.”

Geeta Valavi spreading kidney beans on a charpoy; she cultivates one acre in Barispada without her husband's help. His harassment over the years has left her with backaches and chronic pains
PHOTO • Jyoti Shinoli

ಗೀತಾ ವಾಲವಿ ರಾಜ್ಮಾವನ್ನು ಚಾರ್ಪಾಯ್‌ ಮೇಲೆ ಹರಡುತ್ತಿರುವುದು; ಅವರು ತನ್ನ ಗಂಡನ ಸಹಾಯವಿಲ್ಲದೆ ಬರಿಸ್ಪಾದದಲ್ಲಿ ಒಂದು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಾರೆ. ಹಲವು ವರ್ಷಗಳ ಗಂಡನ ಕಿರುಕುಳ ಅವರ ಬೆನ್ನುನೋವು ಮತ್ತು ದೀರ್ಘಕಾಲದ ನೋವುಗಳಿಗೆ ಕಾರಣವಾಗಿದೆ

ಶೆವಾಂತಾ ಇರುವ ಹಳ್ಳಿಯಿಂದ ಐದು ಕಿಲೋಮೀಟರ್ ದೂರದಲ್ಲಿರುವ ಗೀತಾ ವಾಲವಿ ಅವರು ಬಾರ್ಸಿಪಾಡಾದಲ್ಲಿನ ತನ್ನ ಹುಲ್ಲಿನ ಗುಡಿಸಲಿನ ಹೊರಗೆ ಖಾಟ್ (ಹಗ್ಗದ ಮಂಚ) ಮೇಲೆ ರಾಜ್ಮಾ ಒಣಗಿಸುತ್ತಿದ್ದಾರೆ. 30 ವರ್ಷದ ಗೀತಾ 45 ವರ್ಷದ ಅಕಾಲಿಕ ಕೃಷಿ ಕಾರ್ಮಿಕ ಸೂರಜ್ ಜೊತೆಯಲ್ಲಿ ಮದುವೆಯಾಗಿ 17 ವರ್ಷಗಳಾಗಿವೆ. ಅವನು ತುಂಬಾ ಕುಡಿಯುತ್ತಾನೆ. ಇವರು ಸಹ ಭಿಲ್ ಸಮುದಾಯಕ್ಕೆ ಸೇರಿದವರು. ಆಶಾ (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು) ಸಾಕಷ್ಟು ಒತ್ತಾಯ ಮಾಡಿದ ನಂತರ ಸೂರಜ್ (ಹೆಸರು ಬದಲಾಯಿಸಲಾಗಿದೆ)‌ ಪರೀಕ್ಷೆಗೆ ಒಳಗಾಗಲು ಒಪ್ಪಿದಾಗ 2010ರಲ್ಲಿ ಆತನಲ್ಲಿ ವೀರ್ಯಾಣು ಸಂಖ್ಯೆ ಕಡಿಮೆಯಿರುವುದು ಪತ್ತೆಯಾಯಿತು. ಅದಕ್ಕೆ ಕೆಲವು ವರ್ಷಗಳ ಮೊದಲು, 2005ರಲ್ಲಿ, ದಂಪತಿಗಳು ಒಂದು ಹೆಣ್ಣು ಮಗುವನ್ನು ದತ್ತು ಪಡೆದರು, ಆದರೆ ಗೀತಾಳ ಅತ್ತೆ ಮತ್ತು ಗಂಡ ಆಕೆಯು ಗರ್ಭಧರಿಸದಿರುವುದಕ್ಕೆ ಆಕೆಯನ್ನೇ ಕಾರಣವಾಗಿಸುತ್ತಾ ನಿಂದಿಸುತ್ತಾರೆ. “ತನ್ನಲ್ಲೇ ಸಮಸ್ಯೆ ಇಟ್ಟುಕೊಂಡು ಮಕ್ಕಳಾಗದಿರುವುದಕ್ಕೆ ಅವನು ನನ್ನನ್ನು ದೂರುತ್ತಾನೆ. ಏನು ಮಾಡುವುದು ನಾನೊಬ್ಬ ಹೆಂಗಸು ಹಾಗಾಗಿ ನಾನು ಬೇರೆಯವರನ್ನು ಮದುವೆಯಾಗಲು ಸಾಧ್ಯವಿಲ್ಲ” ಎಂದು ಗೀತಾ ಹೇಳುತ್ತಾರೆ.

2019 ರಲ್ಲಿ ಗೀತಾ (ಅವರ ನಿಜವಾದ ಹೆಸರಲ್ಲ) ತನ್ನ ಒಂದು ಎಕರೆ ಜಮೀನಿನಲ್ಲಿ 20 ಕಿಲೋಗ್ರಾಂ ರಾಜ್ಮಾ ಮತ್ತು ಒಂದು ಕ್ವಿಂಟಾಲ್ ಜೋಳವನ್ನು ಕೊಯ್ಲು ಮಾಡಿದರು. “ಇದು ಕುಟುಂಬದ ಆಹಾರಕ್ಕಾಗಿ. ನನ್ನ ಪತಿ ಜಮೀನಿನಲ್ಲಿ ಯಾವ ಕೆಲಸವನ್ನೂ ಮಾಡುವುದಿಲ್ಲ. ಕೃಷಿ ದುಡಿಮೆಯಿಂದ ಅವನು ಏನನ್ನು ಸಂಪಾದಿಸಿದರೂ ಅವನು ಕುಡಿಯಲು ಮತ್ತು ಜೂಜಾಟಕ್ಕೆ ಖರ್ಚು ಮಾಡುತ್ತಾನೆ” ಎಂದು ಗೀತಾ ಹೇಳುತ್ತಾರೆ. "ಅವನು ಬಿಟ್ಟಿಯಾಗಿ ತಿನ್ನುತ್ತಾನೆ!"

“ಅವನು ಕುಡಿದು ಮನೆಗೆ ಬಂದಾಗ, ನನ್ನನ್ನು ಒದೆಯುತ್ತಾನೆ, ಕೆಲವೊಮ್ಮೆ ಕೋಲಿನಿಂದ ಹೊಡೆಯುತ್ತಾನೆ. ಅವನು ಶಾಂತವಾಗಿದ್ದಾಗ ಅವನು ನನ್ನೊಂದಿಗೆ ಒಂದಿಷ್ಟೂ ಮಾತನಾಡುವುದಿಲ್ಲ,” ಎಂದು ಅವರು ಹೇಳುತ್ತಾರೆ. ಹಲವಾರು ವರ್ಷಗಳ ಕೌಟುಂಬಿಕ ಹಿಂಸಾಚಾರದಿಂದಾಗಿ ಅವರು ಬೆನ್ನುನೋವು ಮತ್ತು ಭುಜ ಮತ್ತು ಕುತ್ತಿಗೆಯಲ್ಲಿ ದೀರ್ಘಕಾಲದ ನೋವನ್ನು ಅನುಭವಿಸುತ್ತಿದ್ದಾರೆ.

"ನಾವು ಮೈದುನನ ಮಗಳನ್ನು ದತ್ತು ತೆಗೆದುಕೊಂಡೆವು, ಆದರೆ ನನ್ನ ಗಂಡ ತನ್ನ ಸ್ವಂತ ಮಗುವನ್ನು ಬಯಸುತ್ತಾನೆ, ಅದೂ ಒಬ್ಬ ಮಗ, ಆದ್ದರಿಂದ ಆಶಾ ತಾಯ್ ಸೂಚಿಸಿದಂತೆ ಅವನು ಕಾಂಡೋಮ್ ಬಳಸಲು ನಿರಾಕರಿಸುತ್ತಾನೆ ಮತ್ತು ಕುಡಿಯುವುದನ್ನು ನಿಲ್ಲಿಸಲು ಒಪ್ಪುವುದಿಲ್ಲವೆಂದು" ಎಂದು ಗೀತಾ ಹೇಳುತ್ತಾರೆ. ಆಶಾ ಕಾರ್ಯಕರ್ತೆ ಗೀತಾರ ಆರೋಗ್ಯವನ್ನು ವಿಚಾರಿಸಲು ಪ್ರತಿ ವಾರ ಭೇಟಿ ನೀಡುತ್ತಾರೆ ಮತ್ತು ಗೀತಾ ಸಂಭೋಗದ ಸಮಯದಲ್ಲಿ ನೋವು, ಹುಣ್ಣುಗಳು, ಮೂತ್ರ ವಿಸರ್ಜಿಸುವಾಗ ನೋವು, ಅಸಹಜ ಬಿಳಿ ಸೆರಗು ವಿಸರ್ಜನೆ ಮತ್ತು ಹೊಟ್ಟೆಯ ಕೆಳಭಾಗದ ನೋವುಗಳ ಬಗ್ಗೆ ದೂರು ನೀಡಿದ್ದರಿಂದ ಅವರ ಗಂಡನಿಗೆ ಕಾಂಡೋಮ್ ಬಳಸಬೇಕೆಂದು ಸಲಹೆ ನೀಡಿದ್ದಾರೆ, ಇವೆಲ್ಲವೂ ಲೈಂಗಿಕವಾಗಿ ಹರಡುವ ರೋಗದ ಸೂಚಕ ಅಥವಾ ಸಂತಾನೋತ್ಪತ್ತಿ ಅಂಗಗಳ ಪ್ರದೇಶದಲ್ಲಿನ ಸೋಂಕಿನ ಲಕ್ಷಣವಾಗಿದೆ.

ಆರೋಗ್ಯ ಕಾರ್ಯಕರ್ತೆ ಗೀತಾಗೆ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಲಹೆ ನೀಡಿದ್ದಾರೆ, ಆದರೆ ಅವರು ಆ ಬಗ್ಗೆ ಗಮನ ನೀಡುವುದನ್ನು ನಿಲ್ಲಿಸಿದ್ದಾರೆ, ಅವರ ರೋಗಲಕ್ಷಣಗಳನ್ನು ಪರಿಹರಿಸಿಕೊಳ್ಳಲು ನಿರಾಕರಿಸಿದ್ದಾರೆ. "ಈಗ ವೈದ್ಯರನ್ನು ನೋಡಿ ಚಿಕಿತ್ಸೆ ಪಡೆಯುವುದರಿಂದ ಏನು ಪ್ರಯೋಜನ?" ಗೀತಾ ಕೇಳುತ್ತಾರೆ. "ಔಷಧವು ನನ್ನ ದೈಹಿಕ ನೋವನ್ನು ಗುಣಪಡಿಸಬಹುದು ಆದರೆ ಅದರಿಂದ ನನ್ನ ಗಂಡ ಕುಡಿಯುವುದನ್ನು ನಿಲ್ಲಿಸುತ್ತಾರೆಯೇ? ನನ್ನನ್ನು ಹಿಂಸಿಸುವುದನ್ನು ನಿಲ್ಲಿಸುತ್ತಾರೆಯೇ?"

ಡಾ. ಪರ್ಮಾರ್ ಅವರು ಪ್ರತಿ ತಿಂಗಳು ಕನಿಷ್ಠ ನಾಲ್ಕರಿಂದ ಐದು ಬಂಜೆತನದ ಸಮಸ್ಯೆಯಿರುವ ದಂಪತಿಗಳನ್ನು ನೋಡುತ್ತಾರೆ, ಈ ಪ್ರಕರಣಗಳಲ್ಲಿ ಮದ್ಯವ್ಯಸನದಿಂದಾಗಿ ಗಂಡಂದಿರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಿರುವುದು ಪ್ರಾಥಮಿಕ ಸಮಸ್ಯೆಯಾಗಿ ಕಂಡುಬರುತ್ತದೆ. "ಬಂಜೆತನದಲ್ಲಿನ ಪುರುಷ ಆಯಾಮದ ಬಗೆಗಿನ ಅಜ್ಞಾನವು ಮಹಿಳೆಯರ ಮೇಲೆ ಹಿಂಸಾಚಾರಕ್ಕೆ ಕಾರಣವಾಗುತ್ತದೆ" ಎಂದು ಅವರು ಹೇಳುತ್ತಾರೆ, "ಆದರೆ ಹೆಚ್ಚಿನ ಸಮಯದಲ್ಲಿ ಮಹಿಳೆಯರು ಏಕಾಂಗಿಯಾಗಿ ಬರುತ್ತಾರೆ. ಆಪಾದನೆಯನ್ನು ಸಂಪೂರ್ಣವಾಗಿ ಮಹಿಳೆಯರ ಮೇಲೆ ಹಾಕುವ ಬದಲು ಪುರುಷರು ಅರ್ಥಮಾಡಿಕೊಳ್ಳುವುದು ಮತ್ತು ಪರೀಕ್ಷಿಸಿಕೊಳ್ಳುವುದು ಬಹಳ ಮುಖ್ಯ.”

PHOTO • Jyoti Shinoli

ಸರಕಾರ ಜನಸಂಖ್ಯಾ ಸ್ಥಿರೀಕರಣದ ಕುರಿತು ಗಮನಹರಿಸಿದಷ್ಟು ಬಂಜೆತನ ತಡೆ ಮತ್ತು ಆರೈಕೆ ಕುರಿತು ಯೋಚಿಸುವುದಿಲ್ಲ. ಬಂಜೆತನದಲ್ಲಿ ಗಂಡಿನ ಪಾಲಿನ ಕುರಿತ ನಿರ್ಲಕ್ಷ್ಯ ಮಹಿಳೆಯರ ಮೇಲಿನ ಕ್ರೌರ್ಯಕ್ಕೆ ಕಾರಣವಾಗುತ್ತಿದೆ

ಪೂರ್ವ ಮಹಾರಾಷ್ಟ್ರದ ಗಡ್‌ಚಿರೋ‌ಲಿಯ ಬುಡಕಟ್ಟು ವಲಯದಲ್ಲಿ ಮೂರು ದಶಕಗಳಿಂದ ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳ ಮೇಲೆ ಕೆಲಸ ಮಾಡಿರುವ ಡಾ.ರಾಣಿ ಬಾಂಗ್, ಬಂಜೆತನವನ್ನು ವೈದ್ಯಕೀಯ ಸಮಸ್ಯೆಗಿಂತ ಹೆಚ್ಚು ಸಾಮಾಜಿಕ ಸಮಸ್ಯೆ ಎಂದು ವ್ಯಾಖ್ಯಾನಿಸುತ್ತಾರೆ. “ಗಂಡು ಬಂಜೆತನವು ಒಂದು ದೊಡ್ಡ ಸಮಸ್ಯೆಯಾಗಿದೆ, ಆದರೆ ಬಂಜೆತನವನ್ನು ಸ್ತ್ರೀ ಸಮಸ್ಯೆಯಾಗಿ ಮಾತ್ರ ಗ್ರಹಿಸಲಾಗುತ್ತದೆ. ಈ ಮನಸ್ಥಿತಿ ಬದಲಾಗಬೇಕಾಗಿದೆ.”

ಆರೋಗ್ಯ ನೀತಿ ಮತ್ತು ಯೋಜನೆಯಲ್ಲಿನ ಲೇಖನದಲ್ಲಿ, ಲೇಖಕರು ಗಮನಿಸಿದಂತೆ: “ಬಂಜೆತನವು ಒಟ್ಟು ಜನಸಂಖ್ಯೆಯ ಒಂದು ಸಣ್ಣ ಭಾಗದಷ್ಟು ಮಹಿಳೆಯರು ಮತ್ತು ದಂಪತಿಗಳ ಮೇಲೆ ಪರಿಣಾಮ ಬೀರುತ್ತದೆಯಾದರೂ, ಇದೊಂದು ಸಂತಾನೋತ್ಪತ್ತಿ ಆರೋಗ್ಯ ಮತ್ತು ಹಕ್ಕುಗಳ ಪ್ರಮುಖ ವಿಷಯವಾಗಿದೆ.” ಪ್ರಾಥಮಿಕ ಮತ್ತು ಎರಡನೇ ಹಂತದ ಬಂಜೆತನದ ಕಾರಣಗಳು ಗಂಡು ಮತ್ತು ಹೆಣ್ಣು ಇಬ್ಬರಿಗೂ ಸಂಬಂಧಿಸಿದ್ದರೂ, “ಬಂಜೆತನಕ್ಕೆ ಮಹಿಳೆಯರು ಹೆಚ್ಚು ಭಯಪಡುತ್ತಾರೆ, ಅದು ಅವರ ಗುರುತು, ಸಾಮಾಜಿಕ ಸ್ಥಿತಿ ಮತ್ತು ಸುರಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವರು ಕಳಂಕ, ದೂರವಿಡುವಿಕೆ ಮತ್ತು ಚೌಕಾಶಿ ಶಕ್ತಿ ಮತ್ತು ಕುಟುಂಬ ಮತ್ತು ಸಮಾಜದಲ್ಲಿ ಸಬಲೀಕರಣದ ನಷ್ಟವನ್ನು ಅನುಭವಿಸುವಂತೆ ಮಾಡುತ್ತದೆ.”

ಗೀತಾ 8ನೇ ತರಗತಿಯವರೆಗೆ ಓದಿದ್ದು ನಂತರ 2003ರಲ್ಲಿ ತನ್ನ 13ನೇ ವಯಸ್ಸಿನಲ್ಲಿ ವಿವಾಹವಾದರು. ಅವರು ಹಿಂದೆ ಪದವೀಧರರಾಗುವ ಕನಸು ಕಂಡಿದ್ದರು. ಈಗ ಅವರು ತನ್ನ 20 ವರ್ಷದ ಮಗಳು ಲತಾ (ನಿಜವಾದ ಹೆಸರಲ್ಲ) ತನ್ನ ಕನಸನ್ನು ಈಡೇರಿಸುವುದನ್ನು ನೋಡಲು ಬಯಸುತ್ತಾರೆ. ಅವಳು ಧಡ್ಗಾಂವ್‌ನ ಕಿರಿಯ ಕಾಲೇಜಿನಲ್ಲಿ 12 ನೇ ತರಗತಿಯಲ್ಲಿ ಓದುತ್ತಿದ್ದಾಳೆ. “ಅವಳು ನನ್ನ ಗರ್ಭದಲ್ಲಿ ಹುಟ್ಟದಿದ್ದರೇನಂತೆ? ಅವಳ ಜೀವನವೂ ನನ್ನಂತೆ ಹಾಳಾಗುವುದನ್ನು ನಾನು ಬಯಸುವುದಿಲ್ಲ” ಎಂದು ಗೀತಾ ಹೇಳುತ್ತಾರೆ.

ಗೀತಾ ಒಂದು ಕಾಲದಲ್ಲಿ ಒಳ್ಳೆಯ ಉಡುಗೆ ತೊಡುವುದನ್ನು, ಅಲಂಕರಿಸಿಕೊಳ್ಳುವುದನ್ನು ಆನಂದಿಸುವ ಸಮಯವಿತ್ತು. "ನನ್ನ ಕೂದಲಿಗೆ ಎಣ್ಣೆ ಹಾಕುವುದು, ಸೀಗೆಕಾಯಿಯಿಂದ ತೊಳೆಯುವುದು ಮತ್ತು ಕನ್ನಡಿಯಲ್ಲಿ ನೋಡಿಕೊಳ್ಳುವುದನ್ನು ನಾನು ಬಹಳವಾಗಿ ಪ್ರೀತಿಸುತ್ತಿದ್ದೆ." ಗೀತಾರಿಗೆ ಮುಖಕ್ಕೆ ಪೌಡರ್‌ ಹಚ್ಚಲು, ಕೂದಲನ್ನು ಸುಂದರವಾಗಿ ಬಾಚಿಕೊಳ್ಳಲು, ಮತ್ತು ಮನೋಹರವಾಗಿ ಸೀರೆಯುಡಲು ವಿಶೇಷ ಸಂದರ್ಭಗಳೇ ಬೇಕೆಂದಿಲ್ಲ. ಆದರೆ ಮದುವೆಯಾಗಿ ಎರಡು ವರ್ಷಗಳ ನಂತರ ಮಕ್ಕಳಾಗುವ ಯಾವ ಲಕ್ಷಣವೂ ಕಾಣದಿದ್ದಾಗ ತಾನು ಸುಂದರವಾಗಿ ಕಾಣಬೇಕೆಂದು ಬಯಸಿದ್ದಕ್ಕಾಗಿ ʼನಾಚಿಕೆಗೆಟ್ಟವಳುʼ ಎಂದು ಕರೆಯಲಾರಂಭಿಸಿದರು. ಇದರ ನಂತರ ಗೀತಾ ತಮ್ಮ ಅಲಂಕಾರವನ್ನು ನಿರ್ಲಕ್ಷಿಸಲು ಪ್ರಾರಂಭಿಸಿದರು. "ನನಗೆ ಮಕ್ಕಳಿಲ್ಲದಿರುವುದಕ್ಕೆ ಯಾವುದೇ ಬೇಸರವಿಲ್ಲ. ನಾನು ಇನ್ನು ಮುಂದೆ ನನ್ನ ಸ್ವಂತ ಮಗುವನ್ನು ಹೊಂದಲು ಬಯಸುವುದಿಲ್ಲ. ಆದರೆ ಸುಂದರವಾಗಿ ಕಾಣಲು ಬಯಸುವುದು ಏಕೆ ತಪ್ಪು?" ಅವರು ಕೇಳುತ್ತಾರೆ.

ದಿನಕಳೆದಂತೆ, ಸಂಬಂಧಿಕರು ಮದುವೆಗಳು, ನಾಮಕರಣ ಮತ್ತು ಕುಟುಂಬ ಕೂಟಗಳಿಗೆ ಅವರನ್ನು ಆಹ್ವಾನಿಸುವುದನ್ನು ನಿಲ್ಲಿಸಿದರು ಇದರೊಂದಿಗೆ ಸಾಮಾಜಿಕ ಬಹಿಷ್ಕಾರ ಪೂರ್ಣಗೊಂಡಿತು. “ಜನರು ನನ್ನ ಗಂಡ ಮತ್ತು ಮೈದುನರನ್ನು ಮಾತ್ರ ಆಹ್ವಾನಿಸುತ್ತಾರೆ. ನನ್ನ ಗಂಡನಿಗೆ ದುರ್ಬಲ ವೀರ್ಯವಿದೆ ಎಂದು ಅವರಿಗೆ ತಿಳಿದಿಲ್ಲ. ನಾನು ವ್ಯಾನ್ಜ್ [ಬಂಜೆ] ಅಲ್ಲ. ಅವರಿಗೆ ಅವನ ಬಗ್ಗೆ ತಿಳಿದಿದ್ದರೆ, ಅವರು ಅವನನ್ನು ಆಹ್ವಾನಿಸುವುದನ್ನು ನಿಲ್ಲಿಸುತ್ತಿದ್ದರೆ?” ಗೀತಾ ಕೇಳುತ್ತಾರೆ.

ಕವರ್ ಇಲ್ಲಸ್ಟ್ರೇಷನ್: ಪ್ರಿಯಾಂಕಾ ಬೋರಾರ್ ಹೊಸ ಮಾಧ್ಯಮ ಕಲಾವಿದೆ. ಹೊಸ ಪ್ರಕಾರದ ಅರ್ಥ ಮತ್ತು ಅಭಿವ್ಯಕ್ತಿಯನ್ನು ಕಂಡುಹಿಡಿಯಲು ತಂತ್ರಜ್ಞಾನವನ್ನು ಪ್ರಯೋಗಿಸುತ್ತಿದ್ದಾರೆ. ಅವರು ಕಲಿಕೆ ಮತ್ತು ಆಟಕ್ಕೆ ಎಕ್ಸ್‌ಪಿರಿಯೆನ್ಸ್ ವಿನ್ಯಾಸ‌ ಮಾಡುತ್ತಾರೆ. ಸಂವಾದಾತ್ಮಕ ಮಾಧ್ಯಮ ಇವರ ಮೆಚ್ಚಿನ ಕ್ಷೇತ್ರ. ಸಾಂಪ್ರದಾಯಿಕ ಪೆನ್ ಮತ್ತು ಕಾಗದ ಇವರಿಗೆ ಹೆಚ್ಚು ಆಪ್ತವಾದ ಕಲಾ ಮಾಧ್ಯಮ.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಫೌಂಡೇಷನ್ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳಿಸಿ

ಅನುವಾದ: ಶಂಕರ ಎನ್. ಕೆಂಚನೂರು

Jyoti Shinoli is a Senior Reporter at the People’s Archive of Rural India; she has previously worked with news channels like ‘Mi Marathi’ and ‘Maharashtra1’.

Other stories by Jyoti Shinoli
Illustration : Priyanka Borar

Priyanka Borar is a new media artist experimenting with technology to discover new forms of meaning and expression. She likes to design experiences for learning and play. As much as she enjoys juggling with interactive media she feels at home with the traditional pen and paper.

Other stories by Priyanka Borar
Editor : Hutokshi Doctor
Series Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N Kenchanuru

Shankar N. Kenchanuru is a poet and freelance translator. He can be reached at [email protected].

Other stories by Shankar N Kenchanuru